ರಿಪ್ಪನ್ಪೇಟೆ: ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ಲೈನ್ನಿಂದ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಅವಘಡ ಉಂಟಾಗಿ ಸಮೀಪದ ತಳಲೆ ಗ್ರಾಮದಲ್ಲಿ ನೂರಾರು ಅಡಿಕೆ ಮರಗಳು ಸುಟ್ಟುಹೋಗಿವೆ.
ಗ್ರಾಮದ ಸರ್ವೆ ನಂ. 60ರಲ್ಲಿ ಹುಚ್ಚಾನಾಯ್ಕ್ ಎಂಬುವವರಿಗೆ ಸೇರಿದ 38 ಗುಂಟೆ ವಿಸ್ತೀರ್ಣದ ಅಡಿಕೆ ತೋಟದಲ್ಲಿ ಈ ಅವಘಡ ನಡೆದಿದೆ.
ಇದನ್ನೂ ಓದಿ > ಶಿವಮೊಗ್ಗ, ಏ.23- 24ರಂದು ಜಿಲ್ಲೆಯ 29 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ
ವಿದ್ಯುತ್ ಸಂಪರ್ಕದ ಲೈನ್ ತಾಗಿ ಶಾರ್ಟ್ ಸರ್ಕೀಟ್ ಉಂಟಾಗಿ ತೋಟದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಕವಾಗಿ ಹರಡಿದ ಪರಿಣಾಮ ಅಡಿಕೆ, ತೆಂಗು ಹಾಗೂ ಬಾಳೆ ಗಿಡಗಳು ಸುಟ್ಟು ಕರಕಲಾಗಿವೆ.
ಘಟನೆಯಲ್ಲಿ 350ಕ್ಕೂ ಹೆಚ್ಚು ಅಡಿಕೆ ಮರಗಳು ಸಂಪೂರ್ಣ ಸುಟ್ಟು ಹೋಗಿವೆ ಎನ್ನಲಾಗಿದೆ. ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಸ್ಥಳೀಯರು ತಕ್ಷಣವೇ ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಹೆಚ್ಚಿನ ಹಾನಿ ತಪ್ಪಿಸಲು ಸಾಧ್ಯವಾಗಲಿಲ್ಲ.
ಈ ಬಗ್ಗೆ ತೋಟದ ಮಾಲೀಕ ಹುಚ್ಚಾನಾಯ್ಕ್ ಅವರು ರಿಪ್ಪನ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.















