ಸಾಗರ: ಮಾರ್ಕೇಟ್ ರಸ್ತೆ ಅಗಲೀಕರಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಜಾತ್ರೆ ನಂತರ ಯಾವುದೇ ಕ್ಷಣದಲ್ಲಾದರೂ ಮಾರ್ಕೇಟ್ ರಸ್ತೆ ಅಗಲೀಕರಣ ಪ್ರಕ್ರಿಯೆ ಪ್ರಾರಂಭವಾಗಬಹುದು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಮಾರ್ಕೇಟ್ ರಸ್ತೆಯಲ್ಲಿ ಗುರುವಾರ ನಗರೋತ್ಥಾನ ಯೋಜನೆಯಡಿ ವಿವಿಧ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಮಾರ್ಕೇಟ್ ರಸ್ತೆ ಅಗಲೀಕರಣಕ್ಕೆ ಸ್ಥಳೀಯರ ಸಹಕಾರ ಅಗತ್ಯವಾಗಿದೆ. ನಾನು ಹೆದರಿಸಿ, ಬೆದರಿಸಿ, ರೌಡಿಸಂ, ದಬ್ಬಾಳಿಕೆಯಿಂದ ರಸ್ತೆಗೆ ಜಾಗ ಬಿಡಿಸಿಕೊಳ್ಳುವುದಿಲ್ಲ. ಸ್ಥಳೀಯ ನಿವಾಸಿಗಳ ಜೊತೆ ಇನ್ನೊಮ್ಮೆ ಸಭೆ ನಡೆಸಿ ಅಗಲೀಕರಣಕ್ಕೆ ಸಹಕಾರ ನೀಡುವಂತೆ ಮನವಿ ಮಾಡಲಾಗುತ್ತದೆ. ಅಭಿವೃದ್ದಿಗೆ ಯಾರೂ ಅಡ್ಡಗಾಲು ಹಾಕಬೇಡಿ. ಸ್ಥಳೀಯ ನಿವಾಸಿಗಳನ್ನು ಹಿಂದೆ ಅಗಲೀಕರಣಕ್ಕೆ ಜಾಗ ಬಿಡಿ ಎಂದು ಬೆದರಿಕೆ ಹಾಕಿದ ಉದಾಹರಣೆ ಇದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೀನು ಮಾರ್ಕೇಟ್ ನಿರ್ಮಾಣದ ಮುಂದುವರೆದ ಕಾಮಗಾರಿಗೆ ಹಣ ಕೊಟ್ಟಿರಲಿಲ್ಲ. ನಾನು ಶಾಸಕನಾದ ಮೇಲೆ ಅದಕ್ಕೂ ಹಣ ತಂದಿದ್ದೇನೆ ಎಂದು ಹೇಳಿದರು.
ನಾನು ಶಾಸಕನಾದ ಮೇಲೆ ಅನೇಕ ಅಭಿವೃದ್ದಿ ಕಾರ್ಯಗಳು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ನಡೆಯುತ್ತಿದೆ. ಆದರೆ ಬಿಜೆಪಿಯವರು ತಾವು ಹಣ ತಂದಿದ್ದು ಎಂದು ಹೇಳುವ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಅಭಿವೃದ್ದಿಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೌರಾಯುಕ್ತ ಎಚ್.ಕೆ.ನಾಗಪ್ಪ, ಪ್ರಮುಖರಾದ ಐ.ಎನ್.ಸುರೇಶಬಾಬು, ಅಶೋಕ ಬೇಳೂರು, ಕಲಸೆ ಚಂದ್ರಪ್ಪ, ಗಣಪತಿ ಮಂಡಗಳಲೆ, ನಿರಂಜನ ಕೋರಿ, ರವಿಕುಮಾರ್ ವೈಕೆ., ಲಲಿತಮ್ಮ, ಬಸವರಾಜ ಗುಂಡಾಲಿ, ಸೈಯದ್ ಜಾಕೀರ್ ಇನ್ನಿತರರು ಹಾಜರಿದ್ದರು.













