ಶಿವಮೊಗ್ಗ: ಶಿಕ್ಷಣದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕ್ರಿಯಾಶೀಲತೆಯು, ನಮ್ಮ ವ್ಯಕ್ತಿತ್ವವನ್ನು ಪರಿಪೂರ್ಣಗೊಳಿಸಲಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಹೇಳಿದರು.
ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ‘ಜಾನ್ವಿ’ – ಕ್ರೀಡಾ ಮತ್ತು ಸಾಂಸ್ಕೃತಿಕ ಸಾಧಕರಿಗೆ ವಿಶೇಷ ಅಭಿನಂದನಾ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಜೀವನದಲ್ಲಿ ಎದುರಾಳಿಯ ಇತಿಹಾಸಕ್ಕಿಂತ ಗೆಲುವಿನ ಗುರಿಯೇ ಮುಖ್ಯ. ಯಾರು ಎದುರಾಳಿಯಾಗಿದ್ದರು ಎಂಬುದಕ್ಕಿಂತ, ಸಾಧನೆಯ ಶಿಖರ ತಲುಪಿದ ಹೆಜ್ಜೆಗಳೇ ಅಂತಿಮವಾಗಿ ನೆನಪಿನಲ್ಲಿ ಉಳಿಯುತ್ತವೆ. ಯಶಸ್ಸು ಎಂದರೆ ಕೇವಲ ವಿಜಯದ ಕ್ಷಣವಲ್ಲ; ಅದು ನಿರಂತರ ಪರಿಶ್ರಮ, ಶಿಸ್ತು ಮತ್ತು ಗುರಿಯತ್ತ ಸಾಗಿದ ಅಚಲ ನಿಷ್ಠೆಯ ಫಲ.
ಅದೃಷ್ಟದ ನಿರೀಕ್ಷೆಯಲ್ಲಿ ಕಾಲ ಕಳೆಯುವುದಕ್ಕಿಂತ ಪರಿಶ್ರಮದ ಮೇಲೆ ವಿಶ್ವಾಸವಿಡುವುದು ಜೀವನದ ಯಶಸ್ಸಿನ ಗುಟ್ಟು. ಸಾಧನೆಯ ಹಾದಿಯಲ್ಲಿನ ಪ್ರತಿಯೊಂದು ಹೆಜ್ಜೆಯೂ ಪಾಠವಾಗಿದ್ದು, ಆ ಅನುಭವಗಳೇ ವ್ಯಕ್ತಿತ್ವವನ್ನು ರೂಪಿಸುತ್ತವೆ. ಸೋತವರ ಜೊತೆಯಲ್ಲಿ ಕುಳಿತುಕೊಳ್ಳಿ, ಅವರಲ್ಲಿ ಅಹಂಕಾರಕ್ಕಿಂತ ಜೀವನದ ಅಮೂಲ್ಯ ಅನುಭವ ಹೆಚ್ಚಾಗಿರುತ್ತದೆ ಎಂದು ಹೇಳಿದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ನಮ್ಮಲ್ಲಿ ಸೋಲು ಗೆಲುವುಗಳನ್ನು ನಿಭಾಯಿಸುವ ಸ್ಥಿತಪ್ರಜ್ಞೆ ಬೆಳೆಸಿಕೊಳ್ಳಬೇಕು. ಜೊತೆಯಲ್ಲಿ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವಾಗ, ತಂಡಗಳೊಂದಿಗೆ ಕಾರ್ಯನಿರ್ವಹಣೆ ಅತ್ಯವಶ್ಯಕ. ಅಂತಹ ಕೌಶಲ್ಯತೆಯನ್ನು ಪಡೆಯಲು ಕ್ರೀಡೆ ಮತ್ತು ಸಾಂಸ್ಕೃತಿಕ ವಿಭಿನ್ನತೆಯಿಂದ ಸಾಧ್ಯ ಎಂದು ಹೇಳಿದರು.
ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಮಾತನಾಡಿ, ಆಧುನಿಕ ಜೀವನ ಶೈಲಿಯ ದೊಡ್ಡ ಶತ್ರು ಸೋಮಾರಿತನ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸಧೃಡಗೊಳಿಸಿಕೊಳ್ಳಲು ಸದಾ ಚಟುವಟಿಕೆಯಿಂದಿರಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ > ಸಂಚಾರ ದಂಡಕ್ಕೆ ಮತ್ತೆ 50% ವಿನಾಯ್ತಿ, ಎಲ್ಲಿಯವರೆಗೆ ಅವಕಾಶ?
ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಶಶಿಕಿರಣ್, ಕ್ರೀಡಾ ವಿಭಾಗದ ನಿರ್ದೇಶಕರಾದ ಚೇತನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಟಿಯು ಸೇರಿದಂತೆ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಸೇರಿದಂತೆ ವಿಶೇಷ ಪಾರಿತೋಷಕ ನೀಡಿ ಅಭಿನಂದಿಸಲಾಯಿತು.















