ಸಾಗರ : ಶಿವಮೊಗ್ಗ ಅಲ್ಲಮಪ್ರಭು ಬಯಲಿನ ಮಾನವಧರ್ಮ ಮಂಟಪದಲ್ಲಿ ಮೇ 17ರಂದು ಸಂಜೆ 6ಕ್ಕೆ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ, ಬೃಹತ್ ಧರ್ಮಜಾಗೃತಿ ಸಮಾವೇಶ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮಹೋತ್ಸವ ಸಮಿತಿ ಉಪಾಧ್ಯಕ್ಷ ರುದ್ರಮುನಿ ಸಜ್ಜನ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 34 ವರ್ಷಗಳ ಹಿಂದೆ ಗಂಗಾಧರ ಸ್ವಾಮಿಗಳ ನೇತೃತ್ವದಲ್ಲಿ ಮೊದಲ ಬಾರಿಗೆ ಅಡ್ಡಪಲ್ಲಕ್ಕಿ ಮಹೋತ್ಸವ ನಡೆದಿತ್ತು. ತದನಂತರ ಮೇ 17ರಂದು ಎರಡನೇ ಬಾರಿಗೆ ನಡೆಯುತ್ತಿದ್ದು ಸುಮಾರು 50 ಸಾವಿರ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.
ಇದನ್ನೂ ಓದಿ > ಮಂಡಗದ್ದೆ ಬಳಿ ಬೈಕ್ ಡಿಕ್ಕಿಯಾಗಿ ಚಿರತೆ ಸಾವು
ಅಡ್ಡಪಲ್ಲಕ್ಕಿ ಮಹೋತ್ಸವ ಒಂದು ವಿಶೇಷ ಧಾರ್ಮಿಕ ಕಾರ್ಯಕ್ರಮವಾಗಿದ್ದು ಬಾಳೆಹೊನ್ನೂರು ಪೀಠ, ಉಜ್ಜಯಿನಿ ಪೀಠ, ಕೇದಾರ ಪೀಠ, ಶ್ರೀಶೈಲ ಪೀಠ ಕಾಶಿಪೀಠದ ಶ್ರೀಗಳನ್ನು ಹೊತ್ತ ಅಡ್ಡಪಲ್ಲಕ್ಕಿ ಮಹೋತ್ಸವ ಸುಮಾರು 4 ಕಿ.ಮೀ. ಸಂಚರಿಸಿ ಮಾನವಧರ್ಮ ಮಂಟಪಕ್ಕೆ ತಲುಪಲಿದೆ. ಈ ಭವ್ಯ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು, ಭಜನಾ ತಂಡಗಳು, ಶರಣ ಶರಣೆಯರು, ಭಕ್ತಾದಿಗಳು, ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ > ಪ್ರೇಯಸಿಯೊಂದಿಗೆ ಸೇರಿ ಗಂಡನ ಕೊಲೆ, ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್
ಇದೇ ಸಂದರ್ಭದಲ್ಲಿ ತಮ್ಮ ರಾಜಕೀಯ ಜೀವನದಲ್ಲಿ ಐವತ್ತು ವರ್ಷ ಪೂರೈಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಸಂಗಮೇಶ್ವರ್, ಬಿ.ವೈ.ವಿಜಯೇಂದ್ರ, ಎಸ್.ಎನ್.ಚನ್ನಬಸಪ್ಪ ಸೇರಿ ವಿಧಾನ ಪರಿಷತ್ ಹಾಲಿ ಮತ್ತು ಮಾಜಿ ಸದಸ್ಯರು, ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಸರ್ವರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಸಾಗರ ವೀರಶೈವ ಮಹಾಸಭಾ ಅಧ್ಯಕ್ಷ ಕೆ.ವಿ.ಪ್ರವೀಣ್ ಮಾತನಾಡಿದರು. ಗೋಷ್ಟಿಯಲ್ಲಿ ಮಲ್ಲಿಕಾರ್ಜುನ, ಪ್ರವೀಣಕುಮಾರ್, ವೀರಭದ್ರ ಜಂಬಿಗೆ ನಂದೀಶ್, ತೇಜಸ್ವಿ ಹಾಜರಿದ್ದರು.














