ಶಿವಮೊಗ್ಗ: ಪ್ರೀತಿಸಿದ ಯುವತಿ ಹಾಗೂ ಅವರ ಕುಟುಂಬದವರಿಂದ ಹಲ್ಲೆ ಮತ್ತು ಅವಮಾನಕ್ಕೊಳಗಾಗಿದ್ದ ಯುವಕ ಶಿವಮೊಗ್ಗ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ವಿಷ ಸೇವಿಸಿದ್ದು, ಕೂಡಲೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವುಕಂಡಿದ್ದಾನೆ.
ಮೃತ ಯುವಕ ಶಿಕಾರಿಪುರ ತಾಲೂಕಿನ ಶಬರೀಶ್ (28). ಯುವಕನ ಸಾವಿಗೆ ಪ್ರಚೋದನೆ ನೀಡಿದ ಆರೋಪದಡಿ ಐವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ > ಭದ್ರಾವತಿ, ಬಂಡಿಗುಡ್ಡ ಅರಣ್ಯ ನೌಕರರ ಮೇಲೆ ಜೇನುದಾಳಿ!
ಶಬರೀಶ್ ತೀರ್ಥಹಳ್ಳಿಯಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದರು. ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಅವರ ಮನೆಯಲ್ಲಿ ಇಬ್ಬರ ಪ್ರೀತಿಗೆ ವಿರೋಧವಿತ್ತು ಎಂದು ಆರೋಪಿಸಲಾಗಿದೆ. ಏಪ್ರಿಲ್ 21 ರಂದು ಯುವತಿ ಕರೆ ಮಾಡಿ ಮಾತನಾಡಬೇಕು ಎಂದು ಶಿವಮೊಗ್ಗದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಕರೆಸಿಕೊಂಡಿದ್ದಳು. ಅಲ್ಲಿಗೆ ಬಂದಿದ್ದ ಯುವತಿ ಮತ್ತು ಆಕೆಯ ಸಂಬಂಧಿ ಶಬರೀಶ್ ಮೇಲೆ ಹಲ್ಲೆ ನಡೆಸಿ, ಮದುವೆಗೆ ನಿರಾಕರಿಸಿದ್ದಾರೆ. ಅಲ್ಲದೆ ಆತನ ಮೊಬೈಲ್ನಲ್ಲಿದ್ದ ಫೋಟೋಗಳನ್ನು ಡಿಲೀಟ್ ಮಾಡಿ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದರಿಂದ ಮನನೊಂದ ಶಬರೀಶ್ ಬಸ್ ನಿಲ್ದಾಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು. ಅಲ್ಲಿದ್ದವರು ತಕ್ಷಣ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಏಪ್ರಿಲ್ 22ರ ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಶಬರೀಶ್ ಕೊನೆಯುಸಿರೆಳೆದಿದ್ದಾನೆ.
ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















