ಶಿವಮೊಗ್ಗ: ಭಾರತದ ಜನಗಣತಿ-2027ರ ಭಾಗವಾಗಿ ಶಿವಮೊಗ್ಗ ಸೇರಿದಂತೆ ಕರ್ನಾಟಕದಲ್ಲಿ ಏ.1ರಿಂದ ಆರಂಭವಾದ ಸ್ವಯಂ ಗಣತಿ ಏ.15ರ ನಿನ್ನೆ ಮುಗಿದಿದ್ದು, ಏ.16ರ ಇಂದಿನಿಂದ ಮೇ.15ರ ವರೆಗೆ ಒಂದು ತಿಂಗಳ ಮನೆ ಗಣತಿ ನಡೆಯಲಿದೆ. ಗಣತಿದಾರರು ಮನೆ ಮನೆಗೆ ತೆರಳಿ ಮನೆಗಳ ಸ್ಥಿತಿಗತಿ, ಲಭ್ಯವಿರುವ ಸೌಲಭ್ಯಗಳು ಹಾಗೂ ಆಸ್ತಿಗಳು ಮತ್ತಿತರ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ.
ಇದನ್ನೂ ಓದಿ > ಹಾವು ಕಚ್ಚಿ ಎರಡೂವರೆ ವರ್ಷದ ಮಗು ಸಾವು
ಗಣತಿ ಕಾರ್ಯಕ್ಕೆ ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ 350ಕ್ಕೂ ಹೆಚ್ಚು ಹಾಗೂ ಶಿವಮೊಗ್ಗ ನಗರದಲ್ಲಿ 140 ಕ್ಕೂ ಹೆಚ್ಚು, ರಾಜ್ಯದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಗಣತಿದಾರರನ್ನು ನಿಯೋಜಿಸಲಾಗಿದೆ.
16 ವರ್ಷಗಳ ಬಳಿಕ ದೇಶದಲ್ಲಿ ನಡೆಯುತ್ತಿರುವ ಜನಗಣತಿಯಲ್ಲಿ ಮನೆಗಳ ಪಟ್ಟಿ ತಯಾರಿಕೆ ಮತ್ತು ವಸತಿ ಗಣತಿಯು ಜನಗಣತಿಯ ಮೊದಲ ಹಂತವಾಗಿದೆ. ಮೊದಲ ಹಂತದಲ್ಲಿ ಜನಗಣತಿಗೆ 33 ಪ್ರಶ್ನೆಗಳನ್ನು ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿವಿಧ ಕೇಂದ್ರಾಡಳಿತ ಪ್ರದೇಶಗಳು ಮತ್ತು ಕರ್ನಾಟಕ ಸೇರಿ ಏಳು ರಾಜ್ಯದಲ್ಲಿ ಸೆ.20ರವರೆಗೆ ಜನಗಣತಿ ನಡೆಯಲಿದ್ದು, ಮುಂದಿನ ವರ್ಷ ಫೆಬ್ರವರಿಯಲ್ಲಿ 2ನೇ ಹಂತದ ಎಣಿಕೆ ನಡೆಯಲಿದ್ದು, ಆ ಸಂದರ್ಭದಲ್ಲಿ ಜನಸಂಖ್ಯೆ ಎಣಿಕೆ ಮಾಡಲಾಗುತ್ತದೆ. ಪ್ರತಿಯೊಂದು ಮನೆಯ ಪ್ರತಿ ವ್ಯಕ್ತಿಯ ಜಾತಿ, ಸಾಮಾಜಿಕ, ಆರ್ಥಿಕ ಮತ್ತು ಇತರ ವಿವರಗಳನ್ನು ಸಂಗ್ರಹಿಸಲಾಗುತ್ತದೆ.
ಇದನ್ನೂ ಓದಿ > ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ
ಶಿವಮೊಗ್ಗ ಜಿಲ್ಲಾಡಳಿತದಿಂದ ಶಿವಮೊಗ್ಗ ಗ್ರಾಮಾಂತರ ವಿಭಾಗದ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಕಾರ್ಯಾಗಾರವನ್ನು ಏರ್ಪಡಿಸಿ ಜನ ಗಣತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮತ್ತು ನಿಖರವಾಗಿ ನಡೆಸುವಂತೆ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿಯವರು ನಿರ್ದೇಶನ ನೀಡಿದರು.
ತಹಶೀಲ್ದಾರ್ಗಳು, ಮೇಲ್ವಿಚಾರಕರು ಮತ್ತು ಗಣತಿದಾರರು ಸಮನ್ವಯತೆಯಿಂದ ಕೆಲಸ ಮಾಡಬೇಕು. ಜಿಲ್ಲೆಯ ಪ್ರತಿಯೊಂದು ಮನೆ ಮತ್ತು ಪ್ರದೇಶದ ನಿವಾಸಿಗಳನ್ನು ಈ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಒಳಪಡಿಸಬೇಕು. ಯಾವುದೇ ಒಂದು ಕುಟುಂಬವೂ ಗಣತಿಯಿಂದ ವಂಚಿತವಾಗಬಾರದು. ಗಣತಿಗಾಗಿ ಬಳಸಲಾಗುವ ಡಿಜಿಟಲ್ ಪೋರ್ಟಲ್ಗಳಲ್ಲಿ ದತ್ತಾಂಶವನ್ನು ದಾಖಲಿಸುವಾಗ ತಾಂತ್ರಿಕ ದೋಷಗಳಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದರು.
ಗಣತಿ ಸಂದರ್ಭದಲ್ಲಿ ನಡೆಯುವ ಎಲ್ಲಾ ವೈಯಕ್ತಿಕ ದತ್ತಾಂಶಗಳ ಗೌಪ್ಯತೆ ಕಾಪಾಡಲಾಗುವುದು, ದತ್ತಾಂಶ ದುರುಪಯೋಗವಾಗುತ್ತದೆ ಎಂದು ಜನ ಭಯಪಡುವುದು ಬೇಡ ಹೀಗಾಗಿ ಜನರು ತಪ್ಪದೇ ಗಣತಿಯಲ್ಲಿ ಪಾಲ್ಗೊಂಡು ಗಣತಿದಾರರು ಕೇಳುವ ಪ್ರಶ್ನೆಗಳಿಗೆ ನಿಖರವಾದ ಮಾಹಿತಿ ಒದಗಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.














