ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಮುಡುಬಾ, ಹೊಸಳ್ಳಿ ಹಾಗೂ ತೂದೂರು ಗ್ರಾಮಗಳ ವ್ಯಾಪ್ತಿಯಲ್ಲಿ ತೋಟಗಳಿಗೆ ನೀರು ಹಾಯಿಸಲು ಮೋಟಾರ್ಗೆ ಅಳವಡಿಸಿದ್ದ ಕೇಬಲ್ ಕದಿಯುತ್ತಿದ್ದ ಕಳ್ಳನನ್ನು ಮಾಳೂರು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ನಗರದ ರಾಗಿಗುಡ್ಡ ನಿವಾಸಿ ಕುಮಾರ ಎಸ್.ಕೆ. (31) ಬಂಧಿತ ಆರೋಪಿ. ಆತನಿಂದ 93,000 ಮೌಲ್ಯದ 750 ಮೀಟರ್ ಉದ್ದದ ಕೇಬಲ್ ವೈರ್ ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ್ದ 30,000 ಮೌಲ್ಯದ ಪಲ್ಸರ್ ಬೈಕನ್ನು ಅಮಾನತುಪಡಿಸಲಾಗಿದೆ.
ಇದನ್ನೂ ಓದಿ > ಮಹಿಷಿ ಮಠದಲ್ಲಿ ಕಳ್ಳತನ, 1 ಕೋಟಿಗೂ ಅಧಿಕ ಮೌಲ್ಯದ ಚಿನ್ನ ವಶ
ತುಂಗಾ ನದಿ ತೀರದಲ್ಲಿ ರೈತರು ತೋಟಗಳಿಗೆ ನೀರು ಹಾಯಿಸಲು ಮೋಟಾರ್ಗಳನ್ನು ಅಳವಡಿಸಿದ್ದರು. ಈ ಪಂಪ್ಸೆಟ್ಗಳ ಕೇಬಲ್ ವೈರುಗಳು ಕಳ್ಳತನವಾಗಿದ್ದವು. ಈ ಬಗ್ಗೆ ಎನ್. ವೆಂಕಟೇಶ್, ರಾಜೇಂದ್ರ ಹೆಚ್.ಎಸ್. ಮತ್ತು ಶಶಿಮೋಹನ ಅವರು ಮಾಳೂರು ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರ ಪತ್ತೆಗೆ ವಿಶೇಷ ತಂಡ ರಚಿಸಿದ್ದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಹಾಗೂ ಹೆಚ್ಚುವರಿ ಎಸ್ಪಿ ಕಾರಿಯಪ್ಪ ಎ.ಜಿ. ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ್ ಎನ್. ಕಲಗುಚ್ಚಿ ಮತ್ತು ಮಾಳೂರು ವೃತ್ತ ನಿರೀಕ್ಷಕ ರಾಜಶೇಖರ್ ಎಲ್. ಅವರ ಉಸ್ತುವಾರಿಯಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಇದನ್ನೂ ಓದಿ > ನಕಲಿ ಪತ್ರ ನೀಡಿ ಸಾಲದ ಹೆಸರಲ್ಲಿ ವಂಚನೆ, ಸಾರ್ವಜನಿಕರಿಗೆ ಎಚ್ಚರಿಕೆ ಏನು?
ಮಾಳೂರು ಠಾಣೆ ಪಿಎಸ್ಐ ಸುನೀಲ್ ಬಿ.ಸಿ. ನೇತೃತ್ವದ ತಂಡದಲ್ಲಿ ಎಎಸ್ಐಗಳಾದ ನಾಗರಾಜ್ ಬಿ., ಸುರೇಶ್ ಎನ್, ಸಿಬ್ಬಂದಿ ಸುರಕ್ಷಿತ್, ಪುನೀತ್ ಕುಮಾರ್, ಕೇಶವಮೂರ್ತಿ, ಸಂತೋಷ್ ಕುಮಾರ್, ಚೇತನ್ ಕುಮಾರ್, ಸುಧಾಕರ್, ಸಾದುದ್ದೀನ್, ಮಂಜು, ವಸಂತ ಹಾಗೂ ಆಗುಂಬೆ ಠಾಣೆಯ ಸುರೇಶ್ ನಾಯ್ಕ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.














