ವಿಶೇಷ ಲೇಖನ | ರವಿಕುಮಾರ್ ಕೆಎಂ, ಹವ್ಯಾಸಿ ಬರಹಗಾರರು
ಶಿವಮೊಗ್ಗ: ನಗರದ ಬಸ್ ನಿಲ್ದಾಣ ಬಳಿ ನಿನ್ನೆ ಭೀಕರ ಅಪಘಾತ ಸಂಭವಿಸಿದ್ದು ಇದಕ್ಕೆ ಮೂಲವಾಗಿ ಕಾರಣ ಯಾರು? ಹೊಣೆಯನ್ನು ಹೊತ್ತಿಕೊಳ್ಳಬೇಕಾದ ಇಲಾಖೆ ಯಾವುದು? ಎಂಬುದೇ ಸಾರ್ವಜನಿಕ ವಲಯದಲ್ಲಿ ಮೂಡುತ್ತಿರುವ ಪ್ರತಿನಿತ್ಯದ ಶಾಪಗ್ರಸ್ತವಾದ ಪ್ರಶ್ನೆಗಳಾಗಿವೆ?
ಅಂದ ಮಾತ್ರಕ್ಕೆ ನಗರದಲ್ಲಿ ನಡೆದ ಅಪಘಾತಗಳು ಇದೇ ಮೊದಲಲ್ಲ. ಅದೆಷ್ಟೋ ಅಪಘಾತಗಳು ಪ್ರಮುಖ ವೃತ್ತಗಳಲ್ಲಿ ನಡೆದಿರುವುದು ಭಯಾನಕವಾದ ಸಂಗತಿಯಾಗಿದೆ.
ಇದನ್ನೂ ಓದಿ > ಶಿವಮೊಗ್ಗ ಬಸ್ ಸ್ಟ್ಯಾಂಡ್ ಬಳಿ ಸರಣಿ ಅಪಘಾತ, ಕಾರು ಬಸ್ ನಡುವೆ ಸಿಲುಕಿದ ಆಟೋ ನಜ್ಜಗುಜ್ಜು? ಹೇಗಾಯ್ತು ಘಟನೆ?
ನಗರದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ ಇದರ ನಡುವೆ ಅಪಘಾತಗಳು ಕೂಡ ಹೆಚ್ಚಾಗಿದ್ದು ಭಾರೀ ವಾಹನಗಳ ಅವಸರದ ಚಾಲನೆಯೋ, ಇಲ್ಲ ಅಜಾಗರೂಕತೆಯ ಚಾಲನೆಯೋ ಏನೋ ಒಟ್ಟಿನಲ್ಲಿ ಸಣ್ಣ ಪ್ರಮಾಣದ ವಾಹನ ಸವಾರರಿಗೆ ಎದೆಯಲ್ಲಿ ನಡುಕ ಹುಟ್ಟಿಸಿದೆ. ಅದರಲ್ಲಂತೂ ಪಾದಚಾರಿಗಳ ಕಷ್ಟ ಹೇಳಲಾಗದು ಸಮಸ್ಯೆಯನ್ನು ಅನುಭವಿಸಿದವರಿಗೆ ಗೊತ್ತು. ಒಂದು ಬಾರಿ ರಸ್ತೆಗೆ ಇಳಿದರೆ ಮನೆ ಸೇರುವುದು ಅಷ್ಟು ಸುಲಭವಲ್ಲ ಆ ರೀತಿಯಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ ನರ್ತನವು ನಡೆದು ಕೊನೆಗೆ ಅಪಾಯದ ದರ್ಶನವಾಗುತ್ತದೆ.

ಇನ್ನು ವಯಸ್ಸಾದವರು, ರೋಗಿಗಳು, ಶಾಲಾ ಮಕ್ಕಳು, ಸ್ತ್ರೀಯರು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಜೀವಕ್ಕೆ ಬೆಲೆ ಇಲ್ಲ, ಡ್ರೈವಿಂಗ್ ಕ್ರೇಜ್ ಗೆ ಬೆಲೆಯಿದೆ ಎಂದೆನಿಸುತ್ತದೆ.
ಸಮಯದ ಅಭಾವದಿಂದ ಎಲ್ಲರೂ ಅವಸರವಾಗಿ ಹೋಗುವಂತಿದ್ದು, ಚಾಲನೆ ಮಾಡುವಾಗ ಕೆಲವೊಂದು ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಆ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಪೋಲಿಸ್ ಇಲಾಖೆಯು ಇತ್ತೀಚೆಗೆ ಹತ್ತು ಹಲವು ರೀತಿಯಲ್ಲಿ ವಾಹನ ಸವಾರರಿಗೆ ನಿಯಮಗಳನ್ನು ಪಾಲಿಸುವುದು ಹೇಗೆ ಎಂದು ಸಾರ್ವಜನಿಕವಾಗಿ ಅರಿವನ್ನು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಹಾಗೆಯೇ ನಗರದಲ್ಲಿ 14 ಪ್ರಮುಖ ವೃತ್ತಗಳಲ್ಲಿ, ಹಂಪ್ಸ್’ಗಳು ಇರುವ ಕಡೆಗಳಲ್ಲಿ ಸೋಲಾರ್ ಸ್ಟಡ್’ಗಳನ್ನು ಅಳವಡಿಸಿ ರಾತ್ರಿ ನಡೆಯುವ ಅಪಘಾತಗಳು ತಡೆಗಟ್ಟಲು ಪಣತೊಟ್ಟಿದ್ದಾರೆ. ಇನ್ನು ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಸವಾರರಿಗೆ ITMS (ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ) ಮೂಲಕ ಇ- ಚಲನ್ ವ್ಯವಸ್ಥೆಯಲ್ಲಿ ದಂಡ ಹಾಕುವುದರ ಜೊತೆಯಲ್ಲಿ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದು ಅರಿವನ್ನು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇವೆಲ್ಲವೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದೆ ಗಾಳಿಗೆ ತೂರಿ ಹಿಂದಕ್ಕೆ ಒರೆಸಿಕೊಂಡು ಇನ್ನೊಬ್ಬರ ಜೀವಕ್ಕೆ ಕುತ್ತು ತರುವ ಸವಾರರಿಗೆ ಇದಷ್ಟೇ ಅಲ್ಲದೇ ಇನ್ನು ಕಠಿಣ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲೇಬೇಕಾಗಿದೆ. ಏಕೆಂದರೆ, ಅವರ ಕ್ರೇಜ್ ಇನ್ನೊಂದು ಜೀವ ತೆಗೆಯುವ ಹಕ್ಕು ಯಾರಿಗೂ, ಯಾವನಿಗೂ ಇಲ್ಲ.
ಇಷ್ಟೆಲ್ಲ ನಿಯಮಗಳನ್ನು ಮಾಡಿದರೂ ಕೂಡ ಅಪಘಾತಗಳು ನಡೆಯುವುದು ಸರ್ವೇಸಾಮಾನ್ಯವಾಗಿದೆ. ಇದು ಪೋಲಿಸ್ ಇಲಾಖೆಗೆ ಪ್ರತಿನಿತ್ಯದ ತಲೆನೋವಾಗಿ ಪರಿಣಮಿಸಿದೆ.
ಇದನ್ನೂ ಓದಿ >ಶಿವಮೊಗದಲ್ಲಿ ಮಧ್ಯರಾತ್ರಿ ಮಳೆಯ ಅವಾಂತರ, ಎಲ್ಲೆಲ್ಲಿ ಏನೇನಾಯ್ತು?
ಅವಸರವೇ ಅಪಘಾತಕ್ಕೆ ಕಾರಣ
ಇದು ವಾಹನ ಸವಾರರಿಗೆ ದಿನನಿತ್ಯದ ಗೋಳಾಗಿದೆ. ಎದುರುಗಡೆ, ಅಕ್ಕ-ಪಕ್ಕದಿಂದಲೂ ಯಾವುದೋ ರೂಪದಲ್ಲಿ ಅಪಘಾತಕ್ಕೆ ನೇರವಾಗಿ ಕಾರಣವಾಗುತ್ತಿರುವುದು ಪ್ರಮುಖ ವೃತ್ತಗಳಲ್ಲಿನ ಅವೈಜ್ಞಾನಿಕ, ಅಸಡ್ಡೆಯ ಕೆಂಪು, ಹಳದಿ, ಹಸಿರು ತೋರಿಸುವ ಸಿಗ್ನಲ್. ಯಾಕೆಂದರೆ, ನಗರದ ರೈಲ್ವೆ ನಿಲ್ದಾಣ ಬಳಿ ಇರುವ ಸಿಗ್ನಲ್ ವೃತ್ತದಲ್ಲಿ ಟೈಮರ್ ವಾಹನ ಸವಾರರಿಗೆ ಕಾಣಿಸುವಂತೆ ಇರುವುದು ಬಿಟ್ಟರೆ ನಗರದ ಬೇರೆ ವೃತ್ತದಲ್ಲಿ ಈ ಟೈಮರ್ ಇದ್ದು ಇಲ್ಲದಂತಾಗಿದೆ. ಇದರಿಂದಾಗಿ ಸಿಗ್ನಲ್ ಬಿಡುತ್ತದೆ, ಬೀಳುತ್ತದೆ ಎನ್ನುವಂತ ಗಾಬರಿ ಹಾಗೂ ಅವಸರದಲ್ಲಿ ಸಿಗ್ನಲ್ ಜಂಪ್ ಮಾಡಿ ಅಪಘಾತ ಕಾರಣ ಆಗಿರುವುದು ಹೆಚ್ಚಿನ ಸಂಖ್ಯೆಯಲ್ಲಿವೆ.
ಇಂತಹ ಅತ್ಯಾಧುನಿಕ ತಂತ್ರಜ್ಞಾನದ ಕಾಲಘಟ್ಟದಲ್ಲಿ ಅಡಗೂಲಜ್ಜಿ ಕಾಲದ ತಂತ್ರಜ್ಞಾನದಲ್ಲಿ ಇದ್ದು ದಂಡ ಕಟ್ಟಿಸಿಕೊಳ್ಳುವವುದು ಮುಖ್ಯವಾಗಬಾರದು. ಬದಲಾಗಿ ಇನ್ನಾದರೂ ಎಚ್ಚೆತ್ತುಕೊಂಡು ನಗರದ ಎಲ್ಲಾ ವೃತ್ತದಲ್ಲಿ ಸಿಗ್ನಲ್ ಕಡೆ ಟೈಮರ್, ಸೆಕೆಂಡ್, ನಿಮಿಷದ ಅಂಕೆಗಳು ಕಾಣುವಂತೆ ಮಾಡಿದರೆ ಅವಸರದಿಂದ ಸಿಗ್ನಲ್ ಜಂಪ್ ಮಾಡಿ ಅಪಘಾತ ಸಂಭವಿಸುವ ಇನ್ನೊಂದು ಜೀವ ತೆಗೆಯುವ ಕೆಲಸ ಆಗುವುದಿಲ್ಲ.
ಪೋಲಿಸ್ ಇಲಾಖೆಯ ಕೆಲಸಕ್ಕೆ ನಾವು ಸದಾ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇವೆ. ಇದೊಂದು ಕೆಲಸವಾದರೆ ಸ್ವಲ್ಪೇ ಸ್ವಲ್ಪ ಮಟ್ಟಿಗೆ ಸಣ್ಣ ಪ್ರಮಾಣದ ಅಪಘಾತಗಳು ಸಂಭವಿಸುವುದನ್ನು ತಪ್ಪಿಸಬಹುದು.














