ಶಿವಮೊಗ್ಗ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಅಬ್ಬರ ಹೆಚ್ಚಾಗಿದ್ದು, ಜನರು ಫ್ಯಾನ್, ಎಸಿ, ತಂಪು ಪಾನೀಯಗಳ ಮೊರೆಹೋಗುತ್ತಿದ್ದಾರೆ. ವಿಶೇಷವೇನೆಂದರೆ ಶಿವಮೊಗ್ಗ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಪ್ರಾಣಿ-ಪಕ್ಷಿಗಳನ್ನು ತಂಪಾಗಿರಿಸಲು ಮೃಗಾಲಯ ಪ್ರಾಧಿಕಾರವು ವಿಶೇಷ ’ಕೂಲಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಇದನ್ನೂ ಓದಿ > ಮನೆಗೆ ಬಂದು ಬ್ಯಾಗ್ ಪರಿಶೀಲಿಸಿದ ಮಹಿಳೆಗೆ ಕಾದಿತ್ತು ಶಾಕ್!
ಹೌದು, ವನ್ಯಜೀವಿಗಳಿಗೆ ಈ ತುಂತುರು ನೀರಿನ ಸಿಂಪಡಣೆಯಿಂದ ತಂಪಿನ ವಾತಾವರಣವನ್ನು ನಿರ್ಮಿಸಲಾಗಿದ್ದು, ಪ್ರಾಣಿ-ಪಕ್ಷಿಗಳಿಗೆ ಕಾಡಿನ ನೈಸರ್ಗಿಕ ತಂಪಿನ ಅನುಭವ ನೀಡಲು ಈ ತಂತ್ರಜ್ಞಾನ ಸಹಕಾರಿಯಾಗಿದೆ. ವಿಶೇಷವಾಗಿ ಹುಲಿ, ಸಿಂಹಗಳ ಆವರಣದಲ್ಲಿ ಕೃತಕ ಹೊಂಡಗಳನ್ನು ನಿರ್ಮಿಸಲಾಗಿದ್ದು, ವನ್ಯಜೀವಿಗಳು ನೀರಿನಲ್ಲಿ ಮಿಂದೆದ್ದು ಸಖತ್ ಎಂಜಾಯ್ ಮಾಡುತ್ತಿವೆ. ಇಲ್ಲಿನ ಪ್ರಾಣಿ-ಪಕ್ಷಿಗಳಿಗೆ ಬಿಸಿಲಿನಿಂದ ಯಾವುದೇ ಅಫಾತವಾಗದಂತೆ ದೇಹವನ್ನು ತಪ್ಪು ಮಾಡಿಕೊಳ್ಳಲು ಸಹಾಯಕವಾಗುತ್ತಿದೆ. ಈ ತುಂತುರು ನೀರಿನ ವ್ಯವಸ್ಥೆಯನ್ನು ಕಳೆದ ಮೂರು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ.

ಆಹಾರದಲ್ಲೂ ಬದಲಾವಣೆ
ವನ್ಯಜೀವಿ ತಜ್ಞರು ಹೇಳುವ ಪ್ರಕಾರ ಬಿಸಿಲು ಹೆಚ್ಚಾದಾಗ ಪ್ರಾಣಿ, ಪಕ್ಷಿಗಳ ಆರೋಗ್ಯದ ಮೇಲೂ ಪರಿಣಾಮ ಬೀರಲಿದ್ದು, ಮನುಷ್ಯರಂತೆಯೇ ಪ್ರಾಣಿಗಳಲ್ಲೂ ನಿರ್ಜಲೀಕರಣ (#Dehydration) ಉಂಟಾಗುವ ಸಾಧ್ಯತೆ ಇರುವುದರಿಂದ, ಅವುಗಳ ಆಹಾರ ಪದ್ಧತಿಯಲ್ಲೂ ಬದಲಾವಣೆ ಮಾಡಲಾಗಿದೆ.
ದೇಹದಲ್ಲಿ ನೀರಿನ ಅಂಶ ಕಾಪಾಡಿಕೊಳ್ಳಲು ಕಲ್ಲಂಗಡಿ, ಮಸ್ಕ್ ಮೆಲನ್, ಖರಬೂಜದಂತಹ ಹಣ್ಣುಗಳನ್ನು ನೀಡಲಾಗುತ್ತಿದ್ದು, ಆಹಾರದ ಜೊತೆಗೆ ಜೀವಸತ್ವಗಳ ಪೂರೈಕೆಗೂ ಒತ್ತು ನೀಡಲಾಗಿದೆ.
ತುಂತುರು ನೀರಿನ ವ್ಯವಸ್ಥೆಗೆ ಪ್ರವಾಸಿಗರು ಸಂತಸ
ಶಿವಮೊಗ್ಗ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವ ಪ್ರವಾಸಿಗರು ಬಿಸಿಲಿನಿಂದ ಸುಸ್ತಾಗಬಾರದು ಎಂಬ ದೃಷ್ಟಿಯಿಂದ ಪ್ರವೇಶ ದ್ವಾರದಲ್ಲೇ ಮಿಸ್ಟ್ ತುಂತುರು ವ್ಯವಸ್ಥೆ ಮಾಡಲಾಗಿದೆ. ಮೃಗಾಲಯಕ್ಕೆ ಕಾಲಿಡುತ್ತಿದ್ದಂತೆ ಸಿಗುವ ಈ ತಂಪು ಸ್ಪರ್ಶಕ್ಕೆ ಪ್ರವಾಸಿಗರು ಸಂತಸ ವ್ಯಕ್ತಪಡಿಸಿದ್ದು, ಮಕ್ಕಳು ಸಹ ತುಂತುರು ನೀರಿನಲ್ಲಿ ಆಟವಾಡುತ್ತಿರುವ ದೃಶ್ಯಗಳು ಸಹ ಕಂಡು ಬಂದವು. ಈ ವಿಶೇಷ ವ್ಯವಸ್ಥೆಯಿಂದಾಗಿ ಪ್ರವಾಸಿಗರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡುಬರುತ್ತಿದೆ.
ವನ್ಯಜೀವಿಗಳ ಆರೋಗ್ಯವೇ ನಮಗೆ ಮುಖ್ಯ. ವಿಪರೀತ ಬಿಸಿಲಾದಾಗ ಪ್ರಾಣಿಗಳ ಮೇಲೆ ಒತ್ತಡ ಉಂಟಾಗುತ್ತದೆ. ಅದನ್ನು ತಡೆಯಲು ನಾವು ಮಿಸ್ಟ್ ಮತ್ತು ಜೆಟ್ ಸ್ಪ್ರಿಂಕ್ಲರ್ಗಳನ್ನು ಅಳವಡಿಸಿದ್ದೇವೆ. ಇದರಿಂದ ಪ್ರಾಣಿಗಳು ಕ್ರಿಯಾಶೀಲವಾಗಿರಲು ಸಾಧ್ಯವಾಗುತ್ತಿದೆ.
-ಅಮರಾಕ್ಷರ, ಕಾರ್ಯನಿರ್ವಾಹಕ ನಿರ್ದೇಶಕರು, ಹುಲಿ ಮತ್ತು ಸಿಂಹಧಾಮ.
ಒಟ್ಟಾರೆಯಾಗಿ ಶಿವಮೊಗ್ಗ ಮೃಗಾಲಯವು ಪ್ರಾಣಿ ಸ್ನೇಹಿ ಕ್ರಮಗಳ ಮೂಲಕ ಇತರ ಮೃಗಾಲಯಗಳಿಗೆ ಮಾದರಿಯಾಗಿದೆ.














