ಶಿವಮೊಗ್ಗ : ನಮಗೆ ನಮ್ಮ ತಾಯಿ ಕಲಿಸಿದ ಭಾಷೆ ಸೃಜನಶೀಲ ಆಲೋಚನೆಗಳಿಗೆ ಪ್ರೇರಣೆಯಾಗುತ್ತದೆ. ಕಲಿಕೆ ಮತ್ತು ಜ್ಞಾನದ ವಿಚಾರದಲ್ಲಿ ಮಾತೃಭಾಷೆ ಹಾಗೂ ನಮ್ಮ ಪರಿಸರದ ಭಾಷೆ ಎರಡೂ ಮಹತ್ವದ ಪಾತ್ರ ವಹಿಸುತ್ತವೆ. ಭಾಷೆಯನ್ನು ಬಳಸದೆ ಹೋದರೆ ನಾವು ಯಾರೂ ಬೆಳೆಯಲು ಸಾಧ್ಯವಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಸಮಿತಿಯು ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಸೆ. 8 ರಂದು ಏರ್ಪಡಿಸಿದ್ದ ಪಿ. ಗಣಪತಿ ರಾನಡೆ ಮತ್ತು ಕಮಲಾ ರಾನಡೆ ಸ್ಮಾರಕ ದತ್ತಿ ಮತ್ತು ದೇವಂಗಿ ಟಿ. ಚಂದ್ರಶೇಖರ ಸ್ಮಾರಕ ದತ್ತಿ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆದು ಉದ್ಘಾಟಿಸಿ ಮಾತನಾಡಿದರು.
ಕಲಿಕೆಯ ಗುಣಮಟ್ಟ ಹಾಳಾಗಿದೆ. ನೀತಿ ರೂಪಿಸುವ ಜನರ ಪ್ರಯೋಗ ಶಾಲೆ ಸರ್ಕಾರಿ ಶಾಲೆಗಳಾಗಿವೆ. ಆತ್ಮ ಸ್ಥೈರ್ಯ ತುಂಬಬೇಕಾದ ನಮ್ಮ ಸರ್ಕಾರಿ ಶಾಲೆಗಳು ಕೆಸರಲ್ಲಿ ನೆಟ್ಟ ಗೂಟದಂತೆ ಅಲ್ಲಾಡುತ್ತಿದೆ. ಪೋಷಕರು, ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬುವ ಯಾವ ಪ್ರಾಮಾಣಿಕ ಪ್ರಯತ್ನ ನಡೆಯದೆ ಅವರಿವರ ಮೇಲೆ ದೂರು ಹೇಳುವ ದುರಂತ ನೋಡುತ್ತಿದ್ದೇವೆ ಎಂದು ಡಿ. ಮಂಜುನಾಥ ವಿವರ ನೀಡಿದರು.
ಇದನ್ನೂ ಓದಿ > > ಶಿವಮೊಗ್ಗ, ಕೊಲೆ ಪ್ರಕರಣದ ಪ್ರಮುಖ ಆರೋಪಿಗೆ ಪೊಲೀಸರ ಗುಂಡೇಟು!
ದತ್ತಿ ದಾನಿಗಳಾದ ಡಾ. ಪಿ. ಗಣಪತಿ ರಾನಡೆ ಅವರ ಆಶಯದಂತೆ ಡಿ.ವಿ.ಜಿ. ಸಾಹಿತ್ಯದಲ್ಲಿ ಜೀವನ ಮೌಲ್ಯ ಕುರಿತು ಮಾತನಾಡುವಾಗ ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗ ಕನ್ನಡದ ಭಗವದ್ಗೀತೆ. ನಾವು ಬದಲಾದ ಕಾರಣ ಭಾಷೆ ಹಳೆಯದಾಗಿದೆ ಎನ್ನುವುದು ಕಾರಣವಲ್ಲ. ನಾವು ಬೆಳೆದಂತೆ ಬದುಕು, ಭಾಷೆ ಬದಲಾಗಿದೆ. ದೀಪ ಎಲ್ಲಿಂದ ಬಂತೋ ಅಲ್ಲಿಗೆ ಹೋಗಿದೆ ಎನ್ನುವ ವಿಶ್ಲೇಷಣೆಯ ಕುರಿತು ವಿವರ ನೀಡಿದರು.
ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳುವಾಗ ಕಂಬಳಿ ಹುಳಗಳಂತೆ ಕಾಲೇಜಿಗೆ ಬಂದವರು ಚಿಟ್ಟೆಯಾಗಿ ಹೋಗಬೇಕು. ನೀರಾಗಿ ಬಂದವರು ತೀರ್ಥವಾಗಿ ಹೋಗಬೇಕು. ಕಲ್ಲುಗಳಾಗಿ ಬಂದವರು ಶಿಲೆಗಳಾಗಿ ಹೋದರೆ ಶಿಕ್ಷಣ ಸಂಸ್ಥೆಗಳ ಆಶಯ ಈಡೇರಿದಂತೆ ಎಂದು ವಿವರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಪರಿಷತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಸಾಹಿತ್ಯದ ಮನಸ್ಸುಗಳು ಅರಳುವಂತೆ ಕಾರ್ಯಕ್ರಮ ನಡೆಸುತ್ತಿದೆ. ಅಧ್ಯಕ್ಷರಾದ ಡಿ. ಮಂಜುನಾಥ ಅವರ ದೈತ್ಯ ಶಕ್ತಿಯ ಮುಂದೆ ನಾವೆಲ್ಲರೂ ಜೀವನ ಮೌ ಏನೆಂದು ಹುಡುಕಬೇಕಿದೆ ಎಂದು ಡಾ. ಶ್ರೀಪತಿ ಹಳಗುಂದ ವಿವರಿಸಿದರು.
ಇದೇ ಸಮಯದಲ್ಲಿ ದೇವಂಗಿ ಟಿ. ಚಂದ್ರಶೇಖರ ಸ್ಮಾರಕ ದತ್ತಿ ಅಂಗವಾಗಿ ದತ್ತಿ ದಾನಿಗಳಾದ ಡಿ. ಸಿ. ಚೈತನ್ಯದೇವ, ಡಾ|| ಡಿ. ಸಿ. ಚೈತ್ರಾ ಶ್ರೀನಿವಾಸ, ಡಿ. ಎಚ್. ಡಾ. ಡಿ. ಸಿ. ಮೈತ್ರೇಯ ಸುರೇಂದ್ರ ಎಚ್. ಡಿ. ದೇವಂಯ ಇವರ ಆಶಯದಂತೆ ಬಿ. ಸಿ. ನೀಲಪ್ಪ ಮಾಸ್ತರ ಮತ್ತು ಸೋಮಶೇಖರ್ ವಿಶ್ರಾಂತ ಮುಖ್ಯೋಪಾಧ್ಯಾಯರಾದ ಸೋಮಶೇಖರ್ ವಿವಿಧ ಕವಿಗಳು ಬರೆದ ಹಳೆಯ ಹಾಡು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಿನ್ಸಿಪಾಲರಾದ ಪಂಕಜಾ ಮೇಡಂ ಮಾತನಾಡಿ ಸಾಹಿತ್ಯ ಓದು ಎಂದರೆ ಪಠ್ಯ ಮಾತ್ರ ಅಲ್ಲ. ನಿಜ ಜೀವನದ ಅನುಭವ ಸಾಹಿತ್ಯ ವಾಗಿ ಅರಳುತ್ತವೆ. ಅದರ ಓದು ಸಾಹಿತ್ಯ ಮಾರ್ಗದರ್ಶಿ ಯಾಗಿರುತ್ತೆ ಎಂದು ವಿವರಿಸಿದರು
ಉಪನ್ಯಾಸಕ ಸತೀಶ್ ಅವರು ಕಾರ್ಯಕ್ರಮ ನಿರೂಪಿಸಿದರು. ಗಾಯಕರಾದ ನೀಲಪ್ಪ ಮತ್ತು ಸೋಮಶೇಖರ್ ಹಾಡು ಹೇಳಿದರು. ವೇದಿಕೆಯಲ್ಲಿ ಹೊಳೆಹೊನ್ನೂರು ಹೋಬಳಿ ಘಟಕದ ಅಧ್ಯಕ್ಷರಾದ ಹಾ. ಭೆ. ಸಿದ್ದಪ್ಪ, ವಿಶ್ರಾಂತ ಪ್ರಿನ್ಸಿಪಾಲರಾದ ಗೋಪಾಲ ಸ್ವಾಮಿ, ಕಸಾಪ ಮಾಜಿ ಅಧ್ಯಕ್ಷರಾದ ಶಿವಾನಂದಪ್ಪ, ತಾ. ಕಸಾಪ ಅಧ್ಯಕ್ಷರಾದ ಎಚ್. ತಿಮ್ಮಪ್ಪ, ಕಾರ್ಯದರ್ಶಿ ಎಂ. ಇ. ಜಗದೀಶ್, ಕಸಾಪ ಜಿಲ್ಲಾ ಕಾರ್ಯದರ್ಶಿ ಡಿ. ಗಣೇಶ್, ವಿಶ್ರಾಂತ ಶಿಕ್ಷಕಿ ಬಾನು ಮೇಡಂ, ಶ್ರೀನಿವಾಸ, ನಾಗರಾಜ್, ಅಶೋಕ ರಾವ್ ಘೋರ್ಪಡೆ, ಹಾಲೇಶಪ್ಪ ಮಾಸ್ತರ, ಭಾಗವಹಿಸಿದ್ದರು. ಉಪನ್ಯಾಸಕರಾದ ಸತೀಶ್ ಸ್ವಾಗತಿಸಿ ನಿರೂಪಿಸಿದರು. ಕನ್ನಡ ಉಪನ್ಯಾಸಕ ಗಿರಿಧರಮೂರ್ತಿ ವಂದಿಸಿದರು.














