ಭದ್ರಾವತಿ: ಸೋಮವಾರದಿಂದ ವಿಧ್ಯುಕ್ತವಾಗಿ ಆರಂಭವಾದ ಗ್ರಾಮ ದೇವತೆ ಹಳದಮ್ಮ ದೇವಿಯ ಜಾತ್ರೆಗೆ ನಗರವು ನವ ವಧುವಿನಂತೆ ಸಿಂಗಾರಗೊಂಡಿದೆ.

ಈ ವರ್ಷ ಹಳೇ ನಗರದಲ್ಲಿರುವ ಕಂಚಿ ಬಾಗಿಲು ಚೌಡೇಶ್ವರಿ, ಅಂತರಘಟ್ಟಮ್ಮ, ದುರ್ಗಮ್ಮ ಹಾಗೂ ಇತರೆ ಶಕ್ತಿ ದೇವತೆಗಳ ಜಾತ್ರೆಗಳನ್ನೂ ಹಳದಮ್ಮ ದೇವಿಯ ಜಾತ್ರೆಯೊಂದಿಗೆ ನೆರವೇರಿಸಲಾಗುತ್ತಿದೆ. ಅಂತರಘಟ್ಟಮ್ಮ ದೇವಾಲಯದಲ್ಲಿ ಸಿದ್ದರ ಪೂಜೆಯೊಂದಿಗೆ ಜಾತ್ರೆ ಆರಂಭವಾಯಿತು.
ನಿನ್ನೆ ಮುಂಜಾನೆ ದೇವಾಲಯದ ಆವರಣದಲ್ಲಿ ಹೊಸ ಸಿಡಿ ಕಂಬವನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿ ಧ್ವಜಾರೋಹಣ ನೆರವೇರಿಸಲಾಯಿತು.
ಹಳದಮ್ಮ ದೇವಿಯ ಜಾತ್ರೆಯ ಅಂಗವಾಗಿ ನಗರದ ಬಿ.ಎಚ್. ರಸ್ತೆ, ಮಾಧವಾಚಾರ್ ವೃತ್ತ, ಹೊಸ ಸೇತುವೆ ರಸ್ತೆ, ಚನ್ನಗಿರಿ ರಸ್ತೆ, ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ ರಸ್ತೆ, ಕುಂಬಾರ ಬೀದಿ, ಉಪ್ಪಾರಕೇರಿ ರಸ್ತೆಗಳು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿವೆ.
ನಗರದ ರಂಗಪ್ಪ ವೃತ್ತದ ಬಳಿ ಕಮಾನಿನ ಮೇಲೆ ಅಷ್ಟಭುಜ ಕಾಳಿಕಾದೇವಿಯ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಕಂಚಿ ಬಾಗಿಲು ಸಮೀಪ ಕಮಾನಿನ ಮೇಲೆ ಡಿಜಿಟಲ್ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ.
ದೇವಿಯ ಅವತಾರದ ಉದ್ದೇಶಗಳು, ಗಣೇಶ ಹಾಗೂ ಸುಬ್ರಹ್ಮಣ್ಯಸ್ವಾಮಿಯ ಆಕರ್ಷಕ ಚಿತ್ರಗಳು, ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಹಾಗೂ ಭದ್ರಾವತಿಯಲ್ಲಿ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆ ನಿರ್ಮಾಣಕ್ಕೆ ಕಾರಣಕರ್ತರಾದ ಸರ್ ಎಂ.ವಿಶ್ವೇಶ್ವರಯ್ಯ ಅವರ ಭಾಷಣಗಳ ತುಣುಕುಗಳನ್ನು ಅಲ್ಲಿ ಬಿತ್ತರಿಸಲಾಗುತ್ತಿದೆ. ಬಸವೇಶ್ವರ ವೃತ್ತ ಮಂಟಪದ ಪ್ರದೇಶ ದೀಪಾಲಂಕಾರದಿಂದ ಝಗಮಗಿಸುತ್ತಿದೆ. ಹಳೇ ನಗರದ ಹಲವು ಕಡೆ ನವದುರ್ಗೆಯರ ವಿದ್ಯುತ್ ದೀಪಾಲಂಕೃತ ಡಿಜಿಟಲ್ ಬೋರ್ಡುಗಳನ್ನು ಅಳವಡಿಸಲಾಗಿದೆ.


















