ಶಿವಮೊಗ್ಗ : ಗೋವರ್ಧನ ಟ್ರಸ್ಟ್ ವತಿಯಿಂದ ಮಾಜಿ ಉಪಮುಖ್ಯಮಂತ್ರಿ ಹಾಗೂ ಟ್ರಸ್ಟ್ ನ ಮಹಾಪೋಷಕರಾದ ಕೆ.ಎಸ್.ಈಶ್ವರಪ್ಪನವರ ನೇತೃತ್ವದಲ್ಲಿ ಅಕ್ರಮ ಗೋಸಾಗಾಣಿಕೆ ಮತ್ತು ಗೋ ಹತ್ಯೆಗಳನ್ನು ತಡೆಯಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮುಂಬರುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅವ್ಯಾಹತವಾಗಿ ನಡೆಯುವ ಪ್ರಾಣಿ ಹತ್ಯೆ ಅದರಲ್ಲೂ ವಿಶೇಷವಾಗಿ ಬಹುಸಂಖ್ಯಾತ ಹಿಂದೂಗಳು ಪೂಜನೀಯ ಭಾವನೆಯಿಂದ ಕಾಣುವ ಗೋಮಾತೆಯ ಹತ್ಯೆಗಳನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ರಕ್ಷಣಾ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಗೋ ಹತ್ಯಾ ನಿಷೇಧ ಕಾಯ್ದೆ ರಾಜ್ಯದಲ್ಲಿ ಜಾರಿಯಲ್ಲಿದ್ದರೂ ಕೂಡ ಗೋವುಗಳ ಅಕ್ರಮ ಸಾಗಾಣಿಕೆ ಮತ್ತು ಹತ್ಯೆ ಯಾವುದೇ ಅಡೆ ತಡೆ ಇಲ್ಲದೆ ನಡೆಯುತ್ತಿರುವುದನ್ನು ಗೋವರ್ಧನ ಟ್ರಸ್ಟ್ ತೀವ್ರವಾಗಿ ಖಂಡಿಸುತ್ತದೆ.
-
ಇದನ್ನೂ ಓದಿ > ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಹೆಚ್ಚಳ, ಶಿವಮೊಗ್ಗದಲ್ಲಿ ಎಷ್ಟಿದೆ ರೇಟ್?
-
ಇದನ್ನೂ ಓದಿ > ಜಿಂಕೆ ಮಾಂಸ ಮಾರಾಟ, ಮೂವರ ಬಂಧನ
ಬಕ್ರೀದ್ ಹಬ್ಬದ ಪ್ರಯುಕ್ತ ಪ್ರಾಣಿ ಬಲಿ ನೆಪದಲ್ಲಿ ಗೋವುಗಳ ವಧೆ ಮಾಡುವುದು ಕರ್ನಾಟಕ ಪ್ರಾಣಿ ಬಲಿಗಳ ಪ್ರತಿಬಂಧಕ ಅಧಿನಿಯಮ 1959ರ ಅಡಿಯಲ್ಲಿ ಸಂಪೂರ್ಣವಾಗಿ ಕಾನೂನು ಬಾಹಿರ ಕೃತ್ಯವಾಗಿದ್ದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಆದ್ದರಿಂದ ಶಿವಮೊಗ್ಗ ನಗರದಲ್ಲಿ ಗೋ ಹತ್ಯೆಯನ್ನು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ನಗರ ಪ್ರವೇಶದ ಪ್ರಮುಖ ರಸ್ತೆ ಮಾರ್ಗಗಳಲ್ಲಿ ನಾಕಾಬಂಧಿ ನಿರ್ಮಿಸಿ ಅಕ್ರಮ ಗೋಸಾಗಾಣಿಕೆಯನ್ನು ನಿರ್ಬಂಧಿಸಬೇಕು ಎಂದು ಆಗ್ರಹಿಸಿದರು.
ಹೊಸ ಹೊಸ ವಾಹನಗಳಲ್ಲಿ ರಾಶಿ ಹಾಕಿ ಗೋವುಗಳನ್ನು ಅಮಾನುಷವಾಗಿ ಕಟ್ಟಿ, ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡಲಾಗುತ್ತಿದೆ. ಬಿಡಾಡಿ ದನಗಳು ಮತ್ತು ಕರುಗಳನ್ನು ಅವ್ಯಾಹತವಾಗಿ ಕಸಾಯಿಖಾನೆಗೆ ಒಯ್ಯಲಾಗುತ್ತದೆ. ಈ ಬಗ್ಗೆ ವಿರೋಧ ವ್ಯಕ್ತಪಡಿಸಿದರೆ ಅಥವಾ ತಡೆಯಲು ಹೋದ ಹಿಂದೂ ಯುವಕರ ಮೇಲೆಯೇ ಕೇಸು ದಾಖಲಾಗುತ್ತಿದೆ. ಗೋ ವಧೆಗೆ ಅನೇಕ ತಂತ್ರಗಾರಿಕೆಗಳನ್ನು ಮಾಡುತ್ತಿದ್ದಾರೆ. ರೈತರಿಂದ ವ್ಯವಸಾಯಕ್ಕೆ ಎಂದು ಸುಳ್ಳು ನೆಪ ಹೆಳಿ ಕಸಾಯಿಖಾನೆಗೆ ಸಾಗಿಸುವ ಕೆಲಸ ಮಾಡುತ್ತಿದ್ದಾರೆ. ಗೋವರ್ಧನ ಟ್ರಸ್ಟ್ ಯಾವುದೇ ಕಾರಣಕ್ಕೂ ಒಂದೇ ಒಂದು ಹಸುವನ್ನು ಕಸಾಯಿಖಾನೆಗೆ ಒಯ್ಯಲು ಇನ್ನು ಮುಂದೆ ಬಿಡುವುದಿಲ್ಲ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ರಕ್ಷಣಾ ಇಲಾಖೆ ಮತ್ತು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಖ್, ಹೆಚ್ಚುವರಿ ರಕ್ಷಾಧಿಕಾರಿ ಕಾರಿಯಪ್ಪ, ಡಿವೈಎಸ್ ಪಿ.ಅಂಜನಪ್ಪ, ಗೋವರ್ಧನ ಟ್ರಸ್ಟ್ ನ ಅಧ್ಯಕ್ಷ ಕೆ.ಈ.ಕಾಂತೇಶ್, ಪ್ರಮುಖರಾದ ಸಿ.ವಿ.ರುದ್ರಾರಾಧ್ಯ, ಬಿ.ಎ.ರಂಗನಾಥ್, ಉಮೇಶ್ ಆರಾಧ್ಯ, ನಾಗೇಶ್ ಎಂ., ರಮೇಶ್ ಬಾಬು, ಈ.ವಿಶ್ವಾಸ್, ಕುಬೇರಪ್ಪ, ಉಮಾದೇವಿ, ಎಂ.ಜಿ.ಬಾಲು, ರಘುರಾಮ್, ಸುಮತೀಂದ್ರಾಚಾರ್, ದಿನೇಶ್ ವೈಷ್ಣವ್ ಮೊದಲಾದವರಿದ್ದರು.















