ತೀರ್ಥಹಳ್ಳಿ,:ಕರ್ನಾಟಕದ ಶಬರಿಮಲೆ ಅಯ್ಯಪ್ಪ ಸ್ವಾಮಿ ಕ್ಷೇತ್ರವೆಂದು ಪ್ರಸಿದ್ಧವಾಗಿರುವ ತೀರ್ಥಹಳ್ಳಿಯ ಬೆಜ್ಜವಳ್ಳಿಯಲ್ಲಿ ಸಂಕ್ರಾಂತಿ ಮಹೋತ್ಸವ ಮತ್ತು ಶ್ರೀಗಳ ಪೀಠಾರೋಹಣದ ವರ್ಧಂತ್ತೋತ್ಸವ ಸಮಾರಂಭ ವೈಭವದಿಂದ ನಡೆಯಿತು.
ಚಿತ್ರನಟ ಶಿವರಾಜಕುಮಾರ್ ಅಯ್ಯಪ್ಪ ಮಾಲೆ ಧರಿಸಿ ಇರುಮುಡಿ ಹೊತ್ತುಕೊಂಡು ದೇವರ ಸೇವೆ ಮಾಡಿದರು. ಸಾವಿರಾರು ಭಕ್ತರು ದರ್ಶನ ಪಡೆದು ವಸ್ತ್ರ, ಶಸ್ತ್ರ, ಪಲ್ಲಕ್ಕಿ, ಆಭರಣೋತ್ಸವ (ತಿರುವಾಭರಣ) ವೀಕ್ಷಿಸಿದರು.
ಮಧ್ಯಾಹ್ನ ಗುರುಮನೆಯಿಂದ ಅಯ್ಯಪ್ಪನ ಆಭರಣೋತ್ಸವ ಮತ್ತು ಪರಿವಾರ ದೈವಗಳ ರಾಜಪಲ್ಲಕ್ಕಿ ಉತ್ಸವ ನಡೆಯಿತು. ಆಭರಣಗಳು ಸನ್ನಿದಾನ ತಲುಪುವ ವೇಳೆ ಆಕಾಶದಲ್ಲಿ ಭಕ್ತರು ಗರುಡ ದರ್ಶನವಾಯಿತು. ನಂತರ ದೇವರ ಉಯ್ಯಾಲೆ ಸೇವೆ, ಕನಕಾಭಿಷೇಕ, ಮಹಾಕಲಶ ಕುಂಭಾಭಿಷೇಕ ನಡೆಯಿತು.
ಗುರುಡ ವೀಕ್ಷಣೆಯ ವಿಸ್ಮಯ ನೋಡಲು ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು. ಗುರುಮನೆಯಲ್ಲಿ ಕ್ಷೇತ್ರ ಗಣಗಳ ದೈವದರ್ಶನ ನಂತರ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ದಿವ್ಯ ಸಾನಿಧ್ಯವನ್ನು ವಿಶ್ವಸಂತೋಷ ಭಾರತಿ ಶ್ರೀಪಾದರು ವಹಿಸಿದ್ದರು. ಗೌರಿಗದ್ದೆ ಅವದೂತ ವಿನಯ್ ಗುರೂಜಿ ಆಶೀರ್ವಚನ ನೀಡಿದರು. ಸಾಯಂಕಾಲ ಜ್ಯೋತಿ ಪೂಜೆ, ಅಡ್ಡಪಲ್ಲಕ್ಕಿ ಉತ್ವವ ಜರುಗಿತು.
ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ನಟ ಶಿವರಾಜ್ ಕುಮಾರ್, “ಶ್ರೀ ಹರಿಹರಾತ್ಮಜ ಪೀಠ” ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ನಮ್ಮ ಕುಟುಂಬ ಅಯ್ಯಪ್ಪ ಸ್ವಾಮಿ ಭಕ್ತರಾಗಿದ್ದು ಅಯ್ಯಪ್ಪಸ್ವಾಮಿ ಮಾಲಾಧಾರಿಯಾಗಿ ಬೆಜ್ಜವಳ್ಳಿಗೆ ಭೇಟಿ ನೀಡಿರುವುದು ಸಂತೋಷ ತಂದಿದೆ. ಪ್ರೀತಿ, ವಿಶ್ವಾಸದಿಂದ ಧರ್ಮದ ಭಾವನಾತ್ಮಕ ಸಂಬಂಧಗಳು ವೃದ್ಧಿ ಆಗುತ್ತವೆ. ಭಕ್ತಿಯಿಂದ ನಡೆದುಕೊಂಡಾಗ ದೇವರ ಆರ್ಶೀವಾದ ದೊರೆಯುತ್ತದೆ ಎಂದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಸನಾತನ ಮೌಲ್ಯಗಳನ್ನು ಅಳಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಧರ್ಮ ರಕ್ಷಣೆಗೆ ನಮ್ಮ ಜನರು ಸಿದ್ದರಾಗಿದ್ದಾರೆ. ಹೆದರಿಸಿ ಧರ್ಮ ಕಟ್ಟುತ್ತೇವೆ ಎಂದವರಿಗೆ ತಕ್ಕ ಉತ್ತರವು ಸಿಗುತ್ತಿದೆ. ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಭಕ್ತಿ ಮೆಚ್ಚುವಂತಹದ್ದು. ನಾನು ಕೂಡ ಮಾಲಾಧಾರಿಯಾಗಿ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಪಡೆದಿದ್ದೇನೆ ಎಂದರು.
ಹರಿಹರ ಪೀಠದ ವಿಶ್ವಸಂತೋಷ ಭಾರತೀ ಶ್ರೀಪಾದಂ ಮಾತನಾಡಿ, ಬೆಜ್ಜವಳ್ಳಿ ವಿಶೇಷ ಧಾರ್ಮಿಕ ಕ್ಷೇತ್ರವಾಗಿ ಗುರುತಾಗಿದೆ. ಶಿವರಾಜ್ಕುಮಾರ್ ಇರುಮುಡಿ ಹೊತ್ತು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಅಯ್ಯಪ್ಪ ಮಾಲಾಧಾರಿಗಳ ಸೇವೆಯನ್ನು ಅಯ್ಯಪ್ಪ ಅನುಗ್ರಹಪೂರ್ವಕವಾಗಿ ಈಡೇರಿಸುತ್ತಾನೆ ಎಂದು ಹೇಳಿದರು.
ವೇದಿಕೆಯಲ್ಲಿ ಗೀತಾ ಶಿವರಾಜಕುಮಾರ್, ಅವಧೂತ ವಿನಯ್ ಗುರೂಜಿ, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಜಿ.ಪಂ.ಮಾಜಿ ಅಧ್ಯಕ್ಷ ಅಶೋಕಮೂರ್ತಿ, ಗೋವಾ ವಿದ್ಯಾಪ್ರಭೋದಿನಿ ಚೇರ್ಮನ್ ಸಂಜಯ್ ವಲವಾಳ್ಕರ್ ಇತರರಿದ್ದರು.













