ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯದ ಶರಾವತಿ ಜಲವಿದ್ಯುದಾಗರದ 7ನೇ ಘಟಕದ ದುರಸ್ತಿಗಾಗಿ ಗುರುವಾರ ಘಟಕವನ್ನು ಸ್ಥಗಿತಗೊಳಿಸಿದೆ.
ಪೆನ್ಸ್ಟಾಕ್ ಪೈಪ್ಗಳ ನೀರನ್ನು ಹೊರಹರಿಸುವ ಮಾರ್ಗದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಭಾರಿ ಪ್ರಮಾಣದ ನೀರು ಸೋರಿಕೆಯಾಗಿ ಜಲವಿದ್ಯುದಾಗರದ ಒಳಭಾಗದಲ್ಲಿ ನೀರು ಶೇಖರಣೆಗೊಂಡಿದ್ದು, ಅಧಿಕಾರಿಗಳು-ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದೆ.
ಇದನ್ನೂ ಓದಿ > ವೃದ್ಧೆಯ ಕೊಲೆ, ಸುತ್ತುಕೋಟೆ ವ್ಯಕ್ತಿಗೆ ಜೀವಾವಧಿ ಶಿಕ್ಷೆ!
ಜಲವಿದ್ಯುದಾಗರದ ಹಿಂಭಾಗದಲ್ಲಿರುವ ಪೆನ್ಸ್ಟಾಕ್ ಪೈಪ್ಗಳ ಬಳಿ ನೀರು ಸೋರಿ ಜಲವಿದ್ಯುದಾಗರದ ನೆಲಮಾಳಿಗೆಯಲ್ಲಿರುವ ನೀರು ತುಂಬಿ ಆತಂಕದ ಸ್ಥಿತಿ ನಿರ್ಮಾಣ ಉಂಟಾಗಿತ್ತು ಎಂದು ಮೂಲಗಳು ತಿಳಿಸಿವೆ.
ಶರಾವತಿ ವಿದ್ಯುದಾಗಾರದ ಘಟಕ-7 ರ ಬಟರ್ಫ್ಲೈ ವಾಲ್ವ್ ನವೀಕರಣದ ತಾಂತ್ರಿಕ ಕೆಲಸಗಳು ಪ್ರಗತಿಯಲ್ಲಿದ್ದವು. ಈ ಪ್ರಕ್ರಿಯೆಯ ಭಾಗವಾಗಿ ಪೆನ್ಸ್ಟಾಕ್ ಕೊಳವೆಯಲ್ಲಿದ್ದ ನೀರನ್ನು ಖಾಲಿ ಮಾಡಲು ಅಳವಡಿಸಲಾಗಿದ್ದ ಡ್ರೈನ್ ಮಾರ್ಗದಲ್ಲಿ ನೀರು ಹರಿಯುತ್ತಿತ್ತು. ಆದರೆ, ಈ ಹಳೆಯದಾದ ಡ್ರೈನ್ ಪೈಪ್ನಲ್ಲಿ ಹಠಾತ್ ಸೋರಿಕೆ ಉಂಟಾದ ಪರಿಣಾಮ, ಭಾರಿ ಪ್ರಮಾಣದ ನೀರು ವಿದ್ಯುದಾಗಾರದ ಆವರಣದ ಮೂಲಕ ಟರ್ಬೈನ್ ಮಾಳಿಗೆಯ ಕಡೆಗೆ ನುಗ್ಗಿದೆ ಎನ್ನಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ವಿದ್ಯುದಾಗಾರದ ಮೂರು ಘಟಕಗಳ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಿ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತರಲಾಗಿದೆ.
ಇದನ್ನೂ ಓದಿ > ಜೆ.ಎನ್.ಎನ್.ಸಿ.ಇ ಕಾಲೇಜಿನಲ್ಲಿ ಅಂತರಾಷ್ಟ್ರೀಯ ವಿಚಾರ ಸಂಕಿರಣ
ಈ ಕುರಿತು ಶರಾವತಿ ಚಾಲನೆ ಮತ್ತು ಪಾಲನೆ ವಿಭಾಗದ ಮುಖ್ಯ ಅಭಿಯಂತರರು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದ್ದು, ವಿದ್ಯುತ್ ಜಾಲಕ್ಕೆ ಯಾವುದೇ ತೊಂದರೆಯಾಗದಂತೆ ಪರಿಸ್ಥಿತಿಯನ್ನು ಸುಸ್ಥಿತಿಯಲ್ಲಿ ನಿರ್ವಹಿಸಲಾಗಿದೆ ಎಂದು ತಿಳಿಸಿದ್ದಾರೆ.















