ಶಿವಮೊಗ್ಗ : ಸಾಹಿತ್ಯಕ್ಕೆ ತಿಂಗಳ ಚಂದಿರನ ಮೆರುಗು ನೀಡುವ ಸಾಹಿತ್ಯ ಹುಣ್ಣಿಮೆ ಲೋಕ ಹಿತದ ಜೊತೆಗೆ ನಾಡ ಸೇವೆಯಾಗಿದೆ ಎಂದು ಖ್ಯಾತ ಚಲನಚಿತ್ರ ನಟ ಸುಚೇಂದ್ರ ಪ್ರಸಾದ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀಗಂಧ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಸೋಮವಾರ ಸಂಜೆ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ 251 ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಂಸ್ಕೃತಿಕ ನಗರಕ್ಕೆ 251 ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಸಂಭ್ರಮ ನೋಡಿ ಸಂತೋಷವಾಗಿದೆ. ಕನ್ನಡದ ಕೆಲಸ ಸೇವೆಯೆಂದು ಯಾರೇ ಮಾಡಿದರು ಲೋಕಹಿತದ ಜೊತೆಗೆ ನಾಡಸೇವೆಗೆ ಬದ್ಧರಾಗಿ ಕೆಲಸ ಮಾಡುವ ಗುಣವನ್ನು ಮೆಚ್ಚಲೇಬೇಕು. ಕನ್ನಡದ ಬಗ್ಗೆ, ಅದರ ಒಳಿತಿನ ಬಗ್ಗೆ ಎಲ್ಲರಲ್ಲೂ ಕಾಳಜಿಯಿದೆ. ಕನ್ನಡ ಬಳಸುವಲ್ಲಿ ಕೊಂಚ ಉದಾಸೀನತೆ ಕಾಣುತ್ತಿದ್ದೇವೆ. ಕನ್ನಡ ಭಾಷೆ ಸಾಯೊಲ್ಲ, ಕನ್ನಡ ಬಳಸದವರು ಸತ್ತಾರು. ಕನ್ನಡ ಸಂಸ್ಕಾರದಿಂದ ಮಾತ್ರ ದಕ್ಕುತ್ತದೆ. ಭಾಷೆಯ ವಿಚಾರದಲ್ಲಿ ಹಿರಿಯರು ಕಿರಿಯರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕಾಗಿದೆ. ಅಂತಹ ಪರಿವರ್ತನಾ ಕಾರ್ಯಕ್ಕೆ ಸಾಹಿತ್ಯ ಹುಣ್ಣಿಮೆ ಪೂರಕವಾಗಿದೆ ಎಂದು ಹೇಳಿದರು.
ಆತಿಥ್ಯ ವಹಿಸಿದ್ದ ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಮಾತನಾಡಿ, ಸಾಹಿತ್ಯ, ಸಾಂಸ್ಕೃತಿಕ, ಕನ್ನಡ ಭಾಷೆಗಾಗಿ ತಮ್ಮ ಇಡೀ ಜೀವನವನ್ನೇ ಸವೆಸುತ್ತಿರುವ ಡಿ.ಮಂಜುನಾಥ ಸೇವೆ ಶ್ಲಾಘನೀಯ. ಮುಂದೆ ಅವರು ರಾಜ್ಯ ಕಸಾಪ ಅಧ್ಯಕ್ಷರಾಗಲಿ ಎಂದು ಹಾರೈಸಿದರು.
ಪ್ರಾಸ್ತಾವಿಕವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಡಿ. ಮಂಜುನಾಥ ಮಾತನಾಡಿ, ಕನ್ನಡ ಭಾಷೆ ಅತ್ಯಂತ ಶ್ರೀಮಂತವಾಗಿದೆ. ಅದನ್ನು ಬಳಸದೇ, ಕಲಿಯದೆ ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಅನುತ್ತೀರ್ಣರಾಗುವುದು ಕಂಡಾಗ ನೋವಾಗುತ್ತದೆ. ಭಾಷೆಯ ಮಹತ್ವ, ಸಾಹಿತ್ಯದೆಡೆಗೆ ಆಕರ್ಷಣೆ ಮಾಡಲು ನಿರಂತರ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.
ದಿವ್ಯಸಾನಿಧ್ಯ ವಹಿಸಿದ್ದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಸಾಹಿತ್ಯ ಹುಣ್ಣಿಮೆ, ಸಾಹಿತ್ಯ ಗ್ರಾಮ, ಮಕ್ಕಳ ಸಾಹಿತ್ಯ ಸಮ್ಮೇಳನ ಇವೆಲ್ಲವೂ ಬಹಳ ಅರ್ಥಪೂರ್ಣ ಕಾರ್ಯಕ್ರಮಗಳು. ಅವುಗಳ ಅನುಷ್ಠಾನ ಸುಲಭದ ಹಾದಿಯಲ್ಲ. ಒಳ್ಳೆಯ ಚಿಂತನೆ, ಸದ್ಭಾವನೆಯ ಜೊತೆಯಲ್ಲಿ ನಮ್ಮೆಲ್ಲರನ್ನೂ ಸಾಹಿತ್ಯದತ್ತ ಕರೆದುಕೊಂಡು ಹೋಗುವ ಕರ್ಮಯೋಗಿ ಡಿ. ಮಂಜುನಾಥ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಕಸಾಪ ಹಿರಿಯ ಸದಸ್ಯರಾದ ಟಿ.ಆರ್. ಅಶ್ವಥನಾರಾಯಣ ಶೆಟ್ಟಿ ಅವರನ್ನು ಹಾಗೂ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರಾದ ಡಿ. ಮಂಜುನಾಥ ಅವರನ್ನು ಸನ್ಮಾನಿಸಲಾಯಿತು.
ಉದ್ಯಮಿ ಹೊಸತೋಟ ಸೂರ್ಯನಾರಾಯಣ, ಉಮೇಶ್ ಆರಾಧ್ಯ, ಶೋಭಾ ವೆಂಕಟರಮಣ, ವಿಜಯಲಕ್ಷ್ಮಿ ಈಶ್ವರಪ್ಪ, ಹಾಸ್ಯ ಕಲಾವಿದರಾದ ಉಮೇಶ್ ಗೌಡರು ಭದ್ರಾವತಿ ಉಪಸ್ಥಿತರಿದ್ದರು.
ಯುವ ನಾಯಕರಾದ ಕೆ.ಈ. ಕಾಂತೇಶ್ ಸ್ವಾಗತಿಸಿ, ದೀಪಕ್ ಸಾಗರ, ಸಿ. ಎಂ. ನೃಪತುಂಗ ನಿರೂಪಿಸಿದರು.
ಸಾಹಿತ್ಯ ಹುಣ್ಣಿಮೆಯಲ್ಲಿ ವಿಶೇಷವಾಗಿ ನಗರದ 250 ಕ್ಕೂ ಹೆಚ್ಚು ಹಾಡುಗಾರರು ಒಮ್ಮೆಲೆ ನಾಡಗೀತೆ ಹಾಡಿದ್ದು, ಜನಮನ ಆಕರ್ಷಿಸಿತು. ಬಾಲ ಪ್ರತಿಭೆಗಳಾದ ಹೊಸನಗರದ ಆರ್ವಿ, ಶಿಕಾರಿಪುರದ ಡಿ. ಎಸ್. ಸ್ಕಂದ, ಶಿವಮೊಗ್ಗದ ನೇಹಾ ರಾಜಪ್ಪ ಗಾಯನ ಕಾರ್ಯಕ್ರಮ ನಡೆಸಿದರು.
ಗಾಯಕರಾದ ನಳಿನಾಕ್ಷಿ ತಂಡ, ಲಲಿತಮ್ಮ ವಿಠ್ಠಲದಾಸ್ ತಂಡ, ಲಕ್ಷ್ಮೀ ಮಹೇಶ್ ತಂಡ, ಉಮಾ ದಿಲಿಪ್ ತಂಡ, ಡಾ. ನೇತ್ರಾವತಿ ತಂಡ, ಸುಶೀಲಾ ಷಣ್ಮುಗಂ ತಂಡ ವಿವಿಧ ಗೀತೆಗಳನ್ನು ಹಾಡಿದರು. ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆ ನೂರು ಮಕ್ಕಳು ವಿದೂಷಿ ಉಮಾದಿಲಿಪ್ ಅವರು ರಚಿಸಿದ ಕವನಗಳಿಗೆ ರಾಗ ಸಂಯೋಜನೆ, ನೃತ್ಯ ಸಂಯೋಜನೆ, ನಿರ್ದೇಶನದಲ್ಲಿ ಹಾಡು, ನೃತ್ಯ ನಡೆಸಿಕೊಟ್ಟರು.
ಪುಷ್ಪ ಫರ್ ಫಾರ್ಮಿಂಗ್ ಆರ್ಟ್ಸ್ ಮಕ್ಕಳು ಜನಪದ ಗೀತೆಗಳಿಗೆ ನೃತ್ಯ ಮಾಡಿದರು. ಕವಿಗಳಾದ ಬಿ. ಟಿ. ಅಂಬಿಕಾ, ಲೀಲಾವತಿ ಯುವರಾಜ್, ಕೆ. ಎನ್. ರಮೇಶ್ ಭಾಗವಹಿಸಿದ್ದರು. ಡಾ||ನಿವೇದಿತಾ ಹೆಗಡೆ, ಶಶಿಧರ ಹನಿಗವನ ವಾಚಿಸಿದರು.
ನಟ ಸುಚೇಂದ್ರ ಪ್ರಸಾದ್ ನಿರ್ದೇಶಿಸಿ ಅಭಿನಯಿಸಿದ ವೀಣಾ ಬನ್ನಂಜೆರವರ ಕೃತಿ ಆಧಾರಿತ ನಾಟಕ ‘ನನ್ನ ಪಿತಾಮಹ’ ನಾಟಕ ಪ್ರದರ್ಶನಗೊಂಡಿತು.