ಹೊಳೆಹೊನ್ನೂರು: ಆರು ವರ್ಷಗಳ ಹಿಂದೆ ಸಮೀಪದ ಹಂಚಿನ ಸಿದ್ದಾಪುರ ಗ್ರಾಮದಲ್ಲಿ ಮಹಿಳೆಯನ್ನು ಕಿಚಾಯಿಸಿ, ಅವರ ಕುಟುಂಬದವರ ಮೇಲೆ ಹಲ್ಲೆ ನಡೆಸಿದ ಕಾರಣಕ್ಕೆ 10 ಜನರಿಗೆ ಭದ್ರಾವತಿಯ ಒಂದನೆ ಸೆಷನ್ಸ್ ಹಾಗೂ ಜೆಎಂಎಫ್ಸಿ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಹಾಗೂ 8,000 ದಂಡ ಮತ್ತು ಗಾಯಾಳುಗಳಿಗೆ 80,000 ನೀಡುವಂತೆ ಆದೇಶಿಸಿದೆ.
ಗ್ರಾಮದ ರುದ್ರೇಶ್, ವಿಶ್ವ, ಶಿವು, ಗಿರೀಶ್, ಶಶಿಧರ್, ಮಧು, ಶೇಖರಪ್ಪ, ರಾಜಪ್ಪ, ಮಲ್ಲಿಕಾ, ಹರೀಶ ಶಿಕ್ಷೆಗೊಳಗಾದ ಅಪರಾಧಿಗಳು.
ಏನಿದು ಪ್ರಕರಣ?
6 ವರ್ಷಗಳ ಹಿಂದೆ ಗ್ರಾಮದ ಸಾಕ್ಷಿ ಅಭಿಲಾಷ್ ಅವರು ಶಿವರಾತ್ರಿ ಹಬ್ಬದ ಅಂಗವಾಗಿ ದೇವಸ್ಥಾನಕ್ಕೆ ಹೋದಾಗ ರುದ್ರೇಶ್ ಹಾಗೂ ಇತರರು ಸೇರಿ ಅವರನ್ನು ನೋಡಿ ಕಿಚಾಯಿಸಿ, ಅವಹೇಳನವಾಗಿ ಮಾತನಾಡಿದ್ದರು.
ಅಲ್ಲದೇ ಗುಂಪು ಕಟ್ಟಿಕೊಂಡು ಸಾಕ್ಷಿ ಅವರ ಮನೆಯೊಳಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ, ಸಾಕ್ಷಿ ಅವರ ತಾಯಿ ಅಜ್ಜಿ ಮತ್ತು ಅಕ್ಕನನ್ನೂ ಮೈ ಕೈ ಮುಟ್ಟಿ ಎಳೆದಾಡಿದ್ದರು. ಓಮಿನಿಯ ಹಿಂಭಾಗದ ಗ್ಲಾಸ್ ಜಖಂಗೊಳಿಸಿ, ಮನೆಯ ಹೊರಗೆ ಇದ್ದ ಸಿ.ಸಿ.ಟಿ.ವಿ ಕ್ಯಾಮೆರಾವನ್ನು ಕಿತ್ತು ಹಾಕಿದ್ದರು.
ಈ ಸಂದರ್ಭದಲ್ಲಿ ಗಲಾಟೆ ಬಿಡಿಸಲು ಹೋದ ಪಕ್ಕದ ಮನೆಯ ರಾಜಪ್ಪ ಅವರ ಮೇಲೂ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದರು. ಈ ಬಗ್ಗೆ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಎಸ್ಐ ಕೃಷ್ಣ ನಾಯ್ಕ ಪ್ರಕರಣದ ತನಿಖೆ ನಡೆಸಿದ್ದರು. ಸರ್ಕಾರದ ಪರವಾಗಿ ತಿಪ್ಪೇಶ್ ರಾವ್ ವಾದ ಮಂಡಿಸಿದ್ದರು.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com













