ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಸಾವು
ಹೊಳೆಹೊನ್ನೂರು:
ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಗೊಂದಿಚಟ್ನಳ್ಳಿಯ ಕೆ.ದರ್ಶನ್ (೧೮) ಮೃತ ಯುವಕ. ಗೊಂದಿಚಟ್ನಳ್ಳಿಯ ದರ್ಶನ್ ತನ್ನ ಸ್ನೇಹಿತನೊಂದಿಗೆ ತಿಂಡಿ ತಿನ್ನಲು ತೆರಳಿದ್ದು, ಹಿಂದಿರುಗುವಾಗ ಈ ಘಟನೆ ಸಂಭವಿಸಿದೆ.
ಶಿವಮೊಗ್ಗ- ಹೊನ್ನಾಳಿ ರಸ್ತೆಯಲ್ಲಿ ತೆರಳುವ ವೇಳೆ ಗೊಂದಿಚಟ್ನಳ್ಳಿ ಬಳಿ ದರ್ಶನ್ ಚಾಲನೆ ಮಾಡುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ತಲೆಗೆ ತೀವ್ರ ಪೆಟ್ಟಾಗಿ ದರ್ಶನ್ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ಗಂಭೀರ ಗಾಯಗೊಂಡಿದ್ದಾನೆ. ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಣ ಅಡಿಕೆ ಕಳವು
ಶಿವಮೊಗ್ಗ:
ಹನುಮಂತಾಪುರ ಗ್ರಾಮದಲ್ಲಿ ಮನೆ ಎದುರು ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಒಣ ಅಡಿಕೆ ಕಳವು ಮಾಡಲಾಗಿದೆ.
ಪ್ರಶಾಂತ್ ಎಂಬುವವರು ತಮ್ಮ 3 ಎಕರೆ ತೋಟದಲ್ಲಿ ಬೆಳೆದ ಅಡಿಕೆ ಕಟಾವು ಮಾಡಿ, ಒಣಗಿಸಿ ಮಾರಾಟ ಮಾಡಲು ಸಿದ್ದಪಡಿಸಿದ್ದರು.
ಒಟ್ಟು 25 ಗೋಣಿ ಚೀಲಗಳಲ್ಲಿ ಒಣ ಅಡಿಕೆ ತುಂಬಿಸಿ ಇಟ್ಟಿದ್ದರು. ಇದರಲ್ಲಿ 4 ಗೋಣಿಚೀಲದಲ್ಲಿ ತುಂಬಿದ್ದ 2 ಲಕ್ಷ ರೂ. ಮೌಲ್ಯದ 8 ಕ್ವಿಂಟಲ್ ಅಡಿಕೆಯನ್ನು ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಾಲಯಗಳಲ್ಲಿ ಹುಂಡಿ ಹಣ ಕಳವು
ಶಿವಮೊಗ್ಗ: ಆಯನೂರು ಸಮೀಪದ ವೀರಣ್ಣನ ಬೆನವಳ್ಳಿ ಗ್ರಾಮದಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ದೇವಸ್ಥಾನದ ಬಾಗಿಲು ಒಡೆದು ಒಳನುಗ್ಗಿರುವ ಕಳ್ಳರು ಹುಂಡಿ ಹಣ, ದೇವರ ಚಿನ್ನ, ಬೆಳ್ಳಿ ಆಭರಣಗಳನ್ನು ದೋಚಿರುವ ಘಟನೆ ನಡೆದಿದೆ.
ಮೈಕ್ ಸೆಟ್ ಮತ್ತಿತರ ವಸ್ತುಗಳಿಗೆ ಹಾನಿ ಮಾಡಿದ್ದು, ಒಂದು ಲಕ್ಷ ರೂ.ಗೂ ಅಧಿಕ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ. ಮೈಸವಳ್ಳಿ ಗ್ರಾಮದ ದೇವಾಲಯದಲ್ಲೂ ಕಳ್ಳತನ ನಡೆದಿದೆ.
ಸ್ಥಳಕ್ಕೆ ಕುಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾಲುನೋವಿನಿಂದ ಬಳಲುತ್ತಿದ್ದ ಬಾಣಂತಿ ಸಾವು
ಶಿವಮೊಗ್ಗ: ತೀರ್ಥಹಳ್ಳಿಯಲ್ಲಿ ಕಾಲು ನೋವಿನಿಂದ ಬಳಲುತ್ತಿದ್ದ ಬಾಣಂತಿಯೊಬ್ಬರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿರುವ ಘಟನೆಯಾಗಿದೆ ವರದಿಯಾಗಿದೆ.
ಕಾವ್ಯ (29) ಮೃತ ಬಾಣಂತಿ. ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಅಂಚೆ ಕಛೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿರುವ ಮಂಜುನಾಥ್ ಅವರನ್ನು ಏಳು ವರ್ಷಗಳ ಹಿಂದೆ ಕಾವ್ಯ ಮದುವೆಯಾಗಿದ್ದರು.
ಜ.೦೧ಕ್ಕೆ ಮಗುವಿಗೆ ಕಾವ್ಯ ಜನ್ಮನೀಡಿದ್ದು, ಮಗು ಮೃತಪಟ್ಟಿತ್ತು. ಆನಂತರ ಕಾವ್ಯ ತವರು ಮನೆ ಕೋಣಂದೂರು ಸಮೀಪದ ದೇಮ್ಲಾಪುರ ಗ್ರಾಮದ ಚಿಕ್ಕನಹಳ್ಳಿಗೆ ತೆರಳಿದ್ದರು. ಮಂಗಳವಾರ ಕಾಲುನೋವು ಎಂದು ಆಸ್ಪತ್ರೆಗೆ ಬರುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.













