ಭದ್ರಾವತಿ: ಡಾ.ರಾಜಕುಮಾರ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳ ಸಂಘದಿಂದ ರೈಲ್ವೆ ನಿಲ್ದಾಣದ ಎದುರು ಪವರ್ ಸ್ಟಾರ್ ಪುನೀತ್ ಹಾಗೂ ಡಾ. ರಾಜಕುಮಾರ್ ಅವರಿಗಾಗಿ ದೇಗುಲ ನಿರ್ಮಿಸಲಾಗಿದ್ದು, ಅದರಲ್ಲಿ ಇಬ್ಬರೂ ನಟರ 3 ಅಡಿ ಎತ್ತರದ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ.
ಕಂಚಿನ ಪುತ್ಥಳಿ ಮತ್ತು ದೇಗುಲವನ್ನು ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಲೋಕಾರ್ಪಣೆಗೊಳಿಸಿದರು.
’ಪ್ರತಿಮೆಗಳಿಗೆ ತಲಾ 5 ಲಕ್ಷ ಹಾಗೂ ದೇಗುಲ ನಿರ್ಮಾಣಕ್ಕೆ 25 ಲಕ್ಷ ವೆಚ್ಚವಾಗಿದೆ. ಪುನೀತ್ ಮತ್ತು ರಾಜಕುಮಾರ್ ಅಭಿಮಾನಿಗಳ ದೇಣಿಗೆಯಿಂದ ದೇಗುಲ ನಿರ್ಮಿಸಲಾಗಿದೆ. ಇಲ್ಲಿ ಪ್ರತಿನಿತ್ಯ ಪೂಜೆ ನಡೆಸಲಾಗುತ್ತದೆ’ ಎಂದು ಅಭಿಮಾನಿ ಸಂಘದವರು ತಿಳಿಸಿದ್ದಾರೆ.
ಇದೇ ವೇಳೆ ನಗರದಲ್ಲಿರುವ ತಾಲ್ಲೂಕು ಕಚೇರಿ ರಸ್ತೆಗೆ ’ಡಾ.ಪುನೀತ್ ರಾಜಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲಾಯಿತು. ಇದರ ನಾಮಫಲಕ ಹಾಗೂ ಕನಕ ಆಟೊ ಚಾಲಕರ ಸಂಘದಿಂದ ಪ್ರತ್ಯೇಕವಾಗಿ ಪ್ರತಿಷ್ಠಾಪಿಸಲಾದ ಪುನೀತ್ ರಾಜಕುಮಾರ್ ಅವರ ಪುತ್ಥಳಿಯನ್ನೂ ಅಶ್ವಿನಿ ಅನಾವರಣಗೊಳಿಸಿದರು.













