ಶಿವಮೊಗ್ಗ: ಭಯವೇ ಧರ್ಮದ ಮೂಲ ಎಂದು ವ್ಯಾಖ್ಯಾನಿಸುತ್ತಿರುವ ಇವತ್ತಿನ ಜಾಗತಿಕ ಸಂದರ್ಭದಲ್ಲಿ ಬಸವಣ್ಣವರು ಹೇಳಿದ ದಯವೇ ಧರ್ಮದ ಮೂಲವಯ್ಯ ಎಂಬದನ್ನು ಗಟ್ಟಿಯಾಗಿ ಸಾರುವ ಅಗತ್ಯವಿದೆ ಎಂದು ಶಿವಮೊಗ್ಗ ಬಸವಕೇಂದ್ರ ಹಾಗೂ ಚಿಕ್ಕಮಗಳೂರು ಶ್ರೀ ಬಸವತತ್ವ ಪೀಠದ ಡಾ. ಶ್ರೀ ಮ. ನಿ. ಪ್ರ. ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದ್ದಾರೆ.
ಯೂರೋಪ್ ಬಸವ ಸಮಿತಿ ಜರ್ಮನಿಯ ಎರ್ಲಂಗನ್ ನಗರದಲ್ಲಿ ಆಯೋಜಿಸಿದ್ದ ಬಸವ ಜಯಂತಿಯ ಸಾನ್ನಿಧ್ಯವಹಿಸಿ ಅಶೀರ್ವಚನ ನೀಡಿದರು.
ಇಂದು ಹಿಂಸೆಯನ್ನು ಎತ್ತಿಹಿಡಿಯುವ ವಿಕೃತಿ ಮೆರೆಯುತ್ತಿದೆ. ಬಸವಣ್ಣ ಧರ್ಮವನ್ನು ಅದರ ಮೂಲ ಅರ್ಥದಲ್ಲಿ ವ್ಯಾಖ್ಯಾನಿಸಿ ಎಲ್ಲರಲ್ಲೂ ದಯೆಯೇ ಮುಖ್ಯವಾಗಬೇಕು. ದಯೆಯುಳ್ಳದ್ದೇ ಧರ್ಮ, ಅಲ್ಲವಾದುದು ಅಧರ್ಮವೆಂದೇ ಹೇಳಿದ್ದಾರೆ. ದಯೆಯು ಕೇವಲ ಮಾನವರಲ್ಲಷ್ಟೇ ಅಲ್ಲ, ಸಕಲ ಜೀವರಾಶಿಗಳಲ್ಲಿ ಇರಬೇಕು ಎಂಬುದು ಬಸವಣ್ಣನವರು ವ್ಯಾಖ್ಯಾನಿಸಿದ ಧರ್ಮದ ನಿಯಮವಾಗಿದೆ ಎಂದರು.
ಇದನ್ನೂ ಓದಿ > ಮೇ.20ರಂದು ಶಿವಮೊಗ್ಗದಲ್ಲಿ ಮೆಡಿಕಲ್ಗಳು ಬಂದ್, ಕಾರಣವೇನು?
ಇದನ್ನೂ ಓದಿ > ಶಿವಮೊಗ್ಗ, ಮಳೆಗಾಳಿಗೆ ಉರುಳಿದ ಮರ, ಗಂಟೆಗಟ್ಟಲೇ ರೈಲು ಸಂಚಾರದಲ್ಲಿ ವ್ಯತ್ಯಯ!
ಅತಿವೇಗ, ಆಸೆ ಮತ್ತು ಸಂಯಮರಾಹಿತ್ಯ ಗುಣಗಳು ಇಂದು ಜೀವನವನ್ನು ಅಸಹನೀಯಗೊಳಿಸಿವೆ. ವ್ಯಕ್ತಿಯ ಮಟ್ಟದಿಂದ ಜಾಗತಿಕ ಮಟ್ಚದವರೆಗೆ ಎಲ್ಲರೂ ಉನ್ಮಾದದಲ್ಲೇ ಇರುವ ಪರಿಸ್ಥಿತಿ ಬಂದೊದಗಿದೆ. ವ್ಯಕ್ತಿಯು ಕೌಟುಂಬಿಕ ಸಾಮರಸ್ಯ ಕಳೆದುಕೊಂಡು ಪರಸ್ಪರ ದ್ವೇಷ ಅಸೂಯೆಗಳ ಉನ್ಮಾದದಲ್ಲಿದ್ದರೆ ಜಾಗತಿಕವಾಗಿ ದೇಶಗಳು ಯುದ್ದೋನ್ಮಾದದಲ್ಲಿ ಮುಳುಗಿವೆ. ಇವೆರಡರಿಂದಲೂ ದೂರವಿರುವವರು ಈ ಉನ್ಮಾದಗಳನ್ನು ರೋಚಕತೆಯಾಗಿಸಿಕೊಂಡು ಉನ್ಮತ್ಥರಾಗಿ ಸುಖಿಸುತ್ತಿದ್ದಾರೆ. ಇವಾವುಗಳೂ ಉತ್ತಮ ಬೆಳವಣಿಗೆಯ ಲಕ್ಷಣಗಳಲ್ಲ ಎಂದು ವಿಶ್ಲೇಷಿಸಿದರು.

ಕನ್ನಡಗರಿಗೆ ಜರ್ಮನಿ ಎಂದಾಕ್ಷಣ ನೆನಪಾಗುವುದು ರೆವರೆಂಡ್ ಫರ್ಡಿನೆಂಡ್ ಕಿಟೆಲ್ ಅವರು. ಕನ್ನಡ ಸಾಹಿತ್ಯ, ಇತಿಹಾಸಗಳಿಗೆ ಅಪಾರ ಕೊಡುಗೆ ನೀಡಿದ ಕಿಟೆಲ್ ಜರ್ಮನಿಯವರಾದರೂ ಕನ್ನಡ ಭಾಷೆ ಇತಿಹಾಸಗಳ ಪ್ರಜ್ಞೆಯುಳ್ಳವರೆಲ್ಲರ ದೃಷ್ಟಿಯಲ್ಲಿ ಕನ್ನಡದವರೇ ಆಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಜರ್ಮನ್ ನಲ್ಲಿರುವ ಭಾರತೀಯ ರಾಯಭಾರಿ ಅಜಿತ್ ವಿನಾಯಕ ಗುಪ್ತೆ ಮಾತನಾಡಿ, ಬಸವಣ್ಣ ಒಬ್ಬ ತತ್ವಜ್ಞಾನಿ, ರಾಜಕಾರಣಿ ಮತ್ತು ಸಾಮಾಜಿಕ ಸುಧಾರಕ ಮಾತ್ರವಲ್ಲದೆ ದೈವಿಕ ಮತ್ತು ದೈನಂದಿನ ಜೀವನದ ನಡುವಿನ ಅಂತರವನ್ನು ಕಡಿಮೆ ಮಾಡಿದ ಆಧ್ಯಾತ್ಮಿಕ ಚೈತನ್ಯ ಮತ್ತು ಜಾತಿ, ವರ್ಗ ಮತ್ತು ಲಿಂಗ ತಾರತಮ್ಯವನ್ನು ಪ್ರಸಿದ್ಧವಾಗಿ ತಿರಸ್ಕರಿಸಿದ ವರ್ಗರಹಿತ ಸಮಾಜದ ಉಗ್ರ ಪ್ರತಿಪಾದಕರಾಗಿದ್ದರು ಎಂದರು.
ವಿಶ್ವದ ಮೊದಲ ಸಂಸತ್ತು ಎಂದು ಪರಿಗಣಿಸಲಾದ ಅವರ ಅನುಭವ ಮಂಟಪವು ಸಾರ್ವಜನಿಕ ಜೀವನದಲ್ಲಿ ಯಾವುದೇ ತಾರತಮ್ಯವನ್ನು ಲೆಕ್ಕಿಸದೆ ಎಲ್ಲರ ಸಾರ್ವತ್ರಿಕ ಭಾಗವಹಿಸುವಿಕೆಗೆ ಅಡಿಪಾಯ ಹಾಕಿತು ಎಂದು ತಿಳಿಸಿದರು.
ಬಸವಣ್ಣನವರ ಮತ್ತೊಂದು ಆಳವಾದ ಚಿಂತನೆಯೆಂದರೆ ಭಕ್ತಿ ಮತ್ತು ಘನತೆ ಭವ್ಯ ಕಟ್ಟಡಗಳಲ್ಲಿ ಕಂಡುಬರುವುದಿಲ್ಲ, ಆದರೆ ಮಾನವ ಚೈತನ್ಯದೊಳಗೆ ಕಂಡುಬರುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಅವನ ಅಥವಾ ಅವಳ ಹಿನ್ನೆಲೆಯನ್ನು ಲೆಕ್ಕಿಸದೆ ಅಂತರ್ಗತ ದೈವತ್ವವನ್ನು ಹೊಂದಿದ್ದಾನೆ ಎಂದು ಅವರು ನಂಬಿದ್ದರು. ಇದು ಅವರು ಪ್ರತಿಪಾದಿಸಿದ ಸಾಮಾಜಿಕ ಸುಧಾರಣೆ ಮತ್ತು ಸಮಾನತೆಯ ಅಡಿಪಾಯವಾಗಿದೆ, ಇದು ಆಧುನಿಕ ಯುರೋಪಿನಲ್ಲಿ ಮತ್ತು ಭಾರತದಲ್ಲಿ ಪ್ರತಿಧ್ವನಿಸುತ್ತದೆ ಎಂದು ವಿಶ್ಲೇಷಿಸಿದರು.
ನಾವು ಗಡಿಗಳನ್ನು ಮೀರಿದ ಸಹೋದರತ್ವದ ಮನೋಭಾವವನ್ನು ಉತ್ತೇಜಿಸುತ್ತೇವೆ. ಸಮಗ್ರತೆಯಿಂದ ಬದುಕುವುದು ಪರಂಪರೆಗೆ ನಾವು ಸಲ್ಲಿಸಬಹುದಾದ ಶ್ರೇಷ್ಠ ಗೌರವ. ಇಂದಿನಂತೆ ಜಗತ್ತಿಗೆ ಸಾರ್ವತ್ರಿಕ ಸಹೋದರತ್ವದ ಮಹತ್ವವನ್ನು ಒತ್ತಿಹೇಳಿದ ಬಸವಣ್ಣನವರಂತಹ ಚಿಂತಕರ ಅಗತ್ಯವಿದೆ ಎಂದು ನಾನು ಬಲವಾಗಿ ನಂಬುತ್ತೇನೆ ಎಂದು ಹೇಳಿದರು.
ಇಂಡಾಲಜಿಸ್ಟ್ ಮತ್ತು ಪ್ರೊಫೆಸರ್ ದಕ್ಷಿಣ ಏಷ್ಯಾದ ಅಧ್ಯಯನಗಳ ವಿಭಾಗದ ಪ್ರೊ. ಡಾ. ರಾಬರ್ಟ್ ಜೆ ಝೈಡೆನ್ಬೋಸ್ ಅವರು ಮಾತನಾಡಿ, ದಾಸೋಹ ಅನ್ನುವ ವಿಚಾರ ಸರ್ವೋದಯ ತತ್ವದ ಆಧಾರಿತದ್ದು. ಅದು ಸಿದ್ಧಾಂತಹಕ್ಕೂ ಮೀರಿದ ಜೀವನದ ಫಿಲಾಸಫಿ.”ಭಾರತೀಯರಾದ ನೀವುಗಳು , ನೀವು ಯಾವ ವಿಚಾರದ ಭೂಮಿಯವರು ಎಂಬ ಅರಿವು ಇರಲಿ”, ಎಂದು ಘೋಷಿಸಿದರು.
ಚಿಕ್ಕಮಗಳೂರಿನ ಐಸಿರಿ ಫೌಂಡೇಷನ್ನ ನಿರ್ದೇಶಕರಾದ ರೋಹನ್ ಭಾರ್ಗವಪುರಿ ಮಾತನಾಡಿ, ಬಸವಣ್ಣನವರ ಮೂರು ಮೂಲಭೂತ ವಿಷಯಗಳಾದ ದಾಸೋಹ, ಸಮಾನತೆ ಹಾಗೂ ಕಾಯಕತ್ವ ಇಡೀ ಜಗತ್ತಿಗೆ ಒಂದು ಮಾದರಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎರ್ಲಾಂಗೆನ್ ನಗರದ ಉಪಮೇಯರ್ ಫ್ರೌ ಇವಾ ಲಿನ್ಹಾರ್ಟ್, ವಿಹೆಚ್ಪಿ ಯೂರೋಪ್ ಪ್ರತಿನಿಧಿ ರಾಹುಲ್ ನಾರಾಯಣ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಬಸವ ಸಮಿತಿ ಯುರೋಪಿನ ಅಧ್ಯಕ್ಷರಾದ ವಿಜಯ್ ಕುಮಾರ್ ಮತ್ತು ಕಾರ್ಯಕಾರಿ ಮಂಡಳಿಯವರು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮೊದಲು ಭಾರತೀಯ ಜಾನಪದ ಕಲಾ ತಂಡಗಳೊಂದಿಗೆ ವಿಶ್ವಗುರು ಬಸವಣ್ಣನವರ ಭಾವಚಿತ್ರದ ಪಲ್ಲಕ್ಕಿ ಉತ್ಸವ ನೆರವೇರಿಸಿ ಪೂಜೆ ಸಲ್ಲಿಸಲಾಯಿತು.















