ಫೆ.21: ಮೈಸೂರಿನ ಡಾ. ಓ.ಎಲ್.ನಾಗಭೂಷಣ ಸ್ವಾಮಿಗೆ ಜಿಎಸ್ಎಸ್ ಪುರಸ್ಕಾರ

ಶಿವಮೊಗ್ಗ : ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನ, ಶಿವಮೊಗ್ಗ ವತಿಯಿಂದ ಪ್ರಸಕ್ತ ವರ್ಷ ಡಾ. ಜಿಎಸ್ಎಸ್ ಶತಮಾನೋತ್ಸವ ಅಂಗವಾಗಿ ಫೆ.21ರಂದು ಸಂಜೆ 6ಗಂಟೆಗೆ ಕರ್ನಾಟಕ ಸಂಘದಲ್ಲಿ ಪ್ರಸಕ್ತ ವರ್ಷದ ಜಿಎಸ್ಎಸ್ ಪುರಸ್ಕಾರ ಹಾಗೂ ಕಾವ್ಯ ಸೌರಭ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಪ್ರೊ.ಕಿರಣ್ ಆರ್.ದೇಸಾಯಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
2026ರ ಸಾಲಿನ ಜಿಎಸ್ಎಸ್ ಪುರಸ್ಕಾರವನ್ನು ಕನ್ನಡ ನಾಡಿನ ಖ್ಯಾತ ವಿಮರ್ಶಕರಾದ ಮೈಸೂರಿನ ಡಾ. ಓ.ಎಲ್.ನಾಗಭೂಷಣ ಸ್ವಾಮಿ ಅವರಿಗೆ ನೀಡಲಾಗುತ್ತಿದೆ. ಈ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದು, ಲೇಖಕಿ ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ. ಸಬೀತಾ ಬನ್ನಾಡಿ ಅವರು ಜಿಎಸ್ಎಸ್ ಕುರಿತು ಚಿಂತನೆ ಹಾಗೂ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಜಿಎಸ್ಎಸ್ ಕೃತಿಗಳ ಬಿಡುಗಡೆ ಮಾಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಈಶ್ವರಪ್ಪ, ಸದಸ್ಯ ಹಾಲಸ್ವಾಮಿ ಉಪಸ್ಥಿತರಿದ್ದರು.
ಫೆ.21: ಶ್ರೀ ಶಂಕರ ಚೈತನ್ಯ ವೇದಿಕೆ ಉದ್ಘಾಟನೆ

ಶಿವಮೊಗ್ಗ : ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಶ್ರೀ ಶಂಕರ ಚೈತನ್ಯ ವೇದಿಕೆ ಉದ್ಘಾಟನಾ ಸಮಾರಂಭವು ಫೆ.21ರ ಸಂಜೆ 4 ಗಂಟೆಗೆ ಶ್ರೀ ಕೋಟೆ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿರುವ ಆಚಾರ್ಯತ್ರಯರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಪಿ.ಎಂ.ಮಾಲತೇಶ್ ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾಮಾಜಿಕ ಚಟುವಟಿಕೆಗಳ ವೇದಿಕೆಯಾಗಿದ್ದು, ಅಂದು ನಡೆಯಲಿರುವ ಕಾರ್ಯಕ್ರಮವು ವಿಪ್ರ ಚೈತನ್ಯ ಸಮಾವೇಶ ಎಂಬ ನಾಮಪದದಿಂದ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಉಪಾಧ್ಯಕ್ಷ ಕೆ.ವೆಂಕಟೇಶ್ ರಾವ್, ಕಾರ್ಯದರ್ಶಿ ಸಂತೋಷ್ಕುಮಾರ್, ಖಜಾಂಚಿ ಎಂ.ಎನ್.ಸುಂದರಾಜ್, ವೇ||ಬ್ರ||ಶ್ರೀ|| ಶಂಕರಾನಂದ ಜೋಯಿಸ್, ಅಕ್ಷಯ್, ಸುವರ್ಣಾಶಾಸ್ತ್ರಿ, ಜಯಕುಮಾರ್ ಉಪಾಧ್ಯ, ಆರತಿ ತಿವಾರಿ, ಕೆ.ವಿ.ಮುರಳೀಧರ, ಅನಂತರಾವ್ ಉಪಸ್ಥಿತರಿದ್ದರು.
ಮಾ.06ರಂದು `ಶೇಷ 2016’ ಚಿತ್ರ ಬಿಡುಗಡೆ
ಶಿವಮೊಗ್ಗ : ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರದ ಹಿನ್ನೆಲೆಯಲ್ಲಿರುವ `ಶೇಷ 2016’ ಚಿತ್ರವು ಮಾ.6ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ನಿರ್ಮಾಪಕ ಉಮೇಶ್ ತಿಮ್ಮೇಗೌಡ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಚಿತ್ರವು ಕನ್ನಡ ಹಾಗೂ ಮಲೆಯಾಳಂ ಎರಡೂ ಭಾಷೆಗಳಲ್ಲಿ ಸಿದ್ಧವಾಗಿದ್ದು, ಕೇರಳದ ಮತ್ತು ಕರ್ನಾಟಕ ಪ್ರಮುಖ ನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಮುಖವಾಗಿ ಜಾನ್ಕೈಪಲ್ಲಿ, ಪ್ರಮೋದ್ ಶೆಟ್ಟಿ ಹಾಗೂ ನಾಯಕನಟಿಯಾಗಿ ಅರ್ಚನಾ ಕೊಟ್ಟಿಗೆ ಅಭಿನಯಿಸಿದ್ದು, ಪ್ರಮುಖ ಪಾತ್ರದಲ್ಲಿ ದೇವರಾಜ್, ದಿನೇಶ್ ಮಂಗಳೂರು, ಸಿದ್ದಾರ್ಥ್, ಡೈನ್ ಡೇವಿ ಕಾಣಿಸಿಕೊಂಡಿದ್ದಾರೆ ಎಂದರು.
ನಿರ್ದೇಶಕ ಪ್ರಮೋದ್ ಅರಸೀಕೆರೆ ಮಾತನಾಡಿ, ಇದೊಂದು ವಿಶೇಷ ಚಿತ್ರವಾಗಿದ್ದು, ಮರಳಿಗುಡ್ಡ ಎಂಟರ್ಪ್ರೈಸಸ್ನವರ ಬ್ಯಾನರ್ ಅಡಿಯಲ್ಲಿ ಉಮೇಶ್ ತಿಮ್ಮೇಗೌಡ ಮತ್ತು ಮಂಜುವಾಣಿ ವಿ.ಎಸ್. ಹಾಗೂ ವೀಣಾ ಎಸ್. ಅವರ ನಿರ್ಮಾಣದಲ್ಲಿ ಈ ಚಿತ್ರ ಬಂದಿದೆ. ವಿಶೇಷವಾಗಿ ಶಿವಮೊಗ್ಗದ ಕಾರ್ಗಲ್ ಸುತ್ತಮುತ್ತ ಚಿತ್ರೀಕರಣವಾಗಿದೆ. ಕನ್ನಡಿಗರು ಈ ಚಿತ್ರವನ್ನು ಚಿತ್ರಮಂದಿರಕ್ಕೆ ಬಂದು ನೋಡಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಟರಾದ ಜಾನ್ ಕೈಪಲ್ಲಿ, ಸಾಯಿ ಭೈರವ, ಡೈನ್ ಡೇವಿ, ಸಿದ್ದಾರ್ಥ್ ಸೇರಿದಂತೆ ಹಲವರಿದ್ದರು.
ಕುಂಸಿ, ಅರಸಾಳು ರೈಲು ಪ್ರಯಾಣಿಕರಿಗೆ ಮತ್ತೊಮ್ಮೆ ಗುಡ್ ನ್ಯೂಸ್ ಕೊಟ್ಟ ಇಲಾಖೆ
ಶಿವಮೊಗ್ಗ/ಬೆಂಗಳೂರು: ಜಿಲ್ಲೆಯ ಕುಂಸಿ ಹಾಗೂ ಅರಸಾಳು ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಮತ್ತೊಮ್ಮೆ ಗುಡ್ ನ್ಯೂಸ್ ನೀಡಿದ್ದು, ಎರಡು ರೈಲುಗಳ ನಿಲುಗಡೆಯನ್ನು ಮತ್ತೊಮ್ಮೆ ಮುಂದುವರೆಸಿದೆ.
ಹೌದು, ಪ್ರಯಾಣಿಕರ ಅನುಕೂಲಕ್ಕಾಗಿ ಕುಂಸಿ ಹಾಗೂ ಅರಸಾಳು ನಿಲ್ದಾಣಗಳಲ್ಲಿ ಎರಡು ರೈಲುಗಳ ನಿಲುಗಡೆಯನ್ನು 2026ರ ಫೆಬ್ರವರಿ 24ರಿಂದ ಆಗಸ್ಟ್ 23ರವರೆಗೆ ವಿಸ್ತರಿಸಿದೆ.
ಯಾವ ಎರಡು ರೈಲುಗಳು?
ಪ್ರಯಾಣಿಕರ ಅನುಕೂಲಕ್ಕಾಗಿ, 16227/16228 ಸಂಖ್ಯೆಯ ಮೈಸೂರು-ತಾಳಗುಪ್ಪ-ಮೈಸೂರು ಡೈಲಿ ಎಕ್ಸ್’ಪ್ರೆಸ್ ರೈಲಿನ ಅರಸಾಳು ನಿಲ್ದಾಣದ ನಿಲುಗಡೆ.
ಸಂಖ್ಯೆ 16205/16206 ಸಂಖ್ಯೆಯ ತಾಳಗುಪ್ಪ-ಮೈಸೂರು-ತಾಳಗುಪ್ಪ ಡೈಲಿ ಎಕ್ಸ್’ಪ್ರೆಸ್ ರೈಲುಗಳ ಅರಸಾಳು ಮತ್ತು ಕುಂಸಿ ನಿಲ್ದಾಣಗಳ ತಾತ್ಕಾಲಿಕ ನಿಲುಗಡೆಯನ್ನು ಇನ್ನೂ ಆರು ತಿಂಗಳ ಅವಧಿಗೆ ವಿಸ್ತರಿಸಲಾಗಿದೆ.
ಈ ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆಯು 2026ರ ಫೆಬ್ರವರಿ 24ರಿಂದ ಆಗಸ್ಟ್ 23ರವರೆಗೆ ಮುಂದುವರಿಯಲಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ವೇಳಾಪಟ್ಟಿಯಂತೆಯೇ ರೈಲುಗಳು ಈ ನಿಲ್ದಾಣಗಳಲ್ಲಿ ನಿಲ್ಲಲಿವೆ.
ರಿಪ್ಪನ್ಪೇಟೆಯಲ್ಲಿ ಅಕ್ರಮ ಮದ್ಯ ವಶ
ರಿಪ್ಪನ್ ಪೇಟೆ: ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಹಳ್ಳ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಅಂಗಡಿ ಮೇಲೆ ಬುಧವಾರ ದಾಳಿ ನಡೆಸಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇಲೆ ದಾಳಿ ನಡೆಸಿ ದಿನಸಿ ಅಂಗಡಿ ಪರಿಶೀಲಿಸಿದಾಗ 12 ಪೌಚ್ ಅಕ್ರಮ ಮದ್ಯ ದೊರೆತಿದೆ. ಅಂಗಡಿ ಮಾಲೀಕ ಪರಮೇಶ್ವರ ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಿಎಸ್ಐ ರಾಜು ರೆಡ್ಡಿ ಮತ್ತು ಸಿಬ್ಬಂದಿ ದಾಳಿಯಲ್ಲಿದ್ದರು.
ಸಾಗರ: ಬಸ್ ಸೌಲಭ್ಯ ಕಲ್ಪಿಸದಿದ್ದರೆ ಉಗ್ರ ಹೋರಾಟ: ಮಲ್ಲಿಕಾರ್ಜುನ ಹಕ್ರೆ

ಸಾಗರ : ಗ್ರಾಮೀಣ ಭಾಗದ ಜನರ ಸಾರಿಗೆ ಸಮಸ್ಯೆ ತಕ್ಷಣ ಬಗೆಹರಿಸಬೇಕು. ಒಂದು ಮಾರ್ಗದ ಬಸ್ ಸಂಚಾರ ನಿಲ್ಲಿಸಿದರೆ ಅದನ್ನು ಅವಲಂಬಿಸಿಕೊಂಡವರಿಗೆ ಆಗುವ ಸಮಸ್ಯೆಯನ್ನು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ತಿಳಿಸಿದರು.
ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಡಿಪೋ ಎದುರು ಗುರುವಾರ ಯಡಜಿಗಳೆಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಿಂದ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕಳೆದ ಎರಡು ವರ್ಷಗಳಿಂದ ಬಸ್ ಸೌಲಭ್ಯ ನಿಲ್ಲಿಸಲಾಗಿದ್ದು ಜನರು ತೀವೃ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಧಿಕಾರಿಗಳಿಗೆ ಮೌಖಿಕವಾಗಿ ಸಾಕಷ್ಟು ಬಾರಿ ಮನವಿ ಮಾಡಿದರೂ ಅವರು ಸ್ಪಂದಿಸುತ್ತಿಲ್ಲ. ತಕ್ಷಣ ಬಸ್ ಸೌಲಭ್ಯ ಕಲ್ಪಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗಿರೀಶ್ ಹೆಗಡೆ ಹಕ್ರೆ, ರಜನೀಶ್ ಹೆಗಡೆ, ಪ್ರವೀಣ್ ಶೆಟ್ಟಿಸರ, ಅರುಣ ಪೂಜಾರಿ ಹಕ್ರೆ, ಅಕ್ಷಯ ಪೂಜಾರಿ, ಮಹೇಶ್ ರಾಮನಗದ್ದೆ, ಮಂಜುನಾಥ್ ಕೆ.ವಿ., ಗಣಪತಿ, ಸುರೇಶ್ ಇನ್ನಿತರರು ಹಾಜರಿದ್ದರು.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ : 7483162573, yuvadhwanismg@gmail.com