ಸೊರಬ : ಬಡವರು ಮತ್ತು ಶ್ರಮಿಕ ವರ್ಗದವರು ಹಸಿವಿನಿಂದ ಇರಬಾರದು ಎಂಬ ಉದಾತ್ತ ಉದ್ದೇಶದಿಂದ ನಮ್ಮ ಸರ್ಕಾರ ಇಂದಿರಾ ಕ್ಯಾಂಟೀನ್ ಯೋಜನೆಗೆ ಮರುಜೀವ ನೀಡಿದೆ. ಈ ಮೂಲಕ ಹಸಿವು ಮುಕ್ತ ಕರ್ನಾಟಕ ನಿರ್ಮಾಣವೇ ನಮ್ಮ ಮುಖ್ಯ ಗುರಿ ಎಂದು ಶಾಲಾ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಇದನ್ನೂ ಓದಿ ಹೊಸನಗರ, ಹಾಲಿನ ಟ್ಯಾಂಕರ್ ಪಲ್ಟಿ , ಮಾವಿನಹೊಳೆಯಲ್ಲಿ ಹಾಲಿನ ಹೊಳೆ!
ಅವರು ಇಂದು ಆನವಟ್ಟಿಯಲ್ಲಿ ನೂತನವಾಗಿ ನಿರ್ಮಿಸಲಾದ ಇಂದಿರಾ ಕ್ಯಾಂಟೀನ್ ಅನ್ನು ಲೋಕಾರ್ಪಣೆಗೊಳಿಸಿ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪ್ರಮುಖವಾಗಿದ್ದ 20 ಅಂಶಗಳ ಕಾರ್ಯಕ್ರಮದ ಆಶಯದಂತೆ, ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ರೂ.5 ಮತ್ತು 10 ರೂ.ಗಳ ಅತ್ಯಲ್ಪ ದರದಲ್ಲಿ ಗುಣಮಟ್ಟದ ಆಹಾರ ನೀಡುವ ಮೂಲಕ ಜನಸಾಮಾನ್ಯರ ಪರವಾಗಿ ನಿಂತಿದೆ. ಇದರಿಂದ ಹಸಿದವರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಆಹಾರ ಕೈಗೆಟುಕುವ ದರದಲ್ಲಿ ಮತ್ತು ಸಕಾಲದಲ್ಲಿ ಸಿಗುವುದರಿಂದ ಶ್ರಮಿಕ ವರ್ಗದವರಿಗೂ ಸಾಕಷ್ಟು ಅನುಕೂಲವಾಗಿದೆ ಎಂದರು.
ಜಿಲ್ಲೆಯಲ್ಲಿ ಈಗಾಗಲೇ 16 ಇಂದಿರಾ ಕ್ಯಾಂಟೀನ್ಗಳ ಗುರಿ ಹೊಂದಲಾಗಿದ್ದು, ಶನಿವಾರ ಹೊಳೆಹೊನ್ನೂರಿನಲ್ಲಿ ಇಂದಿರಾ ಕ್ಯಾಂಟೀನ್ ಗೆ ಚಾಲನೆ ನೀಡಿ ಇಂದು ಆನವಟ್ಟಿಯಲ್ಲಿ ಉದ್ಘಾಟಿಸಲಾಗಿದೆ. ಮತ್ತು ಶಿಕಾರಿಪುರದಲ್ಲಿ ಕಾರ್ಯಾರಂಭ ಮಾಡಲಿದೆ ಎಂದರು.
ಇದನ್ನೂ ಓದಿ ಹೊಳೆಹೊನ್ನೂರು ಗಾಂಧಿ ಸರ್ಕಲ್ ಬಳಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ, ಹೊಳೆಹೊನ್ನೂರಿಗೆ ಕೆಪಿಎಸ್ ಶಾಲೆ
ಪಂಚ ಗ್ಯಾರಂಟಿಗಳ ಶಕ್ತಿ:
ರಾಜ್ಯದ ಜನತೆಗೆ ಕೇವಲ ಅಕ್ಕಿ ಮಾತ್ರವಲ್ಲದೆ, ಗೃಹಲಕ್ಷ್ಮಿ ಯೋಜನೆಯಡಿ 2,000 ರೂ. ಗೌರವಧನ ಹಾಗೂ ಉಚಿತ ವಿದ್ಯುತ್ ನೀಡುವ ಮೂಲಕ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಇದು ಸರ್ಕಾರದ ಕೊಡುಗೆಯಲ್ಲ, ಜನರ ಹಕ್ಕು ಎಂದು ಸಚಿವರು ಪ್ರತಿಪಾದಿಸಿದರು.
ಪಂಪ್ಸೆಟ್ ಸಕ್ರಮ: ರೈತರ ಹಿತದೃಷ್ಟಿಯಿಂದ ಬಾಕಿ ಇರುವ ಬೋರ್ವೆಲ್ ಪಂಪ್ಸೆಟ್ಗಳ ಸಕ್ರಮ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಸಚಿವರು ಸ್ವತಃ ಕ್ಯಾಂಟೀನ್ ಆಹಾರ ಸವಿಯುವ ಮೂಲಕ ಗುಣಮಟ್ಟವನ್ನು ಪರಿಶೀಲಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com














