ಶಿವಮೊಗ್ಗ : ಮೂಲಭೂತ ಸೌಕರ್ಯ ಒದಗಿಸಲು ಅನೇಕ ಭಾರಿ ಮನವಿ ಸಲ್ಲಿಸಿದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತಿಪಡಿಸಿ ಸೋಮಿನಕೊಪ್ಪ ನಿವಾಸಿಗಳು ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಜಿಲ್ಲಾ ಶಾಖೆಯ ನೇತೃತ್ವದಲ್ಲಿ ಇಂದು ರಸ್ತೆತಡೆ ನಡೆಸಿ, ಪ್ರತಿಭಟಿಸಿ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ವಾರ್ಡ್ ನಂ.1ರ ಸೋಮಿನಕೊಪ್ಪ, ನಿವಾಸಿಗಳು, ತಮ್ಮ ಬಡಾವಣೆಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆದೀಪ, ಒಳಚರಂಡಿ, ಸಾರಿಗೆ ಬಸ್ ಸೌಲಭ್ಯಕ್ಕಾಗಿ ಹಲವು ಭಾರಿ ಶಾಸಕರು ಮತ್ತು ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ. ಬಾಕ್ಸ್ ಚರಂಡಿ ಇಲ್ಲದೆ ನೀರುನಿಂತು ಸೊಳ್ಳೆಯ ಕಾಟದಿಂದ ಸಾಂಕ್ರಾಮಿಕ ರೋಗದ ಭಯದಲ್ಲಿ ಸ್ಥಳೀಯರಿದ್ದಾರೆ. ನೀರುನಿಂತು ಸುತ್ತಲೂ ಗಬ್ಬುನಾಥ ಬೀರುತ್ತಿದೆ. ನಮ್ಮ ತೊಂದರೆಯನ್ನು ಹೇಳಿಕೊಳ್ಳಲು ಇಲ್ಲಿ ಶಾಸಕರಾಗಲೀ, ಪಾಲಿಕೆ ಆಯುಕ್ತರಾಗಲೀ ಮಾಜಿ ಸದಸ್ಯರಾದ ಆಶಾಚಂದ್ರಪ್ಪನವರಾಗಲೀ ಇತ್ತ ತಿರುಗಿಯೂ ನೋಡುವುದಿಲ್ಲ. ಶಾಸಕರು ಹಾರಿಕೆಯ ಉತ್ತರ ನೀಡುತ್ತಾರೆ. ಅನೇಕ ಬಾರಿ ಶಾಸಕರಿಗೆ ಮನವಿ ಸಲ್ಲಿಸಿದರೂ ನಮ್ಮ ವಾರ್ಡಿಗೆ ಬಂದ ಅನುದಾನವನ್ನು ದುರುಪಯೋಗಪಡಿಸಿಕೊಂಡು ಬೇರೆಕಡೆಗೆ ಅದನ್ನು ಸ್ಥಳಾಂತರಿಸಿ ದ್ವಿಮುಖನೀತಿಯನ್ನು ಅನುಸರಿಸುತ್ತಿದ್ದಾರೆ. ಇಲ್ಲಿ ಅಲ್ಪಸಂಖ್ಯಾತರೂ, ಕೂಲಿ ಕಾರ್ಮಿಕರು ಮತ್ತು ಬಡವರೇ ವಾಸಿಸುತ್ತಿದ್ದು, ಯಾವ ಜನಪ್ರತಿನಿಧಿಗಳೂ ಕೂಡ ಇತ್ತ ಸುಳಿಯುವುದಿಲ್ಲ. ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಆದ್ದರಿಂದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಹಾಗೂ ಗ್ರಾಮಸ್ಥರು ಈ ರಸ್ತೆತಡೆ ಪ್ರತಿಭಟನೆಯ ಮೂಲಕ ಎಚ್ಚರಿಕೆ ನೀಡಿದ್ದೇವೆ. ಕೂಡಲೇ ಆಡಳಿತ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಶಾಸಕರ ಕಛೇರಿ ಹಾಗೂ ಪಾಲಿಕೆಯ ಕಛೇರಿ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಮನವಿ ನೀಡುವ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ದಕ್ಷಿಣ ಬ್ಲಾಕ್ ಅಧ್ಯಕ್ಷರಾದ ಖಲೀಂಪಾಷಾ, ಇನ್ಟೆಕ್ ಜಿಲ್ಲಾ ಅಧ್ಯಕ್ಷರಾದ ಮಕ್ಬುಲ್ ಅಹ್ಮದ್, ಯುವ ಇನ್ಟೆಕ್ ಅಧ್ಯಕ್ಷರಾದ ಸಂತೋಷ್, ಮಹಿಳಾ ಇನ್ಟೆಕ್ ಅಧ್ಯಕ್ಷರಾದ ಕವಿತಾರಾಘವೇಂದ್ರ, ಪ್ರಮುಖರಾದ ಮೆಹಬೂಬ್ ಪಾಷಾ, ವಿಜಯಲಕ್ಷ್ಮೀ ಸಿ. ಪಾಟೀಲ್, ಶಬ್ಬರ್ಖಾನ್, ಅಕ್ಬರ್, ಅಮ್ಜದ್ಖಾನ್, ಜಮೀರಹ್ಮದ್, ಅಬ್ದುಲ್ ಮಲ್ಲಿಕ್, ಅನ್ವರ್ ಪಾಷಾ, ಸೈಯದ್ ಜಬ್ಬೀರ್, ದಾದಾ ಖಲಂದರ್, ಬಾಬಣ್ಣ ಮೊದಲಾದವರಿದ್ದರು.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ : 7483162573, yuvadhwani@gmail.com













