ಸಾಗರ: ಶಾಲಾಕಾಲೇಜು ಅವಧಿಯಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತು ಸೇವನೆ ಮಾಡುತ್ತಿದ್ದಾರೆ ಎನ್ನುವ ದೂರಿನ ಮೇಲೆ ಸುಮಾರು 10 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದೇವೆ ಎಂದು ಪೊಲೀಸ್ ಉಪಾಧೀಕ್ಷಕ ಡಾ. ಬೆನಕ ಪ್ರಸಾದ್ ತಿಳಿಸಿದರು.
ಇಲ್ಲಿನ ಡಿವೈಎಸ್ಪಿ ಕಚೇರಿಯಲ್ಲಿ ಶನಿವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಕ್ಕೆ ಹೊಂದಿಕೊಂಡ ಕೆಲವು ಅಂಗಡಿಗಳಲ್ಲಿ ಮಾದಕವಸ್ತು ಮಾರಾಟ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು ಎಂದರು.
ಇದನ್ನೂ ಓದಿ > ವಾಹನಗಳ ಸ್ಟೆಪ್ನಿ ಟೈರ್ ಕಳ್ಳತನ, ಶಿವಮೊಗ್ಗದ ಯುವಕ ಅರೆಸ್ಟ್
ಬಳಸಗೋಡು ಪದವಿ ಕಾಲೇಜು ಸಮೀಪ, ಹೆನ್ನು ಶಾಪ್, ಸರ್ಕಾರಿ ಪದವಿಪೂರ್ವ ಕಾಲೇಜು ಸೇರಿ 10 ಕಡೆ ದಾಳಿ ಮಾಡಿದ್ದೇವೆ. ದಾಳಿ ಸಂದರ್ಭದಲ್ಲಿ ಬಳಸಗೋಡಿನ ಹೆನ್ನು ಶಾಪ್ ಬಳಿ ಅಲ್ಪ ಪ್ರಮಾಣದ ಗಾಂಜಾ ವಶಕ್ಕೆ ಪಡೆದು ಪ್ರಕರಣ ದಾಖಲಾಗಿದೆ. ದಾಳಿ ವೇಳೆ 6 ಜನ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಇದನ್ನೂ ಓದಿ > ಜೆಎನ್ಎನ್ಸಿಇ ಕಾಲೇಜಿನ ಕ್ರೀಡಾ ಸಾಧನೆಗೆ ಮತ್ತೊಂದು ಗರಿ, ವಿಟಿಯು ರ್ಯಾಂಕಿಂಗ್ನಲ್ಲಿ 2ನೇ ಸ್ಥಾನ
ಪ್ರಮುಖವಾಗಿ ಶಾಲಾ ಕಾಲೇಜಿಗೆ ಹೋಗುತ್ತೇವೆ ಎಂದು ಬರುವ ವಿದ್ಯಾರ್ಥಿಗಳು ಶಾಲಾ ಅವಧಿಯಲ್ಲಿ ಬಸ್ ನಿಲ್ದಾಣ ಸೇರಿದಂತೆ ಬೇರೆಬೇರೆ ಕಡೆ ಅಲೆಯುತ್ತಿರುತ್ತಾರೆ. ಪೋಷಕರು, ಕಾಲೇಜಿನವರ ದೂರಿನ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ಸ್ಥಳಗಳಲ್ಲಿ ದ್ರೋಣ್ ಹಾರಿಸಿ ವಿದ್ಯಾರ್ಥಿಗಳ ಇರುವಿಕೆ ಪತ್ತೆಹೆಚ್ಚಿ ಎಚ್ಚರಿಕೆ ನೀಡಲಾಗಿದೆ. ಶಾಲಾಬಸ್, ಓಮಿನಿಗಳಲ್ಲಿ ಹೆಚ್ಚಿನ ಮಕ್ಕಳನ್ನು ತುಂಬಿಕೊಂಡು ಹೋಗುವಂತಿಲ್ಲ. ಜೊತೆಗೆ ಚಾಲಕರು ಕುಡಿದು ವಾಹನ ಚಲಾಯಿಸುತ್ತಿದ್ದಾರಾ ಎಂದು ಪರೀಕ್ಷೆ ನಡೆಸಲಾಗುತ್ತದೆ. ಎಂದು ತಿಳಿಸಿದರು.

ಸಾರ್ವಜನಿಕರು ತಮ್ಮ ಆಸುಪಾಸು ಗಾಂಜಾ ಸೇರಿ ಮಾದಕ ವಸ್ತುಗಳ ಸರಬರಾಜು, ಮಾರಾಟ, ಸೇವನೆ ಕಂಡು ಬಂದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ. ನಿಮ್ಮ ಹೆಸರನ್ನು ಗೌಪ್ಯವಾಗಿ ಇರಿಸಲಾಗುತ್ತದೆ. ಇದರ ಜೊತೆಗೆ ಇಲಾಖೆಯ ಆಪ್ನಲ್ಲೂ ಮಾಹಿತಿ ಹಂಚಿಕೊಳ್ಳಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಹಾಗೂ ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕರು, ಪಿಎಸ್ಐ, ಎಎಸ್ಐಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.















