12-1-1863 ರ ಇತಿಹಾಸ ಎಂದೂ ಮರೆಯಲಾರದ ದಿನ. ಅಂದು ಭಾರತೀಯ ಸನಾತನ ಸಂಸ್ಕೃತಿಯ ಪುನರುತ್ಥಾನದ ಹರಿಕಾರ, ಅಪ್ರತಿಮ ವಾಗ್ಮಿ, ಅನುಪಮ ಮಾನವತಾವಾದಿ ಸ್ವಾಮಿ ವಿವೇಕಾನಂದ ಹುಟ್ಟಿದ ದಿನ. ವಿವೇಕಾನಂದರ 164ನೇ ವರ್ಷಾಚರಣೆಯಲ್ಲಿದ್ದೇವೆ. ಯುವ ಜನರಿಗೆ ಪ್ರೇರಕ ಶಕ್ತಿಯಾದ, ನವ ಚೈತನ್ಯದ ಚಿಲುಮೆಯಾದ ವಿವೇಕಾನಂದರ ಬಗ್ಗೆ ಎಷ್ಟೇ ಬರೆದರೂ ಸಾಲದು.
ಇತ್ತೀಚಿಗೆ ಭಾರತದಲ್ಲಿ ಕೂಡ ಫೆಬ್ರವರಿ 14 ರಂದು ವ್ಯಾಲೆಂಟೈನ್ಸ್ ಡೇ ಅಥವಾ ಪ್ರೇಮಿಗಳ ದಿನ ಆಚರಿಸಲಾಗುತ್ತಿದೆ. ಇದು ನಮ್ಮ ಸಂಸ್ಕೃತಿಯಲ್ಲ, ಸಂಸ್ಕೃತಿಯ ನೆಲೆವೀಡು, ಭಾರತದಲ್ಲಿ ಜನಿಸಿದ ನಾವು ಪ್ರತಿನಿತ್ಯ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ ಎಂದು ಹೇಳುತ್ತೇವೆ. ನಾವು ಇಷ್ಟು ದಿನ ಪ್ರತ್ಯೇಕವಾಗಿ ಅಮ್ಮಂದಿರ ದಿನ, ಅಪ್ಪಂದಿರ ದಿನವನ್ನು ಆಚರಿಸುತ್ತಿರಲಿಲ್ಲ. ನಿತ್ಯವೂ ನಾವು ಮಾತಾ ಪಿತೃಗಳನ್ನು ಗುರುಗಳನ್ನು ಭಗವಂತನೆಂದೇ ಪೂಜಿಸುತ್ತಿದ್ದೆವು.
ಉದಾರೀಕರಣ, ಜಾಗತೀಕರಣದ ಫಲವಾಗಿ, ಪಾಶ್ಚಾತ್ಯ ಅನುಕರಣೆಯಿಂದ ಮದರ್ಸ್ ಡೇ, ಪಾದರ್ಸ್ ಡೇ ಗಳೂ ಭಾರತಕ್ಕೆ ಕಾಲಿಟ್ಟಿವೆ. ಇದೆಲ್ಲಾ ಸರಿ ಈ ದೇಶದ ಮುಂದಿನ ಪ್ರಜೆಗಳಾದ ಯುವ ಜನರಿಗೆ ಒಂದು ದಿನ ಬೇಡವೇ. ಅಂಥ ಒಂದು ದಿನವನ್ನು ಯುವಕರಿಗೆ ಕೊಟ್ಟ ಶ್ರೇಯಸ್ಸು ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ವಿವೇಕಾನಂದರ ಜನ್ಮದಿನವಾದ ಜನವರಿ 12ರ ಇಂದಿನ ದಿನವನ್ನು ರಾಷ್ಟ್ರೀಯ ಯುವ ದಿನ ಎಂದು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಕೂಡ ವಿವೇಕಾನಂದರ ಜಯಂತಿಯನ್ನು ಯುವ ದಿನವೆಂದೇ ಆಚರಿಸುತ್ತಾರೆ. ಇದಕ್ಕೆ ವಿಶ್ವಮನ್ನಣೆಯೂ ದೊರೆತಿದೆ.
ಇಡೀ ಮನುಕುಲದ ಯುವ ಜನತೆಗೆ ಆದರ್ಷ ಪ್ರಾಯರಾದ ಸ್ವಾಮಿವಿವೇಕಾನಂದರ ಸಾಧನೆ ಅಪಾರ.
ರಾಷ್ಟ್ರಪಿತ ಮಹಾತ್ಮಗಾಂಧಿ ಹೇಳುವಂತೆ ಶ್ರೀಕೃಷ್ಣನನ್ನು ಅರಿಯ ಬೇಕೆಂದರೆ ಭಗವದ್ಗೀತೆಯನ್ನು ಓದಿ, ಭಾರತ ತಿಳಿಯಬೇಕೆಂದಿದ್ದರೆ ಸ್ವಾಮಿ ವಿವೇಕಾನಂದರ ಕುರಿತು ಓದಿ ಎಂದಿದ್ದರು, ಅಂದರೆ ಸ್ವಾಮೀಜಿ ಅವರ ಬದುಕೇ ಇಡೀ ಭಾರತದ ಚಿತ್ರಣ. ಅವರ ಜೀವನವೇ ಒಂದು ಯಶೋಗಾಥೆ, ನರೇಂದ್ರರೇನೂ ಹುಟ್ಟು ಸನ್ಯಾಸಿಯಲ್ಲ. ಅವರು ಈ ವಿಶ್ವದ ಗಮನ ಸೆಳೆದಿದ್ದು ಕೇವಲ 7 ವರ್ಷಗಳ ಅವಧಿಯಲ್ಲಿ. ಅವರು ಯುಗಪುರುಷರೆನಿಸಿದ್ದು 1893-1900 ರ ನಡುವಿನ ಕೇವಲ ಸಪ್ತ ವರ್ಷಗಳಲ್ಲಿ, ಆ ಸಪ್ತ ವರ್ಷದಲ್ಲಿ ಅವರ ಕೀರ್ತಿ, ಖ್ಯಾತಿ ಸಪ್ತದ್ವೀಪಾ ವಸುಂದರಾ ಎನ್ನುವಂತೆ ಇಡೀ ವಿಶ್ವಕ್ಕೆ ಹಬ್ಬಿತ್ತು.ವಿಶ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡ ಬಳಿಕ ಅಮೆರಿಕ, ಇಂಗ್ಲೆಂಡ್, ಯುರೋಪ್ ಹಾಗೂ ಭಾರತದಲ್ಲಿ ಅವರು ಮಾಡಿದ ಭಾಷಣ, ಬರೆದ ಪತ್ರಗಳು, ನಡೆಸಿದ ಚರ್ಚೆ ಇಂದಿಗೂ ಆಕರ ಗ್ರಂಥಗಳಾಗಿವೆ. ವಿಶ್ವ ಜಾಗೃತಿಯ ಸೋಪಾನಗಳಾಗಿವೆ. ಹೀಗಾಗಿ ವಿಶ್ವ ಅವರನ್ನು ಯುಗಾಚಾರ್ಯ ಎಂದು ಗುರುತಿಸಿದೆ. ಕಗ್ಗದ ಕವಿ ಶ್ರೇಷ್ಠ ಡಿ.ವಿ.ಜಿ. ಹೇಳುವಂತೆ ಸ್ವಾಮಿ ವಿವೇಕಾನಂದರು ಸ್ವಾಭಾವಿಕವಾಗಿ ಅದ್ಭುತ ಪ್ರತಿಭಾ ಸಂಪನ್ನರು. ಅವರ ಬುದ್ದಿ ವಿದ್ಯುದ್ವೇಗದಿಂದ ಸಂಚಾರ ಮಾಡತಕ್ಕದ್ದು, ಅದು ಒಮ್ಮೆ ಲೀಲೆಯಿಂದ ಸಮುದ್ರ ತಳಕ್ಕೆ ಧುಮುಕುವುದು, ಇನ್ನೊಮ್ಮೆ ಪಕ್ಷಿಯಂತೆ ಗಿರಿ ಶಿಖರಕ್ಕೆ ಹಾರುವುದು, ಮತ್ತೊಮ್ಮೆ ಹುಲ್ಲುಗಾವಲಿನ ಮೇಲೆ ಮಂದ ಮಾರುತದಂತೆ ಸುಳಿದಾಡುವುದು, ಒಂದು ತೀಕ್ಷ್ಣತೆ, ಒಂದು ಲಘತೆ, ಒಂದು ಆವೇಶ, ಒಂದು ವಿಲಾಸ – ಇವು ಆ ಬುದ್ಧಿಯ ಗುಣಗಳು. ಅವರು ಸಂಸ್ಕೃತದಲ್ಲಿ ವ್ಯಾಕರಣ ತರ್ಕಶಾಸ್ತ್ರಗಳನ್ನು ಸಾಂಗವಾಗಿ ಅಭ್ಯಾಸ ಮಾಡಿದ್ದರು. ಹಾಗೆಯೇ ಇಂಗ್ಲಿಷ್ ನಲ್ಲಿ ಕಾವ್ಯ ಇತಿಹಾಸಗಳನ್ನು, ವಿಜ್ಞಾನ ಶಾಸ್ತ್ರ, ತತ್ವ ಮೀಮಾಂಸೆಗಳನ್ನು ವಿಸ್ತಾರವಾಗಿ ಪರಾಮರ್ಶಿಸಿ ಸ್ವಾಧೀನಪಡಿಸಿಕೊಂಡಿದ್ದರು. ಈ ಉಭಯ ವಿದ್ಯಾ ಪ್ರಾವೀಣ್ಯಕ್ಕೆ ಅನುರೂಪವಾದ ವಾಗ್ದೋರಣೆ, ತದನುಗುಣವಾದ ಉತ್ತಾಲಧ್ವನಿ, ಉನ್ನತವಾದ ವರ್ಚಸ್ವಿಯಾದ ಗಂಭೀರಾಕಾರ, ಸಕಲ ಜನಮನೋಗ್ರಾಹಿಯಾದ ಹಾಸ್ಯ ವಿನೋದ ರಸಿಕತೆ, ಹೃದಯವಿದ್ರಾವಕವಾದ ಗಾನ ಮಾಧುರ್ಯ ಇದೆಲ್ಲವೂ ಅವರಲ್ಲಿ ಸಮ್ಮಿಳಿತವಾಗಿದ್ದವು ಎಂದಿದ್ದರು.
“ಹೊಸ ಸೂರ್ಯನ ಉದಯ”: ಅಜಿತ್ ಸಿಂಹರ ಆರ್ಥಿಕ ನೆರವು ಪಡೆದು 1893ರ ಮೇ 31 ರಂದು ಮುಂಬೈ ಬಂದರಿನಿಂದ ಹೊರಟು ಚೀನಾ, ಹಾಂಕಾಂಗ್ ಮತ್ತು ಜಪಾನ್ ಮಾರ್ಗವಾಗಿ ಅಮೆರಿಕಕ್ಕೆ ತಲುಪಿದ ವಿವೇಕಾನಂದರು 1893 ರ ಸೆಪ್ಟೆಂಬರ್ 11 ರಂದು ಸೋಮವಾರ ಚಿಕಾಗೋ ನಗರದಲ್ಲಿ ನಡೆದ ಸರ್ವ ಧರ್ಮಗಳ ಸಮ್ಮೇಳನದಲ್ಲಿ ಮಾಡಿದ ಕೆಲವೇ ನಿಮಿಷಗಳ ಭಾಷಣ ಅವರನ್ನು ಯುಗಪುರುಷ ರನ್ನಾಗಿ ಮಾಡಿತು. ಭಾರತದ ಸನಾತನ ಧರ್ಮದ ಹಿರಿಮೆ ವಿಶ್ವಕ್ಕೆ ತಿಳಿಯಿತು. ಅಂದು ವಿಶ್ವದಲ್ಲಿ ಹೊಸ ಸೂರ್ಯನ ಉದಯವಾಗಿತ್ತು.
ಶ್ರೀ ರಾಮಕೃಷ್ಣ ಪರಮಹಂಸರು ಇದಕ್ಕೆ ಕಾರಣ. ನರೇಂದ್ರ ದತ್ತರು ವಿವೇಕಾನಂದರಾದದ್ದೇ ರಾಮಕೃಷ್ಣ ಪರಮಹಂಸರಿಂದ. ಬಾಲ್ಯದಿಂದಲೂ ದೇವರ ಅನ್ವೇಷಣೆಯಲ್ಲಿ ತೊಡಗಿದ್ದ ನರೇಂದ್ರ ದತ್ತರು ದೇವರಿದ್ದಾನೆಯೇ? ಅವನಿದ್ದಲ್ಲಿ ಅವನು ಯಾವ ರೀತಿ ಇದ್ದಾನೆ? ಇದ್ದರೆ ನಮಗೆಕೆ ಕಾಣುವುದಿಲ್ಲ? ಮನುಷ್ಯನೊಂದಿಗೆ ಅವನ ಸಂಬಂಧವೇನು? ಎಲ್ಲೆಲ್ಲೂ ಅಕ್ರಮ, ಅನ್ಯಾಯ ತುಂಬಿರುವ ಈ ವಿಶ್ವವನ್ನು ಅವನು ನಿರ್ಮಿಸಿದನೇಕೆ? ಎಂಬಿತ್ಯಾದಿ ಪ್ರಶ್ನೆ ಕೇಳಿ ತಾಯಿ-ತಂದೆ, ಗುರುಗಳಿಗೆ ಇರುಸು ಮುರುಸು ಉಂಟು ಮಾಡುತ್ತಿದ್ದರು.
ಬಾಲ್ಯದಿಂದಲೂ ಬಲು ತಂಟೆ ಕೋರರಾಗಿದ್ದ ನರೇಂದ್ರ. ತಾಯಿ ಬೈದರೂ, ಹೊಡೆದರು ಜಗ್ಗುತ್ತಿರಲಿಲ್ಲ, ಆದರೆ, ನೀರು ಚಿಮುಕಿಸಿ ಶಿವ ಶಿವ ಎಂದರೆ ಮಂತ್ರಮುಗ್ಧರಾಗುತ್ತಿದ್ದರಂತೆ ತಟಸ್ಥರಾಗಿ ಬಿಡುತ್ತಿದ್ದರು. ನರೇಂದ್ರರು ಚಿಕ್ಕವರಾಗಿದ್ದಾಗ, ಒಂದು ದಿನ ಬೆಳಿಗ್ಗೆ ಹನುಮಂತ ಎಲ್ಲಿದ್ದಾನೆ ತೋರಿಸು ಎಂದು ಹಠ ಹಿಡಿದರು, ಆಗ ತಾಯಿ ಊರಂಚಿನ ಬಾಳೆಯ ತೋಟದಲ್ಲಿದ್ದಾನೆ ಎಂದು ಹೇಳಿ ಕಾಟ ತಪ್ಪಿಸಿಕೊಂಡರು. ಆದರೆ ತಾಯಿಯ ಮಾತನ್ನು ವೇದವಾಕ್ಯ ಎಂದು ತಿಳಿದ ನರೇಂದ್ರರು ಬಾಳೆಯ ತೋಟಕ್ಕೆ ಹೋಗಿ ಹುಡುಕಾಡಿದರು, ಹನುಮನಿಗಾಗಿ ಕಾದು ಕುಳಿತರು. ಸಂಜೆಯಾಯಿತು, ರಾತ್ರಿಯಾಯಿತು ವಿಚಲಿತರಾಗದೆ ಆಂಜನೇಯ ಬಂದೇ ಬರುತ್ತಾನೆ ಎಂದು ನಿರೀಕ್ಷಿಸಿದರು. ರಾತ್ರಿಯಾದರೂ ಮಗ ಮನೆಗೆ ಬಾರದಿದ್ದಾಗ ಹುಡುಕಾಡಿದ ತಾಯಿ ಭುವನೇಶ್ವರಿದೇವಿ ಬಾಳೆಯ ತೋಟಕ್ಕೆ ಹೋಗಿ ಶ್ರೀ ರಾಮದೇವರ ಆಣತಿಯ ಮೇರೆಗೆ ಹನುಮ ಇಂದು ಬೇರೆಡೆ ಹೋಗಿದ್ದಾನೆ. ಇನ್ನೊಂದು ದಿನ ಕಾಣಿಸುತ್ತಾನೆ ಬಾ ಎಂದು ಸಮಾಧಾನ ಮಾಡಿ ಮನೆಗೆ ಕರೆತಂದರು. ತನ್ನ ಮಾತಿನ ಬಗ್ಗೆ, ದೇವರ ಬಗ್ಗೆ ಮಗನಿಗಿರುವ ನಂಬಿಕೆಗೆ ತಾಯಿ ಅವಕ್ಕಾಗಿದ್ದರು.
ಹೀಗೆ ಭಗವಂತನ ಅನ್ವೇಷಣೆಯಲ್ಲಿದ್ದ ನರೇಂದ್ರ ರಿಗೆ ಭಗವಂತನಿದ್ದಾನೆ ಎಂಬ ಉತ್ತರ ಸಿಕ್ಕಿದ್ದು, ಸಾಕ್ಷಾತ್ಕಾರ ವಾಗಿದ್ದು ದಕ್ಷಿಣೇಶ್ವರದಲ್ಲಿ ಶ್ರೀರಾಮಕೃಷ್ಣರ ಶಿಷ್ಯರಾದ ಬಳಿಕ. ಕಾಳಿ ದೇವಿಯನ್ನು ದೇವರೆಂದು ಒಪ್ಪಿದ ನರೇಂದ್ರರನ್ನು 1886 ರಲ್ಲಿ ಪರಮಹಂಸರು ಕೆಲಕಾಲ ನಿರ್ವಿಕಲ್ಪ ಸಮಾಧಿ ಸ್ಥಿತಿಯಲ್ಲಿರಿಸಿ ದೈವ ಸಾಕ್ಷಾತ್ಕಾರ ಮಾಡಿಸಿದರು.1887 ರಲ್ಲಿ ಜನವರಿಯಲ್ಲಿ ವಿರಾಜ ಹೋಮ ಮಾಡಿ ಸನ್ಯಾಸ ಸ್ವೀಕರಿಸಿ ನರೇಂದ್ರರು ಮೊದಲಿಗೆ ಸಚ್ಚಿದಾನಂದ ಎಂಬ ಹೆಸರು ಪಡೆದರು, ನಂತರ ವಿವಿಧೀಶಾನಂದ ಎಂಬ ಹೆಸರು ಪಡೆದು ದೇಶ ಪರ್ಯಟನೆ ಮಾಡಿದರು. 1882 ರಲ್ಲಿ
ಕನ್ಯಾಕುಮಾರಿಗೆ ಬಂದು ಕೊರೆಯುವ ಚಳಿಯಲ್ಲಿ ಸಮುದ್ರದಲ್ಲಿ ಈಜಿ ಕನ್ಯಾಕುಮಾರಿಯ ಬೆಟ್ಟದ ಮೇಲೆ ಶಿಲೆಯಂತೆ ನಿಂತು ಅಖಂಡ ಭಾರತವನ್ನು ಅಡಿಯಿಂದ ಮುಡಿಯವರೆಗೆ ದರ್ಶಿಸಿದರು. ಭಾರತಾಂಬೆಯ ಸಂದೇಶ ಆಲಿಸಿದರು. ಅಮೆರಿಕದಲ್ಲಿ ನಡೆಯಲಿದ್ದ ವಿಶ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ನಿರ್ಧಾರ ಮಾಡಿದರು. ಆಗ ವಿದೇಶ ಪ್ರವಾಸಕ್ಕೆ ನೆರವು ನೀಡಿದ ಖೇತಡಿಯ ಮಹಾರಾಜ ಅಜಿತ್ ಸಿಂಹ ತಮ್ಮಲ್ಲಿ ವಿವೇಕರನ್ನೂ ಮತ್ತು ದರಿದ್ರ ನಾರಾಯಣ ಸೇವೆಯಲ್ಲಿ ಆನಂದವನ್ನು ಪಡೆಯುತ್ತಿದ್ದ ನರೇಂದ್ರರಿಗೆ ವಿವೇಕಾನಂದ ಎಂಬ ಹೆಸರು ನೀಡಿದರು.
ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಯುವಕರಿಗೆ ಕರೆ ಕೊಟ್ಟ ವಿವೇಕಾನಂದರಿಗೆ ಯುವಶಕ್ತಿ ಮೇಲೆ ಅಪಾರವಾದ ನಂಬಿಕೆ ಇತ್ತು. ಯುವಶಕ್ತಿಗೆ ಮಿಗಿಲಾದದ್ದು ಯಾವುದೂ ಇಲ್ಲ. ನನಗೆ ನೂರು ಜನ ಗಟ್ಟಿ ಮುಟ್ಟಾದ ಚೈತನ್ಯ ಸ್ವರೂಪರಾದ ಯುವಕರನ್ನು ಕೊಡಿ. ನಾವು ನವಭಾರತ ನಿರ್ಮಾಣ ಮಾಡುತ್ತೇನೆ ಎನ್ನುತ್ತಿದ್ದ ಗುರುಗಳೇ ಸ್ವಾಮಿ ವಿವೇಕಾನಂದರು.1863 ರ ಜನೆವರಿ 12 ರಂದು ಹುಟ್ಟಿ ತಮ್ಮ 39 ನೇ ವಯಸ್ಸಿನಲ್ಲಿ ಕಣ್ಮರೆಯಾದರೂ. ಭಾರತೀಯರ ಅಧ್ಯಾತ್ಮಿಕ ಬದುಕಿನ ಮೇಲೆ ಬೀರಿದ ಪ್ರಭಾವ ಅಪಾರವಾದುದು.
–ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ.













