ಶಿವಮೊಗ್ಗ: ಪಿಇಎಸ್ ಸಂಸ್ಥೆಯ ಆವರಣದಲ್ಲಿರುವ ಪ್ರೇರಣಾ ಕನ್ವೆಷನ್ ಹಾಲ್ನಲ್ಲಿ ಪಿಇಎಸ್ ಐಎಎಮ್ಎಸ್ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕುವೆಂಪು ವಿಶ್ವವಿದ್ಯಾಲಯ ಅಂತರ ಕಾಲೇಜು ಚೆಸ್ ಪಂದ್ಯಾವಳಿಗೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುಭಾಷ್ ಬಿ.ಆರ್. ಚಾಲನೆ ನೀಡಿದರು.
ಪಿಇಎಸ್ ಟ್ರಸ್ಟ್ನ ಕುಲಸಚಿವ ಡಾ. ನಾಗರಾಜ ಆರ್ ಅವರು ಮಾತನಾಡುತ್ತಾ, ಸ್ಪರ್ಧಾಳುಗಳಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಅತಿ ಅವಶ್ಯಕ. ಪ್ರತಿಯೊಬ್ಬ ವಿದ್ಯಾರ್ಥಿಗಳೂ ಕೂಡ ದೈಹಿಕ ಸದೃಢತೆ, ವಿಶ್ಲೇಷಣಾ ಸಾಮರ್ಥ್ಯ, ಬುದ್ಧಿಮತ್ತೆ, ಸೇವೆ ಹಾಗೂ ಸಮರ್ಪಣಾ ಮನೋಭಾವ, ಭಾವನಾತ್ಮಕ ಬುದ್ಧಿವಂತಿಕೆ, ಸ್ವಯಂಕಲಿಕೆ, ಸಮರ್ಥ ನಾಯಕತ್ವ, ಸಂವಹನ ಕೌಶಲ್ಯ, ನಿರಂತರವಾದ ಕಲಿಕೆ ಬೆಳೆಸಿಕೊಳ್ಳಬೇಕು ಆ ಮೂಲಕ ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದರು.
ಕುವೆಂಪು ವಿಶ್ವ ವಿದ್ಯಾಲಯದ ದೈಹಿಕಶಿಕ್ಷಣ ವಿಭಾಗದ ನಿರ್ದೇಶಕ ಡಾ ವಿರೂಪಾಕ್ಷಪ್ಪ ಮಾತನಾಡುತ್ತಾ, ಕೋವಿಡ್ ನಂತರದ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಕಡಿಮೆ ಆಗುತ್ತಿದೆ. ಆದರೆ ಇದಕ್ಕೆ ಅಪವಾದ ಎಂಬಂತೆ ಈ ಪಂದ್ಯಾವಳಿಯಲ್ಲಿ 20 ಪುರುಷರ ಹಾಗೂ 17 ಮಹಿಳಾ ತಂಡವನ್ನು ಒಳಗೊಂಡಂತೆ ಒಟ್ಟು 37 ತಂಡಗಳು ವಿವಿಧ ಕಾಲೇಜುಗಳಿಂದ ಆಗಮಿಸಿ ನೋಂದಣಿಯನ್ನು ಮಾಡಿಕೊಂಡಿವೆ. ಇದು ಅತ್ಯಂತ ಸಂತಸದ ವಿಚಾರ. ಕ್ರೀಡಾಪಟುಗಳು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಪಿಇಎಸ್ ಐಎಎಮ್ಎಸ್ ಕಾಲೇಜಿನ ಪ್ರಾಂಶುಪಾಲ ಡಾ. ಜಿ ಎಂ ಸುದರ್ಶನ್ ಮಾತನಾಡುತ್ತಾ, ಉತ್ತಮ ಕ್ರೀಡಾ ಪಟುವಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡೂ ಅತೀ ಮುಖ್ಯ. ಇಂದು ಶೈಕ್ಷಣಿಕ ಸಾಧನೆಗಳ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ಕೂಡ ವಿದ್ಯಾರ್ಥಿಗಳು ಗಮನವನ್ನು ನೀಡುವುದರ ಜೊತೆಗೆ ಸಂಪೂರ್ಣ ವ್ಯಕ್ತಿತ್ವದ ವಿಕಸನದ ಕಡೆಗೆ ಗಮನ ಹರಿಸಬೇಕು. ಹಾಗೆಯೇ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಚೆಸ್ ಪಂದ್ಯಾವಳಿಯ ಆರ್ಬಿಟರ್ ಆಗಿ ಪ್ರಾಣೇಶ್ ಹಾಗೂ ವಿಲ್ಸನ್ ಆಂಡ್ರಾಯ್ಡ್ ಅವರು ಆಗಮಿಸಿದ್ದರು. ವೇದಿಕೆಯಲ್ಲಿ ಪಿಇಎಸ್ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಸೆಂಥಿಲ್ ಜಿ ಹಾಗೂ ಪಿಇಎಸ್ ಐಎಎಮ್ ಎಸ್ ಕಾಲೇಜಿನ ದೈಹಿಕ ಶಿಕ್ಷಣ ನಿದೇಶಕ ಸಂಜಯ್ ಕುಮಾರ್ ಎನ್ ಉಪಸ್ಥಿತರಿದ್ದರು.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ : 7483162573, yuvadhwani@gmail.com













