ಶಿವಮೊಗ್ಗ: ನಗರದಲ್ಲಿ ಮಧ್ಯರಾತ್ರಿಯಲ್ಲಿ ಗುಡುಗು, ಮಿಂಚು ಸಿಡಿಲಿನೊಂದಿಗೆ ಸುರಿದ ಭಾರಿ ಮಳೆಗೆ ಶರಾವತಿ ನಗರದ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳ ನಿದ್ದೆಗೆಡಿಸಿದ್ದು ಒಂದುಕಡೆಯಾದರೆ ಇನ್ನೊಂದು ಕಡೆ ಆಲ್ಕೋಳದಲ್ಲಿರುವ ಎಫ್ ಸಿ ಐ (ಭಾರತೀಯ ಆಹಾರ ನಿಗಮ) ಕಚೇರಿಯ ಬೃಹದಾಕಾರದ ಕಾಂಪೌಂಡ್ ರಸ್ತೆ ಮೇಲೆ ಉರುಳಿ ಬಿದ್ದ ಘಟನೆ ನಡೆದಿದೆ.

ಶರಾವತಿ ನಗರದಲ್ಲಿ ಸುಮಾರು 10ರಿಂದ 15 ಮನೆಗಳಿಗೆ ಗಲೀಜು ನೀರು ನುಗ್ಗಿದೆ. ಅದರಂತೆ
ಎಫ್ಸಿಐ ಕಾಂಪೌಂಡ್ ಸಹ ಕುಸಿದು ಬಿದ್ದ ಪರಿಣಾಮ ಟಾಟಾ ಏಸ್ ಸರಕು ಸಾಗಾಣೆ ವಾಹನದ ಮೇಲೆ ಗೋಡೆ ಕುಸಿದು ಬಿದ್ದು ವಾಹನವು ಸಂಪೂರ್ಣ ಜಖಂಗೊಂಡಿದ್ದು, ವಿದ್ಯುತ್ ಕಂಬ ಸಹ ಧರೆಗೆ ಉರುಳಿಬಿದ್ದಿದೆ.
ಸಾಗರ ರಸ್ತೆಯಲ್ಲಿರುವ ಎಸ್ ಎಸ್ ಇಂಡಸ್ಟ್ರಿಯಲ್ ಗೆ ಮಳೆ ನೀರು ನುಗ್ಗಿದ್ದು, ತಂತಿಗಳು ಮತ್ತು ಇತರೆ ವಸ್ತುಗಳಿಗೆ ಮಳೆ ನೀರು ನುಗ್ಗಿ ಹಾನಿಗೊಳಗಾಗಿದೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗಳು ನೀರನ್ನು ಫ್ಲೋಟಿಂಗ್ ಪಂಪ್ ಸಹಾಯದಿಂದ ಹೊರಕ್ಕೆಹಾಕಿದ್ದಾರೆ. ಈ ಕಾರ್ಯಚರಣೆಯಲ್ಲಿ ಅಧಿಕಾರಿ ಸಿಬ್ಬಂದಿಗಳಾದ ಹುಸೇನ್, ನೂರುಲ್ಲಾ, ಸುನಿಲ್, ಸತೀಶ್, ಅಭಿಷೇಕ್ ಭಾಗಿಯಾಗಿದ್ದರು.














