ಶಿವಮೊಗ್ಗ : ಸಿದ್ದರಾಮಯ್ಯನವರು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನ ತ್ಯಜಿಸಬಾರದು ಎಂದು ಆಗ್ರಹಿಸಿ ವಿವಿಧ ಅಹಿಂದಾ ಸಂಘಟನೆಗಳು, ಕುರುಬರ ಯುವಬಳಗ, ಕನಕ ಯುವಸೇನೆ, ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಇಂದು ನಗರದ ಶಿವಪ್ಪನಾಯಕ ವೃತ್ತದಲ್ಲಿ ಟೈರ್ ಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಇದನ್ನೂ ಓದಿ > ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ, ಸಿದ್ದರಾಮಯ್ಯ ಘೋಷಣೆ!
ಈ ಸಂದರ್ಭದಲ್ಲಿ ಕನಕ ಯುವಸೇನೆಯ ಅಧ್ಯಕ್ಷರಾದ ಸುರೇಶ್ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರ ರಾಜೀನಾಮೆಯನ್ನು ಅಂಗೀಕರಿಸಬಾರದು ಅವರು 5ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಬಿಡಬೇಕು. 2013 ಮತ್ತು 2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅಹಿಂದಾ ನಾಯಕ ಸಿದ್ಧರಾಮಯ್ಯನವರೇ ಕಾರಣ. 5 ಗ್ಯಾರಂಟಿಗಳನ್ನು ನೀಡಿ, ರಾಜ್ಯದ ಹಿಂದುಳಿದ ವರ್ಗಕ್ಕೆ ಮತ್ತು ಕಡುಬಡವರಿಗೆ ಅನ್ನರಾಮಯ್ಯ ಎಂದೇ ಹೆಸರು ಪಡೆದಿದ್ದಾರೆ. ಕಳಂಕರಹಿತ ಆಡಳಿತ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬಾರದು, ಒತ್ತಡ ಹೇರಿ ಅವರಿಂದ ರಾಜೀನಾಮೆ ಕೊಡಿಸಿದರೆ ರಾಜ್ಯಾದಾದ್ಯಂತ ಹೈಕಮಾಂಡ್ ವಿರುದ್ದವೇ ದೊಡ್ಡಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು. ಇಂದಿನ ಹೋರಾಟ ಕೇವಲ ಸಾಂಕೇತಿಕ ಅಷ್ಟೇ ಎಂದರು.
ವಾಟಾಳ್ ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿ ಅಹಿಂದಾವರ್ಗಕ್ಕೆ ಸಿದ್ಧರಾಮಯ್ಯನವರೇ ನಾಯಕರು. ಅವರನ್ನು ಹೈಕಮಾಂಡ್ ಕೆಳಗಿಳಿಸಿದರೆ ಅದು ಅಹಿಂದಾವರ್ಗಕ್ಕೆ ಮಾಡಿದ ಅನ್ಯಾಯವಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರ್ವನಾಶವಾಗಲಿದೆ. 5ವರ್ಷಗಳ ಆಡಳಿತದಲ್ಲಿ ಮುಖ್ಯಮಂತ್ರಿಯಾಗಿರಲು ಪಕ್ಷದ ಹೈಕಮಾಂಡ್ ಅವಕಾಶ ನೀಡಲೇಬೇಕು. ಐದು ಗ್ಯಾರೆಂಟಿಗಳ ಮೂಲಕ ಮನೆ ಮನೆಗೆ ತಲುಪಿದ್ದಾರೆ. ಹೆಣ್ಣು ಮಕ್ಕಳಿಗೆ 2000 ರೂ. ಗೃಹಲಕ್ಷ್ಮೀ ಯೋಜನೆ, ಶಕ್ತಿ ಯೋಜನೆ, ಯುವನಿಧಿ, ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದು ರಾಜ್ಯದ ಜನತೆಗೆ ನೆರವು ನೀಡಿದ್ದಾರೆ. ಅಭೂತಪೂರ್ವ ಆಡಳಿತ ನೀಡಿದ್ದಾರೆ. ಹಿಂದುಳಿದ ವರ್ಗದ ಕಣ್ಮಣಿಯಾಗಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯಪಾಲರು ಅವರ ರಾಜೀನಾಮೆ ಅಂಗೀಕರಿಸಬಾರದು. ಒಂದು ವೇಳೆ ಒತ್ತಡದಿಂದ ರಾಜೀನಾಮೆ ಕೊಡಿಸಿದರೆ ರಾಜ್ಯಾದ್ಯಂತ ಬೃಹತ್ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಇದನ್ನೂ ಓದಿ > ಹೃದಯಾಘಾತದಿಂದ ಕೆಎಸ್ಆರ್ಪಿ ಪೊಲೀಸ್ ಕಾನ್ಸ್ಟೇಬಲ್ ಸಾವು
ಪ್ರತಿಭಟನೆಯಲ್ಲಿ ಎರಡು ಟಗರುಗಳನ್ನು ಕರೆತರಲಾಗಿತ್ತು. ಈ ಸಂದರ್ಭದಲ್ಲಿ ಪ್ರಮುಕರಾದ ಕೇಶವ, ನಾಗೇಶ್, ನವೀನ್, ರಾಘವೇಂದ್ರ, ದಿವಾಕರ, ಹೆಚ್.ಆರ್.ದೊಡ್ಡಪ್ಪ ಮತ್ತಿತ್ತರರಿದ್ದರು.














