1. ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ, ಪತಿಗೆ ಜೈಲು ಶಿಕ್ಷೆ, ದಂಡ
ಶಿವಮೊಗ್ಗ: ವರದಕ್ಷಿಣೆ ಹಾಗೂ ಸೈಟ್ಗಾಗಿ ಪತ್ನಿಗೆ ಮಾನಸಿಕ, ದೈಹಿಕ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿದ್ದ ಪತಿಗೆ ಶಿಕ್ಷೆ ವಿಧಿಸಿ ಇಲ್ಲಿನ ಎರಡನೇ ಜೆಎಂಎಫ್ಸಿ ನ್ಯಾಯಾಲಯವು ತೀರ್ಪು ನೀಡಿದೆ.
ಬಳ್ಳಾರಿ ಜಿಲ್ಲೆಯ ಕೊಟ್ಟೂರು ನಿವಾಸಿ ಮಂಜುನಾಥ್ ಶಿಕ್ಷೆಗೆ ಒಳಗಾದ ವ್ಯಕ್ತಿ.
ಕಲಂ 498 (ಎ) ಅಪರಾಧಕ್ಕೆ ೩ ವರ್ಷ ಸಾದಾ ಸಜೆ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ಹಾಗೂ ಐಪಿಸಿ ಕಲಂ 506 ರ ಅಡಿ 2 ವರ್ಷ ಸಾದಾ ಶಿಕ್ಷೆ ಮತ್ತು 5 ಸಾವಿರ ದಂಡವನ್ನು ವಿಧಿಸಲಾಗಿದೆ.
ನ್ಯಾಯಾಧೀಶರಾದ ಸಿದ್ಧರಾಜು ಎನ್ ಕೆ ಅವರು 24-06-2026 ರಂದು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಜಿ ಕೆ ಕಿರಣ್ಕುಮಾರ್ ಅವರು ವಾದ ಮಂಡಿಸಿದ್ದರು.
ಪ್ರಕರಣದ ವಿವರ
ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ತರುವಂತೆ ಹಾಗೂ ಸೈಟ್ ಕೊಡಿಸುವಂತೆ ಪತಿಯು ಮಾನಸಿಕ ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಪತ್ನಿಯು ೨೦೧೭ ರಲ್ಲಿ ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಅಂದಿನ ತನಿಖಾಧಿಕಾರಿಗಳಾಗಿದ್ದ ಪ್ರಭಾವತಿ ಸಿ ಅವರು ೨೦೧೮ ರಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.
ಇದನ್ನೂ ಓದಿ > ವೃದ್ಧೆಯ ಕೊಲೆ, ಸುತ್ತುಕೋಟೆ ವ್ಯಕ್ತಿಗೆ ಜೀವಾವಧಿ ಶಿಕ್ಷೆ!

ಇದನ್ನೂ ಓದಿ > ಶಿವಮೊಗ್ಗ ರಾಗಿಗುಡ್ಡದಲ್ಲಿ ಡ್ರಗ್ಸ್ ಮಾರಾಟ!, ಗ್ರಾಮಾಂತರ ಪೊಲೀಸರ ದಾಳಿ, ಬಂಧನ
2. ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಶಾಸಕ ಚನ್ನಬಸಪ್ಪ
ಶಿವಮೊಗ್ಗ: “ಶಿವಮೊಗ್ಗದ ಸಾಂಪ್ರದಾಯಿಕ ಕ್ರೀಡಾ ಪರಂಪರೆಯ ಜೀವಂತಿಕೆ ಹಾಗೂ ಕ್ಷೇತ್ರದ ನಿರಾಶ್ರಿತ ಬಡ ಕುಟುಂಬಗಳ ಹಕ್ಕುಪತ್ರದ ಬೇಡಿಕೆಗೆ ನ್ಯಾಯ ಒದಗಿಸುವುದು ನಮ್ಮ ಆದ್ಯತೆಯಾಗಿದೆ” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ತಿಳಿಸಿದ್ದಾರೆ.
ಬೆಂಗಳೂರು ಭೇಟಿಯ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳು ಹಾಗೂ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿಯಾಗಿ ಶಿವಮೊಗ್ಗ ನಗರ ಮತ್ತು ತಾಲೂಕಿಗೆ ಸಂಬಂಧಿಸಿದ ಪ್ರಮುಖ ಎರಡು ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿ ಜ್ಞಾಪನಾ ಪತ್ರ ಸಲ್ಲಿಸಿದರು.
ಕ್ರೀಡಾ ಶಾಲೆಯ ಪುನಶ್ಚೇತನ: ಶಿವಮೊಗ್ಗ ಜಿಲ್ಲೆಯು ಕುಸ್ತಿ ಕ್ರೀಡೆಗೆ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ಇಲ್ಲಿನ ನೂರಾರು ಕ್ರೀಡಾಪಟುಗಳು ದೇಶ-ವಿದೇಶಗಳಲ್ಲಿ ಸಾಧನೆ ಮಾಡಿ ಜಿಲ್ಲೆಗೆ ಗೌರವ ತಂದಿದ್ದಾರೆ. ಶಿವಮೊಗ್ಗ ನಗರದಲ್ಲಿ ‘ಕುಸ್ತಿ ಕ್ರೀಡಾ ಶಾಲೆ’ಯನ್ನು ಮುಂದುವರಿಸಲು ಅಗತ್ಯ ಅನುದಾನ ಹಾಗೂ ಮೂಲಸೌಕರ್ಯ ಒದಗಿಸಬೇಕು ಎಂದು ಶಾಸಕರು ಕ್ರೀಡಾ ಇಲಾಖೆಯ ಪರವಾಗಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಮಿಳಘಟ್ಟ ನಿವಾಸಿಗಳ ಹಿತರಕ್ಷಣೆ: ಶಿವಮೊಗ್ಗ ತಾಲೂಕು ಕಸಬಾ-01 ಹೋಬಳಿಯ ಮಿಳಘಟ್ಟ ಗ್ರಾಮದ ಸರ್ವೆ ನಂಬರ್ 92ರ ಸರ್ಕಾರಿ ಕರಾಬು ಗುಂಡುತೋಪು ಜಾಗದಲ್ಲಿ ದಶಕಗಳಿಂದ ನೂರಾರು ಬಡ ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಆದರೆ ಅವರಿಗೆ ಇಂದಿನವರೆಗೂ ಹಕ್ಕುಪತ್ರ ದೊರೆತಿಲ್ಲ. ಈ ಸೂಕ್ಷ್ಮ ಸಮಸ್ಯೆಯನ್ನು ಕಂದಾಯ ಇಲಾಖೆಯ ನಿಯಮಾವಳಿಗಳ ಅನ್ವಯ ವಿಶೇಷ ಪ್ರಕರಣವೆಂದು ಪರಿಗಣಿಸಿ, ಅಲ್ಲಿನ ಅರ್ಹ ನಿವಾಸಿಗಳಿಗೆ ತಕ್ಷಣವೇ ಹಕ್ಕುಪತ್ರಗಳನ್ನು ವಿತರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಶಾಸಕರ ಅಹವಾಲುಗಳನ್ನು ಆಲಿಸಿದ ಮಾನ್ಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
3. ನವೋದಯ ವಿದ್ಯಾಲಯದಲ್ಲಿ 11ನೇ ತರಗತಿ ವಾಣಿಜ್ಯ ವಿಭಾಗಕ್ಕೆ ಅರ್ಜಿ ಆಹ್ವಾನ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಗಾಜನೂರಿನ ಜವಾಹರ ನವೋದಯ ವಿದ್ಯಾಲಯದ 2026-27ನೇ ಸಾಲಿಗೆ 11ನೇ ತರಗತಿಗೆ ವಾಣಿಜ್ಯ ವಿಭಾಗಕ್ಕೆ ಖಾಲಿ ಇರುವ ಸೀಟುಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
2025-26 ನೇ ಸಾಲಿನಲ್ಲಿ 10ನೇ ತರಗತಿಯನ್ನು ಉತ್ತೀರ್ಣರಾಗಿರಬೇಕು. ಹತ್ತನೇ ತರಗತಿಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಕನಿಷ್ಠ ಶೇಕಡವಾರು 50 ಅಂಕಗಳನ್ನು ಪಡೆದಿರಬೇಕು. ಅಭ್ಯರ್ಥಿಯು 01.06.2009 ರಿಂದ 31.7.2011 ರ ದಿನಾಂಕದೊಳಗೆ ಜನಿಸಿರಬೇಕು.
ಅರ್ಹ ಆಸಕ್ತ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ವಿದ್ಯಾಲಯದ ಕಾರ್ಯಾಲಯಕ್ಕೆ ಜೂ. 30 ರ ಒಳಗಾಗಿ ಅರ್ಜಿಯನ್ನು ಎಲ್ಲಾ ದಾಖಲಾತಿಗಳೊಂದಿಗೆ ಸಲ್ಲಿಸುವಂತೆ ನವೋದಯ ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
4. ಸಂಸ್ಕøತ ಅಧ್ಯಯನಕ್ಕೆ ಸುವರ್ಣಾವಕಾಶ: ಮೈಸೂರಿನ ಮಹಾರಾಜ ಸರ್ಕಾರಿ ಸಂಸ್ಕೃತ ಕಾಲೇಜಿನಲ್ಲಿ ಪ್ರವೇಶಾತಿ ಆರಂಭ
ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮೈಸೂರಿನ ಮಹಾರಾಜ ಸರ್ಕಾರಿ ಸಂಸ್ಕೃತ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ.
ಕಾಲೇಜಿನಲ್ಲಿ ಶಾಸ್ತ್ರೀ (ಬಿ.ಎ.) – 3 ವರ್ಷಗಳ ಪದವಿ ಕೋರ್ಸ್ ಹಾಗೂ ಆಚಾರ್ಯ (ಎಂ.ಎ.) – 2 ವರ್ಷಗಳ ಸ್ನಾತಕೋತ್ತರ ಕೋರ್ಸ್ಗಳಿಗೆ ಪ್ರವೇಶ ನೀಡಲಾಗುತ್ತಿದೆ. ವ್ಯಾಕರಣ, ಪೂರ್ವಮೀಮಾಂಸಾ, ಧರ್ಮಶಾಸ್ತ್ರ, ನವ್ಯನ್ಯಾಯ, ಜ್ಯೋತಿಷ್ಯ, ದ್ವೈತ ವೇದಾಂತ, ಅದ್ವೈತ ವೇದಾಂತ, ವಿಶಿಷ್ಟದ್ವೈತ ವೇದಾಂತ ಹಾಗೂ ಶಕ್ತಿ-ವಿಶಿಷ್ಟದ್ವೈತ ವೇದಾಂತ ಸೇರಿದಂತೆ ವಿವಿಧ ಶಾಸ್ತ್ರ ವಿಭಾಗಗಳಲ್ಲಿ ಅಧ್ಯಯನದ ಅವಕಾಶ ಲಭ್ಯವಿದೆ.
ಸಂಸ್ಕೃತ ಶಿಕ್ಷಣದಲ್ಲಿ ಆಸಕ್ತಿ ಹೊಂದಿರುವ ಎಲ್ಲರಿಗೂ ಪ್ರವೇಶ ಮುಕ್ತವಾಗಿದ್ದು, ಯಾವುದೇ ವಯೋಮಿತಿ, ಜಾತಿ, ಮತ ಅಥವಾ ಲಿಂಗಭೇದವಿಲ್ಲದೆ ವಿದ್ಯಾಭ್ಯಾಸ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಪ್ರವೇಶಾತಿ ನೋಂದಣಿಗಾಗಿ ಆಸಕ್ತರು ಕಾಲೇಜಿನ ಪ್ರಾಂಶುಪಾಲರಾದ ಪಿ. ಸತ್ಯನಾರಾಯಣ (ಮೊ.: 93410 55933) ಅಥವಾ ಪ್ರಥಮ ದರ್ಜೆ ಸಹಾಯಕರು (ಮೊ.: 89714 00444) ಅವರನ್ನು ಸಂಪರ್ಕಿಸಬಹುದು ಎಂದು ಪ್ರಾಂಶುಪಾಲರಾದ ಪಿ.ಸತ್ಯನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
5. ಗ್ರಾಮೀಣ ಅಂಚೆ ನೌಕರರ ಸಂಘದಿಂದ ಪ್ರತಿಭಟನೆ
ಶಿವಮೊಗ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ(ಎಐಜಿಡಿಎಸ್ಯು) ಮುಖ್ಯ ಅಂಚೆ ಕಚೇರಿ ಮುಂಭಾಗ ಸಂಘದ ರಾಷ್ಟ್ರವ್ಯಾಪಿ ಕರೆಯ ಮೇರೆಗೆ ಅಸಹಕಾರ ಪ್ರತಿಭಟನೆ ನಡೆಸಿತು.
2026 ಮೇ 23ರಂದು ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದ ಸಂಘದ 13ನೇ ಅಖಿಲ ಭಾರತ ಸಮ್ಮೇಳನದಲ್ಲಿ ಗ್ರಾಮೀಣ ಡಾಕ್ ಸೇವಕರ ಸಂಘ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿ ಬೇಡಿಕೆಗಳೊಂದಿಗೆ ಕಾರ್ಯ ಯೋಜನೆಯನ್ನು ಅಂಗೀಕರಿಸಲಾಗಿತ್ತು. ಜೂ. 23ರಂದು ರಾಷ್ಟ್ರವ್ಯಾಪಿ ಚಳವಳಿಗೆ ಕರೆ ನೀಡಿದ್ದರ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ನಡೆಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಐಜಿಡಿಎಸ್ಯು ನ ಅಧ್ಯಕ್ಷ ಹೆಚ್.ಜಿ. ವೆಂಕಟೇಶ್, ಕಾರ್ಯದರ್ಶಿ ಭಾಸ್ಕರಶೆಟ್ಟಿ ಮತ್ತಿತರರು ಇದ್ದರು.
ಶಿವಮೊಗ್ಗ: ಅಂತರಾಷ್ಟ್ರೀಯ ಮಾದಕ ವಸ್ತು ವ್ಯಸನ, ಮತ್ತು ಅಕ್ರಮ ಸಾಗಾಣಿಕೆ ವಿರೋಧಿ, ದಿನದ ಪ್ರಯುಕ್ತ ಶಿವಮೊಗ್ಗ ನಗರದಲ್ಲಿ, 5 ಕೆ ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು. ಮ್ಯಾರಥಾನ್ ಗೆ ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಮೈದಾನದಿಂದ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ, ಜಿಲ್ಲಾ ಪಂಚಾಯತ್ ಸಿಇಒ ಹೇಮಂತ್.ಎನ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಎ ಜಿ ಕಾರಿಯಪ್ಪ ಉಪಸ್ಥಿತರಿದ್ದರು.
ಮ್ಯಾರಥಾನ್ ಅಶೋಕ ವೃತ್ತದಿಂದ ಎಎ ವೃತ್ತ ನಂತರ ಗೋಪಿ ವೃತ್ತ ಅಲ್ಲಿಂದ ಜೈಲ್ ವೃತ್ತ ನಂತರ ಹೆಲಿಪ್ಯಾಡ್ ವೃತ್ತದ ಮುಖಾಂತರ ಡಿಎಆರ್ ಗೆ ಬಂದು ಮ್ಯಾರಥಾನ್ ಅನ್ನು ಮುಕ್ತಾಯ ಮಾಡಲಾಯಿತು. ನಂತರ ವಿಜೇತರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.
ಮ್ಯಾರಥಾನ್ ನಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಿದ್ದ ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದ 05 ಕಿಮೀ ಮ್ಯಾರಥಾನ್ ಓಟದಲ್ಲಿ ಭದ್ರಾವತಿಯ ಸಂಚಾರಿ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ಹಾಲೇಶಪ್ಪ ಅವರ ಪುತ್ರಿ ತನುಶ್ರೀ ಮೊದಲನೆ ಸ್ಥಾನವನ್ನು ಪಡೆದರು. ಈ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ ಹೇಮಂತ್.ಎನ್ ಬಹುಮಾನ ವಿತರಿಸಿ ಅಭಿನಂದಿಸಿದರು.