ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿವೆ. ಒಬ್ಬ ವಿದ್ಯಾರ್ಥಿ ಎಷ್ಟೇ ಬುದ್ಧಿವಂತನಾಗಿದ್ದರೂ, ಅವನು/ಅವಳು ಪರೀಕ್ಷೆಗೆ ಎಷ್ಟು ಚೆನ್ನಾಗಿ ತಯಾರಿ ನಡೆಸಿದ್ದರೂ, ಪರೀಕ್ಷೆಯ ಒತ್ತಡವು ಎಲ್ಲ ವಿದ್ಯಾರ್ಥಿಗಳಲ್ಲಿ ಸಾಮಾನ್ಯವಾಗಿದೆ. ವಾಸ್ತವವಾಗಿ ಸರಾಸರಿ ವಿದ್ಯಾರ್ಥಿಗಳಿಗೆ ಹೋಲಿಸಿದರೆ ತರಗತಿಯ ಟಾಪರ್ಗಳಲ್ಲಿ ಈ ಒತ್ತಡ ಅಧಿಕವಾಗಿದೆ.
ಒತ್ತಡ ದಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಎಲ್ಲವನ್ನೂ ಮರೆತು ಬಿಡುತ್ತಾರೆ ಎಂದು ಭಾವಿಸುತ್ತಾರೆ. ಅಲ್ಲವೇ? ಹಾಗಾದರೆ ಈ ಸಾರ್ವತ್ರಿಕ ಸಮಸ್ಯೆಗೆ ಪರಿಹಾರವೇನು? ಯೋಗ ಮತ್ತು ಸಾತ್ವಿಕ ಆಹಾರ ಪದ್ಧತಿಯಲ್ಲಿ ಈ ಸಮಸ್ಯೆಗೆ ಕೆಲವು ಸರಳ ಮಾರ್ಗೋಪಾಯಗಳಿವೆ.
ಮೊದಲನೆಯದಾಗಿ, ಪ್ರತೀ ಸಂದರ್ಭದಲ್ಲೂ ಮನಸ್ಸನ್ನು ಶಾಂತವಾಗಿಡಲು ಕಲಿಯುವುದು ಇದಕ್ಕೆ ಉತ್ತಮ ಪರಿಹಾರವಾಗಿದೆ. ಈಗ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಬಹುದು. ಧ್ಯಾನದ ಮೂಲಕ ಮನಸ್ಸನ್ನು ಕರಗತ ಮಾಡಿಕೊಳ್ಳುವುದು ಇದಕ್ಕೆ ಉತ್ತರ. ಧ್ಯಾನದ ಮೂಲಕ ಭಾವನೆಗಳನ್ನು ನಿಯಂತ್ರಿಸಲು ಕಲಿಯಿರಿ, ಸರಳ ಮತ್ತು ಮೂಲಭೂತ ಯೋಗಾಸನಗಳು ಮತ್ತು ಪ್ರಾಣಾ ಯಾಮಗಳನ್ನು ನಿಯಮಿತವಾಗಿ ಅಭ್ಯಾಸ ಮಾಡಿ ಮತ್ತು ಯಾವಾಗಲೂ ನಿಮ್ಮ ಮನಸ್ಸನ್ನು ಸಕಾರಾತ್ಮಕ ಆಲೋಚನೆಗಳೊಂದಿಗೆ ಪೋಷಿಸಿ. “ನನಗೆ ಅದನ್ನು ಮಾಡುವ ಸಾಮರ್ಥ್ಯವಿಲ್ಲ’, “ನಾನು ಹುಚ್ಚನಾ ಗುತ್ತೇನೆ’, “ಗಣಿತ ಕಷ್ಟ’, “ನನ್ನ ಅದೃಷ್ಟ ಚೆನ್ನಾಗಿಲ್ಲ’, “ನನಗೆ ಏನೂ ನೆನಪಾಗುತ್ತಿಲ್ಲ’ ಎಂಬೆಲ್ಲ ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ. “ಇದು ನನ್ನಿಂದ ಸಾಧ್ಯ; ನಾನಿದನ್ನು ಮಾಡಬಲ್ಲೆ’ ಎನ್ನುವ ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳುವುದು ಅತೀ ಆವಶ್ಯಕ. ಬ್ರಾಹ್ಮರೀ/ ಭ್ರಮರಿ ಪ್ರಾಣಾಯಾಮದ ಅಭ್ಯಾಸ ಕೂಡ ವಿದ್ಯಾರ್ಥಿಗಳ ನೆನಪಿನ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಉತ್ತಮ ಅಭ್ಯಾಸ. ಭ್ರಮರಿ ಪ್ರಾಣಾಯಾಮ ಅಭ್ಯಾಸ ಮಾಡುವಾಗ ಉಂಟಾಗುವ ಹಮ್ಮಿಂಗ್ ಧ್ವನಿಯು ವೇಗಸ್ ನರವನ್ನು ಉತ್ತೇಜಿಸಿ ಮೆದುಳಿನ ಕೋಶಗಳನ್ನು ಸಕ್ರಿಯಗೊಳಿಸು ತ್ತದೆ ಎಂದು ನಂಬಲಾಗಿದ್ದು, ಇದು ಮನಸ್ಸಿಗೆ ಆರಾಮ ಮತ್ತು ಶಾಂತಿಯನ್ನು ನೀಡುತ್ತದೆ. ಇದರಿಂದ ಒತ್ತಡ ಕಡಿಮೆಯಾಗುವುದರ ಜತೆಗೆ ಏಕಾಗ್ರತೆ ಹೆಚ್ಚಾಗುತ್ತದೆ. ಐದು ಇಂದ್ರಿಯಾಂಗಗಳನ್ನು ಐದು ಬೆರಳುಗಳಿಂದ ಸ್ಪರ್ಶಿಸಿ ಮಾಡುವ ಭ್ರಮರಿ ಪ್ರಾಣಾಯಾಮ ಹೆಚ್ಚು ಪರಿಣಾಮ ಕಾರಿಯಾಗಿರುತ್ತದೆ. ಭಸ್ತ್ರಿಕ ಪ್ರಾಣಾಯಾಮ ಕೂಡ ಒತ್ತಡ ನಿವಾರಣೆಗೆ ಉತ್ತಮ ಅಭ್ಯಾಸ. ಸಕಾರಾತ್ಮಕ ಸ್ವ-ಸೂಚನೆಗಳೊಂದಿಗೆ ಶ್ವಾಸಾಭ್ಯಾಸಗಳು ಸಹ ಒತ್ತಡ ನಿವಾರಣೆಗೆ ಸಹಕಾರಿಯಾಗುತ್ತವೆ.
ಪರಿಣತರ ಮಾರ್ಗದರ್ಶನದಲ್ಲಿ ಧ್ಯಾನ ಹಾಗೂ ಮಾರ್ಗದರ್ಶಿತ ಶವಾಸನವೂ ಪರೀಕ್ಷಾ ಅವಧಿಯಲ್ಲಿ ಬಹಳ ನೆರವಾಗುತ್ತವೆ. ಸರಿಯಾಗಿ ಮಾಡಿದ 10 ನಿಮಿಷಗಳ ಶವಾಸನವು 4-5 ಗಂಟೆಗಳ ನಿದ್ರೆಗೆ ಸಮಾನ, ಏಕೆಂದರೆ ಇದರಿಂದ ಆಳವಾದ ವಿಶ್ರಾಂತಿ ಸಿಗುತ್ತದೆ. ಯೋಗಾಭ್ಯಾಸದ ಅನಂತರ ನಮ್ಮ ದೇಹದಲ್ಲಿನ ರಕ್ತಪ್ರವಾಹಕ್ಕೆ ಬಿಡುಗಡೆಯಾಗುವ ಡೊಪಮಿನ್, ಎಂಡೋರ್ಫಿನ್ ಹಾಗೂ ಸೆರೊಟೊನಿನ್ ಹಾರ್ಮೋನ್ಗಳು ಮನಸ್ಸಿಗೆ ಸಾಕಷ್ಟು ಶಾಂತಿ ಮತ್ತು ವಿಶ್ರಾಂತಿಯನ್ನು ನೀಡುತ್ತವೆ. ಅಲ್ಲದೇ ಅತಿಯಾದ ಮಾನಸಿಕ ಒತ್ತಡದಿಂದ ನಮ್ಮ ದೇಹದಲ್ಲಿ ಬಿಡುಗಡೆ ಯಾಗುವ ಕೊರ್ಟಿಸೋಲ್ ಎನ್ನುವ ಒತ್ತಡಕ್ಕೆ ಕಾರಣ ಎನ್ನಲಾಗುವ ಹಾರ್ಮೋನ್ನ ಮಟ್ಟವನ್ನು ಕೂಡ ಯೋಗಾಭ್ಯಾಸ ಕಡಿಮೆ ಮಾಡುತ್ತದೆ. ಹಾಗಾಗಿ ಎಲ್ಲ ವಿದ್ಯಾರ್ಥಿಗಳು ತಮ್ಮ ದೈನಂದಿನ ದಿನಚರಿಯಲ್ಲಿ ಕನಿಷ್ಠ ೨೦ ನಿಮಿಷಗಳನ್ನು ಯೋಗದ ಅಭ್ಯಾಸಕ್ಕೆ ಮೀಸಲಿಡುವುದು ಉತ್ತಮ. ಹಾಗಂತ ಯುಟ್ಯೂಬ್ ನೋಡಿ ಕೊಂಡು ಸ್ವಯಂ ಅಭ್ಯಾಸ ಮಾಡುವುದು ಅಷ್ಟು ಪರಿಣಾಮಕಾರಿ ಅಲ್ಲ. ಪರಿಣತ ಯೋಗ ಗುರುಗಳ ಮಾರ್ಗದರ್ಶನದಲ್ಲಿ ಯೋಗ ಕಲಿಯುವುದು ಯಾವಾಗಲೂ ಅತ್ಯಂತ ಉತ್ತಮ. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸ್ಥಿತಿಯಲ್ಲಿ ವ್ಯತ್ಯಾಸವಿರುತ್ತದೆ. ಆ ಸ್ಥಿತಿಗೆ ಅನುಗುಣವಾಗಿ ಅಭ್ಯಾಸ ಮಾಡಿದರೆ ಉತ್ತಮ ಫಲಿತಾಂಶ ಸಾಧ್ಯ.
ಎರಡನೆಯದಾಗಿ, ಪರೀಕ್ಷೆಯ ಸಮಯದಲ್ಲಿ ಸಾತ್ವಿಕ ಆಹಾರ ಸೇವನೆ ಕೂಡ ಬಹು ಮಹತ್ವದ್ದಾಗಿದೆ. ಸಾತ್ವಿಕ ಆಹಾರ ದೇಹವನ್ನು ಪೋಷಿಸಿ, ಮನಸ್ಸನ್ನು ಶುದ್ಧೀಕರಿಸಿ, ಗರಿಷ್ಠ ಕಾರ್ಯಕ್ಷಮತೆಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಸಾತ್ವಿಕ ಆಹಾರದಲ್ಲಿ ಧಾನ್ಯಗಳು, ಹಣ್ಣುಗಳು, ತರಕಾರಿಗಳು, ಬೀಜಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳು, ಮೊಳಕೆಕಾಳುಗಳು, ಜೇನುತುಪ್ಪ, ತುಪ್ಪ, ಕಾಳುಗಳು ಇತ್ಯಾದಿ ಒಳಗೊಂಡಿರುತ್ತವೆ. ಇವು ಗುಣದಲ್ಲಿ ಲಘು, ಆರೋಗ್ಯಕರ ಮತ್ತು ಸುಲಭವಾಗಿ ಜೀರ್ಣ ವಾಗುವವು. ಬ್ರಾಹ್ಮಿ ಎಲೆ, ಬಾದಾಮಿ ಹಾಗೂ ಆಕ್ರೋಟು (Walnut) ಗಳನ್ನು ದೈನಂದಿನ ಆಹಾರದಲ್ಲಿ ಸೇರಿಸುವುದು ಕೂಡ ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯನ್ನು ಸುಧಾರಿಸಲು ಸಹಕಾರಿಯಾಗಿದೆ.
ತಾಮಸಿಕ ಆಹಾರಗಳಾದ ಸಂರಕ್ಷಕ ವಸ್ತುಗಳು, ಇಮಲ್ಸಿಫೈಯರ್ಗಳು, ಕೃತಕ ಬಣ್ಣಗಳು ಮತ್ತು ಕೃತಕ ಸೇರ್ಪಡೆಗಳನ್ನು ಹೊಂದಿರುವ ಆಹಾರಗಳನ್ನು ಸೇವಿಸಬಾರದು. ಕಾಬ್ಸೊ ನೇಟೆಡ್ ಪಾನೀಯಗಳು, ಚಾಕಲೇಟ್, ಬಿಸ್ಕತ್ತುಗಳು, ಅತಿಯಾದ ಸಿಹಿ ಪದಾರ್ಥಗಳು, ಮೈದಾದಿಂದ ತಯಾರಿಸಿದ ಆಹಾರ ವಸ್ತುಗಳನ್ನು ಪರೀಕ್ಷೆ ಮುಗಿಯುವವರೆಗೆ ಮುಟ್ಟದೇ ಇರುವುದು ಬಹು ಉತ್ತಮ. ಇವು ಶರೀರವನ್ನು ಜಡ, ಆಲಸಿ ಹಾಗೂ ನಿದ್ರಾದಾಯಕವಾಗಿಸುತ್ತದೆ. ಇವು ನಮ್ಮ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತವೆ ಮತ್ತು ಮನಸ್ಸಿನಲ್ಲಿ ನಿರಾಶೆ, ದುಃಖ, ಕೋಪ, ಭಯ ಮೊದಲಾದ ನಕಾರಾತ್ಮಕ ಭಾವನೆಗಳನ್ನು ತುಂಬುತ್ತವೆ.
ಮೂರನೆಯದು, ಪರೀಕ್ಷೆಯ ಸಮಯದಲ್ಲಿ ಉತ್ತಮ ನಿದ್ದೆ ಮಾಡುವುದು ಬಹಳ ಮುಖ್ಯ. ಉತ್ತಮ ನಿದ್ರೆಯಿಂದ ಉತ್ತಮ ಅಂಕಗಳನ್ನು ಪಡೆಯಬಹುದು. ನಿದ್ರಾಹೀನತೆ ಸ್ಮರಣಶಕ್ತಿ, ಏಕಾಗ್ರತೆ, ಸೃಜನಶೀಲತೆ ಹಾಗೂ ತಾರ್ಕಿಕ ಶಕ್ತಿಗೆ ಹಾನಿ ಮಾಡುತ್ತದೆ. ಸರಳವಾಗಿ ಹೇಳುವುದಾದರೆ, ನಿದ್ರಾಹೀನತೆ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನಕ್ಕಾಗಿ ಅಗತ್ಯವಿರುವ ಎಲ್ಲ ಕೌಶಲಗಳನ್ನು ಹಾಳು ಮಾಡುತ್ತದೆ. ಉತ್ತಮ ನಿದ್ರೆ ಪರೀಕ್ಷೆಯ ಸಮಯದಲ್ಲಿ ಮಾಹಿತಿ ನೆನಪಿಗೆ ತರುವಲ್ಲಿ ಸಹಾಯ ಮಾಡುತ್ತದೆ. ನೆನಪಿರಲಿ, 6 ಗಂಟೆಗಳ ಗಾಢ ನಿದ್ದೆ ಪರೀಕ್ಷೆಯ ಸಮಯದಲ್ಲಿ ಕೂಡ ಬೇಕೇ ಬೇಕು.
ಅಂತಿಮವಾಗಿ, ಗ್ಯಾಜೆಟ್ಗಳು ಮತ್ತು ಸಾಮಾಜಿಕ ಮಾಧ್ಯಮಗಳಿಂದ ದೂರವಿರಿ. ಒತ್ತಡ ನಿರ್ವಹಣ ಆಯಪ್ ಗಳಿಂದ ಕೂಡ ದೂರವಿರುವುದು ಉತ್ತಮ. ಮೊಬೈಲ್ ಫೋನ್ಗಳ ದೀರ್ಘಾವಧಿಯ ಬಳಕೆಯಿಂದ ತಲೆನೋವು, ನಿರಾಶೆ, ಕಡಿಮೆ ಗಮನ, ಏಕಾಗ್ರತೆಯ ಕೊರತೆ, ನಿದ್ರಾ ಸಮಸ್ಯೆಗಳು ಮತ್ತು ಕಿರಿಕಿರಿತನ ಇತ್ಯಾದಿ ಸಮಸ್ಯೆಗಳು ಕಾಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಪರೀಕ್ಷೆಯ ಸಮಯದಲ್ಲಿ ಮೊಬೈಲ್ ಫೋನ್ಗೆ ಖಚಿತವಾದ “ಬಿಗ್ ನೋ’ ಬೇಕೇ ಬೇಕು!
-ನಿವೇದಿತಾ ಭಟ್, ಮಂಗಳೂರು













