ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ.
ಮಲೆನಾಡಿನ ತವರೂರು ಎಂದೇ ಖ್ಯಾತಿ ಪಡೆದಿರುವ ಶಿವಮೊಗ್ಗ ಮಾರಿಕಾಂಬ ಜಾತ್ರೆ ವಿಶಿಷ್ಠವಾದದ್ದು, ಅಷ್ಟೇ ಪ್ರಸಿದ್ದ.ಈಗ ಎರಡು ವರ್ಷಕ್ಕೊಮ್ಮೆ ನಡೆಯುತ್ತಿ ದೆ.ಜಾನಪದ ದೃಷ್ಠಿಯಲ್ಲಿ ಶಕ್ತಿ ದೇವತೆ ಮಾರಿ – ಅಮ್ಮ ಎರಡೂ ಹೌದು. ಜಾನಪದ ಮೂಲಕ ಈ ಶಕ್ತಿ ದೇವತೆಗಳಿಗೆ ಕೆಲವಡೆ ಗುಡಿಗಳಿದ್ದರೂ ತೀರ ಚಿಕ್ಕ ಗುಡಿಗಳು. ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬೆಯ ದೇವಸ್ಥಾನ ವಿಶಾಲ ಮತ್ತು ಭವ್ಯವಾದ ಗುಡಿ ನಿರ್ಮಿಸಲಾಗಿದೆ.
ಶಕ್ತಿದೇವತೆಯ ವಿಕಾಸ ಕ್ರಮ : ದೇವರನ್ನು ಮಾತೆ ಇಲ್ಲವೇ ಪಿತನೆಂದು ಆರಾಧಿಸುವ ಪದ್ಧತಿ ಅತ್ಯಂತ ಪುರಾತನವಾದದು.ಇತರ ದೇಶಗಳಲ್ಲಿ ನಾಗರೀಕತೆ ಬೆಳೆದಂತೆ ಮಾತೃ ದೇವತೆಗಳ ಆರಾಧನ ಪದ್ಧತಿ ಕಣ್ಮರೆಯಾಗುತ್ತಿದ್ದರು,ಭಾರತದಲ್ಲಿ ಮಾತ್ರ ಈ ಉಪಾಸನೆ ಸದೃಢವಾಗಿದೆ. ನಮ್ಮ ದೇಶದಲ್ಲಿ ಸೈಂಧವ ಸಂಸ್ಕೃತಿಯಿಂದ ಹಿಡಿದು, ಆಧುನಿಕ ಯುಗದವರೆಗೂ ಈ ಆರಾಧನೆ ಒಂದಲ್ಲ ಒಂದು ರೀತಿಯಲ್ಲಿ ಅನುಚಾನವಾಗಿ ಬೆಳೆದು ಬಂದಿದೆ.

ಜಾನಪದ ಮೂಲದ ಮಾರಿ ಅಮ್ಮ
ಮಾನವನ ಸಂಸ್ಕೃತಿಯ ಪ್ರಾಥಮಿಕ ಹಂತದಲ್ಲಿ ಜನಸಾಮಾನ್ಯರು ಊರನ್ನು ಕಬಳಿಸುವ ಸಾಂಕ್ರಾಮಿಕ ರೋಗಗಳು, ಕ್ಷಾಮ, ಡಾಮರಗಳೂ, ಮಹೋತ್ಪಾತ್ಯಾದಿ ಪ್ರಕೃತಿಯ ರೌದ್ರ ಮುಖಗಳನ್ನು ಕಂಡು ಭಯದಿಂದ ತತ್ತರಿಸಿದರು. ಈ ಘೋರ ಶಕ್ತಿಗೆ ಭಯ ಭಕ್ತಿಯಿಂದ ತಲೆಬಾಗಿದರೆ, ಪೂಜೆ, ಬಲಿಗಳಿಂದ ತೃಪ್ತಿಗೊಳಿಸಿದರೆ ತಮ್ಮ ಬದುಕಿಗೆ ನೆಮ್ಮದಿಯನ್ನು ಬಗೆದರು.ತಮ್ಮ ಭಕ್ತಿ– ಭಾವವನ್ನು ಪ್ರತ್ಯಕ್ಷವಾಗಿ ವ್ಯಕ್ತಪಡಿಸಲು ಆ ಶಕ್ತಿಗೊಂದು ಉಗ್ರ ಸ್ವರೂಪ ಸೃಷ್ಟಿಸಿ, ಅದ್ಭುತ ಕಥೆ ಕಟ್ಟಿ, ಭಕ್ತಿಯಿಂದ ಪೂಜಿಸಿದರು. ತಮ್ಮ ಪ್ರಭಾವ ಲಯದಲ್ಲಿದ್ದ ಜನತೆಯು ತಲೆ ಬಾಗುವಂತೆ ಮಾಡಿದರು. ಹೀಗೆ ಸಂಸ್ಕೃತಿಯ ಮೊದಲ ಹಂತದಲ್ಲಿ ಅಂತ ಉಗ್ರಸ್ವರೂಪದ ಮಾರಿ, ಕಾಳಿ, ಕರಿಯಮ್ಮ ಮುಂತಾದ ಮಾತೃದೇವತೆಗಳ ಸೃಷ್ಟಿಯಾಗಿರಬೇಕು. ಜನಪದರು ಮಾರಿಯನ್ನು ದೊಡ್ಡಮ್ಮನೆಂದು ಕರೆಯುವುದನ್ನು ಈ ಸಂದರ್ಭದಲ್ಲಿ ಗಮನಿಸಬೇಕು.
ಕೋಟೆ ಶ್ರೀ ಮಾರಿಕಾಂಬೆಯ ಜಾತ್ರೆ ಪ್ರಾರಂಭವಾಗುವುದಕ್ಕಿಂತ ಒಂದು ತಿಂಗಳ ಮೊದಲು ಕಾಡಿಗೆ ಹೋಗಿ ದೇವಿಯ ವಿಗ್ರಹ ಪ್ರತಿಷ್ಠಾಪಿಸಲು ಬೇಕಾಗುವ ವಿಶಿಷ್ಟ ಜಾತಿಯ ಮರದ ಸಾಮಗ್ರಿಗಳನ್ನು ಪೂಜಾ ವಿಧಿ ವಿಧಾನಗಳ ಮೂಲಕ ತಂದು ದೇವಿಯ ವಿಗ್ರಹ ಸುಮಾರು ಹತ್ತರಿಂದ ಹದಿನೈದು ಅಡಿ ಎತ್ತರವಾದ ಶಕ್ತಿದೇವತೆಯ ವಿಗ್ರಹವು ಕರ್ನಾಟಕದಲ್ಲಿಯೇ ಒಂದು ವಿಶಿಷ್ಟವಾದದ್ದು. ಈ ದೃಷ್ಟಿಯಿಂದ ಮಾರಿಕಾಂಬೆಗೆ ಜಾನಪದರು ಕೊಟ್ಟ ದೊಡ್ಡಮ್ಮನೆಂಬ ಹೆಸರು ಅನ್ವರ್ಥವಾಗಿದೆ. ಮೂರ್ತಿ ನಿರ್ಮಾಣದಲ್ಲಿ ವೈದಿಕ ತಂತ್ರಾಗಮಗಳ ಪ್ರಭಾವವಿದೆ. ಸಿಂಹವಾಹಿನಿಯಾದ ದೇವಿಗೆ ಅಷ್ಟ ಭುಜಗಳಿದ್ದು, ತ್ರಿಶೂಲ, ಶಂಖ, ಚಕ್ರಾದಿಗಳನ್ನು ಧರಿಸಿ ನೋಡುಗರ ಗಮನ ಸೆಳೆದಿದ್ದಾಳೆ.

ಶ್ರೀ ಮಾರಿಕಾಂಬ ದೇವತೆಯ ಉತ್ಸವ ಜಾತ್ರೆಗಳು
ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವಕ್ಕೆ ಫೆಬ್ರವರಿ 24ರ ಮಂಗಳವಾರ ಬೆಳಗಿನ ಜಾವ ಚಾಲನೆ ದೊರೆಯಲಿದೆ. ನಸುಕಿನಲ್ಲಿ ವಿಶ್ವಕರ್ಮ ಜನಾಂಗದವರು ತುಂಗಾನದಿಯಲ್ಲಿ ಗಂಗೆ ಪೂಜೆ ಮಾಡುವ ಮೂಲಕ ದೇವಿಯ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ. ಐದು ದಿನಗಳ ಕಾಲ ವೈಭವದಿಂದ ಮಾರಿಕಾಂಬ ದೇವಿ ಜಾತ್ರೆ ನಡೆಯಲಿದ್ದು, ಅಪಾರ ಸಂಖ್ಯೆ ಭಕ್ತರು ಬೆಳಿಗ್ಗೆಯಿಂದಲೇ ದೇವಿಯ ದರ್ಶನ ಪಡೆದುಕೊಳ್ಳಲಿದ್ದಾರೆ.
ಗಾಂಧಿಬಜಾರ್ ನಲ್ಲಿ ದೇವಿಯನ್ನು ಸ್ಥಾಪಿಸಿದ್ದು, ಬಿ. ಬಿ. ರಸ್ತೆಯಲ್ಲಿನ ಬ್ರಾಹ್ಮಣರ ಸಮಾಜದ ನಾಡಿಗರ ಕುಟುಂಬದವರು ಮೊದಲ ಪೂಜೆ ನೆರವೇರಿಸುವ ಮೂಲಕ ಜಾತ್ರಾ ಮಹೋತ್ಸವ ಆರಂಭಗೊಳ್ಳುತ್ತದೆ. ನಾಡಿಗ ಮನೆಯಲ್ಲಿ ಬಾಗಿನ ಪಡೆದು, ಸಮಿತಿಯವರು ಬಾಸಿಂಗದ ಜೊತೆಗೂಡಿ ದೇವಿಗೆ ಅರ್ಪಿಸಿ ಪ್ರಥಮ ಪೂಜೆ ಮಾಡುವರು.ನಂತರ ವಿಶ್ವಕರ್ಮ ಜನಾಂಗದವರಿಂದ ರಾತ್ರಿಯವರೆಗೆ ಪೂಜೆ ನಡೆಯುತ್ತದೆ. ದೇವಿಯ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸಲಿದ್ದು, ಮುತ್ತೈದೆಯರು ಶ್ರೀ ಮಾರಿಕಾಂಬೆಗೆ ಉಡಿ ತುಂಬಿ ಪೂಜೆ ಸಲ್ಲಿಸುವರು.
ಫೆಬ್ರವರಿ 24 ರಿಂದ 28 ರವರಗೆ ಮಾರಿಕಾಂಬ ದೇವಸ್ಥಾನದ ಸಮಿತಿಯಿಂದ ರಾಮಣ್ಣಶ್ರೇಷ್ಟಿ ಪಾರ್ಕಿನಲ್ಲಿ ಪ್ರತಿ ದಿನ ಸಂಜೆ 7 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.8:00 ಗಂಟೆಗೆ ಮಹಾ ಮಂಗಳಾರತಿ ಇರುತ್ತದೆ. ಜಾತ್ರೆ ನಡೆಯುವ 5 ದಿನಗಳಂದು ಅಮ್ಮನವರಿಗೆ ಹರಕೆ,ಪೂಜೆ, ಭಕ್ತಾದಿಗಳಿಗೆ ದೇವಸ್ಥಾನದ ಹೊರ ಭಾಗದಲ್ಲಿ ಪ್ರಸಾದ ವಿನಿಯೋಗ ವಿರುತ್ತದೆ.
ಜಾತ್ರೆಯ ಅಂಗವಾಗಿ ನಗರದ ನೆಹರು ಕ್ರೀಡಾಂಗಣದಲ್ಲಿ ಮಾ.6 ರಿಂದ 8 ರ ವರೆಗೆ ಮೂರು ದಿನ ರಾಷ್ಟ್ರ ಮಟ್ಟದ ಬಯಲು ಕುಸ್ತಿ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ. ರಾಜ್ಯದ ವಿವಿಧ ಕಡೆಗಳಿಂದ ಖ್ಯಾತ ಪೈಲ್ವಾನರು ಕುಸ್ತಿಯಲ್ಲಿ ಭಾಗವಹಿಸಲು ಆಗಮಿಸಲಿದ್ದಾರೆ.

ಜಾನಪದ ತಂಡಗಳು ಭಾಗಿ
ಫೆಬ್ರವರಿ 24 ರ ಬೆಳಗ್ಗೆ ನಾಲ್ಕು ಗಂಟೆಗೆ ಹರಿಜನ ಸಮಾಜ ಬಾಂಧವರು ಬೇವಿನ ಉಡುಗೆಯೊಂದಿಗೆ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿದ ನಂತರ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಕುರುಬ ಸಮಾಜದ ಚೌಡಿಕೆ ಕುಟುಂಬ,ವಾಲ್ಮೀಕಿ, ಉಪ್ಪಾರ, ಮಡಿವಾಳ ಸಮಾಜದವರು ಸರದಿಯಂತೆ ನಾಲ್ಕು ದಿನಗಳ ಕಾಲ ಗದ್ದಿಗೆಯಲ್ಲಿ ಅಮ್ಮನವರಿಗೆ ಪೂಜೆ ಸಲ್ಲಿಸುತ್ತಾರೆ. ಫೆಬ್ರವರಿ,28ರ ಶನಿವಾರ ರಾತ್ರಿ 9:00 ಗಂಟೆಗೆ ಮಾರಿಕಾಂಬೆಯನ್ನು ವನ ಪ್ರವೇಶಕ್ಕೆ ಕಳುಹಿಸಿಕೊಡುವ ಕಾರ್ಯಕ್ರಮವಿರುತ್ತದೆ. ಆ ದಿನ ಉತ್ಸವ ನಡೆಯಲಿದ್ದು,ವಿವಿಧ ಜಾನಪದ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಲಕ್ಷಾಂತರ ಭಕ್ತಾದಿಗಳು ಪಾಲ್ಗೊಂಡು ಅತ್ಯಂತ ಸಂಭ್ರಮದಿಂದ ಅಮ್ಮನವರನ್ನು ವನ ಪ್ರವೇಶಕ್ಕೆ ಕಳಿಸಿ ಕೊಡುವ ಮೂಲಕ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ತೆರೆ ಎಳೆಯಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ರಕ್ತ ಬಲಿ ಸಂಪೂರ್ಣವಾಗಿ ನಿಂತು, ದೇವಿಗೆ ಹಣ್ಣು,ಕಾಯಿ, ವಿಶೇಷ ಮಂಗಳಾರತಿ,ನಂದಾದೀಪ,ಕುಂಕುಮಾರ್ಚನೆ, ಉಡಿತುಂಬುವುದು ಹೀಗೆ ಅನೇಕ ಸಾತ್ವಿಕ ಅರಕೆಗಳು ಇಂದಿನ ಮಾರಿ ಜಾತ್ರೆಗಳಲ್ಲಿ ವಿಶೇಷವಾಗಿ ಕೋಣ ಬಲಿ ಕೊಡುವ ಬದಲು ಪೂಜೆ-ಪುನಸ್ಕಾರದಲ್ಲಿ ಮಾರಿ ಜಾತ್ರೆಯನ್ನು ಆಚರಿಸುತ್ತಾರೆ.

ಮಂಗಳ ವಾದ್ಯದೊಂದಿಗೆ ಮೆರವಣಿಗೆ
ಮಂಗಳವಾರ ರಾತ್ರಿ ಹತ್ತು ಗಂಟೆಯವರೆಗೂ ಲಕ್ಷಾಂತರ ಮುತ್ತೈದೆಯರು ಮಾರಿಕಾಂಬೆಗೆ ಮಡಿಲಕ್ಕಿ ನೀಡಿ,ಉಡಿ ತುಂಬಿ ತಮ್ಮ ಪೂಜೆಯನ್ನು ಸಲ್ಲಿಸಲು, ನಾಗರಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಿದ್ದು ನಂತರ ಉಪ್ಪಾರ ಸಮಾಜದವರು ಮಾರಿಕಾಂಬೆಯನ್ನು ರಥದಲ್ಲಿ ಕೂರಿಸಿ ಮೆರವಣಿಗೆಯ ಮೂಲಕ ಕೋಟೆ ರಸ್ತೆಯಲ್ಲಿರುವ ಮಾರಿ ಗದ್ದುಗೆಯವರೆಗೂ ತರಲಿದ್ದಾರೆ. ಆಗ ದೇವಿಯನ್ನು ಮಂಗಳವಾದ್ಯದೊಂದಿಗೆ ಎದುರುಗೊಂಡು ಗಂಗಮತಸ್ಥ ಸಮಾಜದವರು ಪೂಜೆ ಸಲ್ಲಿಸಲಿದ್ದಾರೆ.
ಫೆಬ್ರವರಿ 24 ರಿಂದ 28 ರವರಗೆ ಮಾರಿಕಾಂಬ ದೇವಸ್ಥಾನದ ಸಮಿತಿಯಿಂದ ರಾಮಣ್ಣಶ್ರೇಷ್ಟಿ ಪಾರ್ಕಿನಲ್ಲಿ ಪ್ರತಿ ದಿನ ಸಂಜೆ 7 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.8:00 ಗಂಟೆಗೆ ಮಹಾ ಮಂಗಳಾರತಿ ಇರುತ್ತದೆ. ಜಾತ್ರೆ ನಡೆಯುವ 5 ದಿನಗಳಂದು ಅಮ್ಮನವರಿಗೆ ಹರಕೆ,ಪೂಜೆ, ಭಕ್ತಾದಿಗಳಿಗೆ ದೇವಸ್ಥಾನದ ಹೊರ ಭಾಗದಲ್ಲಿ ಪ್ರಸಾದ ವಿನಿಯೋಗ ವಿರುತ್ತದೆ.
ಸೌಮ್ಯ ರೂಪಿಣಿ ರೌದ್ರ ರೂಪ ತಾಳಿದ್ದು
ಅವಳೊಬ್ಬಳು ಚೆಲುವೆಯಾದ ಹೆಣ್ಣು ಆ ಚೆಲುವೆಗೆ ಸರಿಸಾಟಿಯೇ ಇಲ್ಲ, ಆ ರೂಪಿಗೆ ಸೋತಿದ್ದು ಚಮ್ಮಾರ ಯುವಕನೊಬ್ಬ, ಆದರೆ ಅವಳನ್ನು ವರಿಸುವುದು ಕಷ್ಟವೆಂದು ಅವನಿಗೆ ಗೊತ್ತು. ಆದರೆ ಅವಳನ್ನು ಒರೆಸುವುದು ಅವನಿಗೆ ಗೊತ್ತು, ಆದರೆ ಅವಳನ್ನು ಪಡೆಯಲೇಬೇಕೆಂಬ ಉತ್ಕಟ ಬಯಕೆ, ಕಡೆಗೆ ತನ್ನ ಜಾತಿ,ಉದ್ಯೋಗ ಎಲ್ಲವನ್ನು ಮರೆಮಾಡಿ ತಾನೊಬ್ಬ ಬ್ರಾಹ್ಮಣ ಯುವಕನೆಂದು ನಂಬಿಸಿ ಮದುವೆಯಾದ. ಅವರಿಬ್ಬರ ಜೀವನ ಹಾಲು ಸಕ್ಕರೆಯಂತೆ ಇತ್ತು, ಯುವಕ ಎಲ್ಲಿಯೂ ತನ್ನ ತನವನ್ನು ಮರೆಯಲಿಲ್ಲ,ಹೀಗಿದ್ದಾಗ ಇವರಿಗೆ ಮುದ್ದಾದ ಗಂಡು ಮಗುವು ಆಯಿತು, ಸಂತೋಷ ಸಂಭ್ರಮಕ್ಕೆ ಕೊನೆಯಿಲ್ಲದಂತೆ ಆಯಿತು.
ಹೀಗೆ ಒಂದು ಹಬ್ಬದ ದಿನ ಹೋಳಿಗೆ ಮಾಡಿ ಗಂಡ,ಮಗನಿಗೆ ಉಣಬಡಿಸಿದಳು.ಹೋಳಿಗೆಯನ್ನು ನೋಡಿದ ಗಂಡ ತನ್ನ ತನವನ್ನು ಮರೆತು ಹೋಳಿಗೆ ಚಕ್ಕಳದ ಹಾಗೆ ಇದೆ ಎಂದ, ಹೆಂಡತಿಯು ದಂಗಾದಳು ಕಾರಣ ಅವಳು ಗಂಡನ ಬಾಯಿಯಲ್ಲಿ ಇಂತಹ ಮಾತನ್ನು ನಿರೀಕ್ಷಿರಲಿಲ್ಲ, ಅವಳಲ್ಲಿ ಅನುಮಾನ ಕಾಡಲಾರಂಭಿಸಿತು,ತನ್ನ ಗಂಡನ ಪ್ರತಿಯೊಂದು ಚಲನವಲನವನ್ನು ಅಂದಿನಿಂದ ನೋಡುತ್ತಾ ಬಂದಳು, ಅದೊಂದು ದಿನ ತನ್ನ ಗಂಡ ಮತ್ತು ಮಗ ಎಲ್ಲಿಗೆ ಹೋಗುತ್ತಾರೆಂದು ತಿಳಿದುಕೊಳ್ಳಲು ಅವರ ಹಿಂದೆಯೇ ಹೋದಳು. ಅಪ್ಪ-ಮಗ ಇಬ್ಬರೂ ಚಪ್ಪಲಿ ಹೊಲೆಯುತ್ತಿದ್ದರು. ತಕ್ಷಣ ಹೆಂಡತಿ ರೌದ್ರ ರೂಪತಾಳಿ ಗಂಡ,ಮಗನನ್ನು ಅಟ್ಟಿಸಿಕೊಂಡು ಹೋದಳೂ ಗಂಡ ಹೆದರಿ ಕೋಣದಲ್ಲಿ ಸೇರಿಕೊಂಡ,ಮಗ ಕುರಿಯಲ್ಲಿ ಸೇರಿಕೊಂಡ ಹಾಗಾಗಿ ಮಾರಿಜಾತ್ರೆಯಲ್ಲಿ ಅವಳ ಕೋಪ ಶಮನ ಮಾಡಲು ಕೋಣ ಮತ್ತು ಕುರಿಯನ್ನು ಬಲಿ ಕೊಡುತ್ತಾರೆ. ಹೀಗೆ ಬಲಿಯ ನಂತರ ಮಾರಿಕಾಂಬೆ ಶಾಂತ ಮೂರ್ತಿಯಾಗುತ್ತಾಳೆ.













