ಶಿವಮೊಗ್ಗ : ಬಂಗಾರ ಲೇಪಿತ ನಕಲಿ ಆಭರಣಗಳನ್ನು ವಿವಿಧ ಬ್ಯಾಂಕುಗಳಲ್ಲಿ ಅಡವಿಟ್ಟು ಬರೋಬ್ಬರಿ 28,87,237 ಸಾಲ ಪಡೆದು ವಂಚಿಸಿದ ಜಾಲವನ್ನು ಶಿವಮೊಗ್ಗದ ದೊಡ್ಡಪೇಟೆ ಪೊಲೀಸರು ಪತ್ತೆಹಚ್ಚಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ವ್ಯವಸ್ಥಾಪಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಎ1 ಆರೋಪಿ ಲೋಕೇಶ (39, ತೀರ್ಥಹಳ್ಳಿ) ಎಂಬಾತನನ್ನು ಬಂಧಿಸಿ, 419.824 ಗ್ರಾಂ ನಕಲಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ > ಶಿವಮೊಗ್ಗ ಗ್ರಾಮಾಂತರ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ
ಆರೋಪಿಯು ಪಿಎನ್ಬಿ, ವರ್ತಕರ ಸೌಹಾರ್ಧ ಸಂಘ, ಸಿರಿ ಸೌಹಾರ್ಧ ಸಹಕಾರಿ, ಡಿಸಿಸಿ ಬ್ಯಾಂಕ್, ಐಒಬಿ ಹಾಗೂ ಗುಲಾಬಿ ಜ್ಯೂವೆಲರಿ ವರ್ಕ್ಸ್ನಲ್ಲಿ ನಕಲಿ ಚಿನ್ನವಿಟ್ಟು ವಂಚಿಸಿದ್ದಾನೆ. ಪ್ರಕರಣದಲ್ಲಿ ಬ್ಯಾಂಕ್ ಗೋಲ್ಡ್ ಅಪ್ರೈಸರ್ ರವಿಶಂಕರ್, ಸುಧಾ, ರಾಹುಲ್ ಮತ್ತು ಶರತ್ ಎಂಬುವವರೂ ಶಾಮೀಲಾಗಿದ್ದು, ಇವರೂ ಸಹ ಬೇರೆ ಬ್ಯಾಂಕುಗಳಲ್ಲಿ ವಂಚಿಸಿರುವ ಶಂಕೆ ಇದೆ. ಸದ್ಯ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ > ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!
ದೊಡ್ಡಪೇಟೆ ಪಿಐ ಸತ್ಯನಾರಾಯಣ, ಪಿಎಸ್ಐ ನಾರಾಯಣ ಮಧುಗಿರಿ ಹಾಗೂ ಸಿಬ್ಬಂದಿ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.















