ಶಿವಮೊಗ್ಗ: ಸಮಾಜ ಕಲ್ಯಾಣ ಇಲಾಖೆಯ ಹೆಸರನ್ನು ದುರುಪಯೋಗಪಡಿಸಿಕೊಂಡು, ನಕಲಿ ಪತ್ರಗಳ ಮೂಲಕ ಸಾರ್ವಜನಿಕರಿಗೆ ವಂಚಿಸುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ > ಮಹಿಷಿ ಮಠದಲ್ಲಿ ಕಳ್ಳತನ, 1 ಕೋಟಿಗೂ ಅಧಿಕ ಮೌಲ್ಯದ ಚಿನ್ನ ವಶ
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಶಿವಕುಮಾರ ಸ್ವಾಮಿ ಬಡಾವಣೆಯ ನಿವಾಸಿಯಾದ ಅಮೃತ್ ಜಿ. ಎಂಬ ವ್ಯಕ್ತಿಯು ಸಮಾಜ ಕಲ್ಯಾಣ ಇಲಾಖೆಯ ಹೆಸರಿನಲ್ಲಿ ನಕಲಿ ಪತ್ರವನ್ನು ಸೃಷ್ಟಿಸಿದ್ದಾನೆ. ಅದರಲ್ಲಿ ‘ದೇವರಾಜ ಅರಸು ಸಾಲ ಮಂಜೂರಾತಿ’ ಎಂಬ ಪದವನ್ನು ಮುದ್ರಿಸಿ, ಸುಮಾರು 150 ಕ್ಕಿಂತಲೂ ಹೆಚ್ಚು ಕೂಲಿ ಕಾರ್ಮಿಕರಿಂದ ಹಣವನ್ನು ಪಡೆದು ವಂಚಿಸಿರುವುದು ತಿಳಿದುಬಂದಿದೆ.
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಹೆಸರನ್ನು ಬಳಸಿಕೊಂಡು ಸಾಲ ಮಂಜೂರು ಮಾಡಿಸಿಕೊಡುವುದಾಗಿ ಅಥವಾ ಸಾಲ ಮಂಜೂರು ಮಾಡಿಸಲು ಹಣದ ಆಮಿಷ ಒಡ್ಡಿ ಈ ವ್ಯಕ್ತಿ ವಂಚನೆಗೆ ಯತ್ನಿಸುತ್ತಿದ್ದಾನೆ. ಆದ್ದರಿಂದ ಸಾರ್ವಜನಿಕರು ಯಾರೂ ಕೂಡ ಈತನಿಗೆ ಹಣವನ್ನು ನೀಡಬಾರದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ > ಶಿವಮೊಗ್ಗ ಲೋಕಸಭಾ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ₹68 ಕೋಟಿ ಮಂಜೂರು, ಯಾವ್ಯಾವ ರಸ್ತೆ? ಎಷ್ಟು ವೆಚ್ಚ?
ಸದರಿ ವ್ಯಕ್ತಿಯೊಂದಿಗೆ ನಿಗಮವು ಯಾವುದೇ ಯೋಜನೆಯ ಬಗ್ಗೆ ಪತ್ರ ವ್ಯವಹಾರಗಳನ್ನು ಮಾಡಿಲ್ಲ. ಹಾಗೂ ಈ ವ್ಯಕ್ತಿಗೂ ನಮ್ಮ ನಿಗಮಕ್ಕೂ ಯಾವುದೇ ಸಂಬಂಧವಿರುವುದಿಲ್ಲ ಎಂದು ಜಿಲ್ಲಾ ವ್ಯವಸ್ಥಾಪಕರು ಸ್ಪಷ್ಟಪಡಿಸಿದ್ದು, ಸಾರ್ವಜನಿಕರು ಇಂತಹ ವಂಚಕರ ಬಗ್ಗೆ ಜಾಗರೂಕರಾಗಿರಬೇಕು ಎಂದು ವಿನಂತಿಸಿದ್ದಾರೆ.














