ಶಿವಮೊಗ್ಗ: ಶಿವಮೊಗ್ಗ ವಿನೋಬನಗರ ಠಾಣೆಯ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ, ಮೂವರು ಅಂತರ್ರಾಜ್ಯ ಸರಗಳ್ಳರು ಹಾಗೂ ಒಂಟಿ ಮನೆ ದರೋಡೆ ಕೋರರನ್ನು ಬಂಂಧಿಸಿದ್ದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.
ತಮಿಳುನಾಡು ರಾಜ್ಯದ ಕೊಯಮತ್ತೂರಿನ ಅರಸು ಯಾನೆ ವಲ್ಲರಸು (25), ಬೆಂಗಳೂರಿನ ಗೋರಿಪಾಳ್ಯದ ಕಾಲು ಯಾನೆ ಇಬ್ರಾಹಿಂ ಪಾಶಾ ಯಾನೆ ಇಬ್ರಾಹಿಂ ಬಾಶಾ (30) ಹಾಗೂ ಅತ್ತಿಬೆಲೆ ಎಡವನಹಳ್ಳಿ ನಿವಾಸಿ ಕೇಶವನ್ (43) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಆರೋಪಿಗಳಾದ ವಲ್ಲರಸು ಹಾಗೂ ಇಬ್ರಾಹಿಂನಿಂದ 4.80 ಲಕ್ಷ ರೂ. ಮೌಲ್ಯದ 40 ಗ್ರಾಂ ತೂಕದ ಬಂಗಾರದ ಗಟ್ಟಿ ಹಾಗೂ ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಬೈಕ್ ವಶಕ್ಕೆ ಪಡೆಯಲಾಗಿದೆ.
ಮತ್ತೋರ್ವ ಆರೋಪಿ ಕೇಶವನ್ ಕಡೆಯಿಂದ, 8.50 ಲಕ್ಷ ರೂ. ಮೌಲ್ಯದ 70 ಗ್ರಾಂ ತೂಕದ ಮಾಂಗಲ್ಯ ಸರ, 10.20 ಲಕ್ಷ ರೂ. ಮೌಲ್ಯದ 60 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಮೂವರು ಆರೋಪಿಗಳಿಂದ ಒಟ್ಟಾರೆ ಮೌಲ್ಯ 25 ಲಕ್ಷ ರೂ.ಗಳಾಗಿದೆ ಎಂದು ತಿಳಿಸಿದೆ.
ಎಸ್ಪಿ ನಿಖಿಲ್ ಬಿ, ಹೆಚ್ಚುವರಿ ಎಸ್ಪಿ ಕಾರಿಯಪ್ಪ, ರಮೇಶ್, ಡಿವೈಎಸ್ಪಿ ಸಂಜೀವ್ ಕುಮಾರ್ ಮಾರ್ಗದರ್ಶನದಲ್ಲಿ ವಿನೋಬನಗರ ಠಾಣೆ ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ಡಿ ಕೆ ಉಸ್ತುವಾರಿಯಲ್ಲಿ, ಸಬ್ ಇನ್ಸ್’ಪೆಕ್ಟರ್ ತಿರುಮಲೇಶ್ ಜಿ, ಸಿಬ್ಬಂದಿಗಳಾದ ರಾಜು, ಚಂದ್ರಾನಾಯ್ಕ್, ಮಲ್ಲಪ್ಪ ಎಸ್ ಜಿ, ಅರುಣ್ ಕುಮಾರ್ ಎನ್ ಕೆ, ಮನು ಶಂಕರ್ ರವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.













