ಹೊಸನಗರ ವಿಧಾನಸಭಾ ಕ್ಷೇತ್ರ ಪುನರ್ ಸ್ಥಾಪನೆಯಾಗಬೇಕು: ಸಂಸತ್ತಿನಲ್ಲಿ ಮಲೆನಾಡಿನ ಜನರ ಧ್ವನಿಯಾದ ಸಂಸದ ಬಿ.ವೈ. ರಾಘವೇಂದ್ರ

ನವದೆಹಲಿ: ನಾರಿ ಶಕ್ತಿ ವಂದನಾ ಕಾಯ್ದೆಯ ಜಾರಿಗಾಗಿ ನಡೆಯುತ್ತಿರುವ ವಿಶೇಷ ಸಂಸತ್ ಅಧಿವೇಶನದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು, ಕ್ಷೇತ್ರ ಪುನರ್ ವಿಂಗಡಣೆ ಹಾಗೂ ನಾರಿ ಶಕ್ತಿ ವಂದನಾ ಕಾಯ್ದೆಯ ಕುರಿತು ಪರಿಣಾಮಕಾರಿಯಾಗಿ ಮಾತನಾಡಿದ್ದಾರೆ. ಪ್ರಮುಖವಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕನ್ನು ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿ ಪುನರ್ ಸ್ಥಾಪಿಸಬೇಕೆಂಬ ಅಲ್ಲಿನ ಜನರ ದಶಕಗಳ ಬೇಡಿಕೆ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ. ಈ ಭಾಗದ ಭೌಗೋಳಿಕ ವ್ಯಾಪ್ತಿ ಮತ್ತು ಸವಾಲುಗಳನ್ನು ಪರಿಗಣಿಸಿ, ಮುಂಬರುವ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ, ಈಶಾನ್ಯ ರಾಜ್ಯಗಳಿಗೆ ನೀಡಿರುವಂತೆ, ಪಶ್ಚಿಮ ಘಟ್ಟದ ಹೊಸನಗರಕ್ಕೂ ನ್ಯಾಯ ಒದಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಕ್ಷೇತ್ರ ಪುನರ್ ವಿಂಗಡಣಾ ಪ್ರಕ್ರಿಯೆಯಲ್ಲಿ ಪಶ್ಚಿಮ ಘಟ್ಟದ ಮಲೆನಾಡಿನಂತಹ ವಿಶಾಲ ಅರಣ್ಯ, ಗಿರಿ-ಪರ್ವತಗಳ ಪ್ರದೇಶ ಹಾಗೂ ಕಡಿಮೆ ಜನಸಂಖ್ಯೆ ಹೊಂದಿರುವ ಭಾಗಗಳಿಗೆ, ಈಶಾನ್ಯ ರಾಜ್ಯಗಳ ಮಾದರಿಯಲ್ಲಿ ವಿಶೇಷ ಮಾನದಂಡಗಳನ್ನು ಅನುಸರಿಸಬೇಕು ಎಂದು ಬಿ.ವೈ.ರಾಘವೇಂದ್ರ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮಹಿಳಾ ಮೀಸಲಾತಿ ಕುರಿತಂತೆ ಮಾತನಾಡಿದ ಸಂಸದ ರಾಘವೇಂದ್ರ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ತಂದಿರುವ ‘ನಾರಿ ಶಕ್ತಿ ವಂದನಾ ಕಾಯ್ದೆ’ಯು ಈ ಐತಿಹಾಸಿಕ ಪರಂಪರೆಗೆ ಗೌರವ ಸಲ್ಲಿಸುವ ಮೂಲಕ ಮಹಿಳೆಯರನ್ನು ದೇಶದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಿದೆ” ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಆಡಳಿತಾವಧಿಯಲ್ಲಿ, ಅಡುಗೆ ಮನೆಯಿಂದ ಸಂಸತ್ತಿನವರೆಗೆ ಮಹಿಳೆಯರ ಧ್ವನಿ ಬಲಗೊಳ್ಳುತ್ತಿದ್ದು, ವಿಕಸಿತ ಭಾರತದ ಸಾಕಾರದೆಡೆಗೆ ದೇಶದ ಪ್ರಗತಿಯು, ‘ಮಹಿಳಾ ಅಭಿವೃದ್ಧಿ’ಯಿಂದ ‘ಮಹಿಳಾ ನೇತೃತ್ವದ ಅಭಿವೃದ್ಧಿ’ಯೊಂದಿಗೆ ಮುನ್ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ > ಭದ್ರಾವತಿ, ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದ ಐವರಿಗೆ ಜೈಲು!
ಏ.20ರಂದು ಬಸವೇಶ್ವರರ ಜಯಂತಿ: ಎಸ್.ಎಸ್. ಜ್ಯೋತಿಪ್ರಕಾಶ್

ಶಿವಮೊಗ್ಗ : ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ವತಿಯಿಂದ ಏ.20ರ ಸಂಜೆ 6 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ವಿಶ್ವಮಾನವ, ಮಹಾನ್ ಮಾನವತವಾದಿ ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್ ಇಂದು ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀ ಬೆಕ್ಕಿನಕಲ್ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿ ಸಾನಿಧ್ಯ ವಹಿಸಲಿರುವ ಈ ಕಾರ್ಯಕ್ರಮವನ್ನು ಬಸವಕೇಂದ್ರದ ಶ್ರೀ ಡಾ. ಬಸವ ಮರಳುಸಿದ್ದ ಸ್ವಾಮೀಜಿ ಉದ್ಘಾಟಿಸುವರು. ಭದ್ರಾವತಿಯ ಆಧ್ಯಾತ್ಮಿಕ ಚಿಂತಕರು ಹಾಗೂ ಮನೋ ಚಿಕಿತ್ಸಕರಾದ ಡಾ.ಸಂತೋಷ್ ಕುಮಾರ್ ಉಪನ್ಯಾಸ ನೀಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವ ಕಾರ್ಯದರ್ಶಿ ಎಸ್.ಪಿ.ದಿನೇಶ್ , ಸಂಘದ ಪ್ರಮುಖರಾದ ಶಾಂತಾ ಆನಂದ್, ಟಿ.ಬಿ.ಜಗದೀಶ್, ಪಿ.ರುದ್ರೇಶ್, ಸಿ.ಮಹೇಶ್ ಮೂರ್ತಿ ಇದ್ದರು.
ಇದನ್ನೂ ಓದಿ > ಭದ್ರಾವತಿ, ಕಡದಕಟ್ಟೆ ಫ್ಲೈಓವರ್ನಲ್ಲಿ ಬೀದಿ ದೀಪ ಇಲ್ಲದೆ ವಾಹನ ಸವಾರರ ಪರದಾಟ!
ಏ.18-22ರವರಗೆ ಶ್ರೀ ನಾಗ ಸುಬ್ರಮಣ್ಯ ದೇವಸ್ಥಾನದ 17ನೇ ಬ್ರಹ್ಮಕಲಶೋತ್ಸವ
ಶಿವಮೊಗ್ಗ : ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ “ನಾಗಕ್ಷೇತ್ರ” ದಲ್ಲಿ ಶ್ರೀ ನಾಗ ಸುಬ್ರಮಣ್ಯ ದೇವಸ್ಥಾನದ 17ನೇ ಬ್ರಹ್ಮಕಲಶೋತ್ಸವವನ್ನು ಏ.18 ರಿಂದ 22ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಸಂದೇಶ್ ಉಪಾಧ್ಯ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.18 ರಿಂದ 21ರ ವರೆಗೆ ಪ್ರತಿ ದಿನ ಬೆಳಿಗ್ಗೆ 9 ಗಂಟೆಗೆ ಗಣಪತಿ, ನವಗ್ರಹ, ಸುಬ್ರಮಣ್ಯ, ಪವಮಾನ ಹೋಮಗಳು ನಡೆಯಲಿದ್ದು, 12.30ಕ್ಕೆ ಪೂರ್ವಾಹುತಿ ನಂತರ ಪ್ರಸಾದ ವಿನೋಗ ಇರುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಹೆಚ್.ರಾಮಲಿಂಗಪ್ಪ, ಕಾರ್ಯದರ್ಶಿ ರಮೇಶ್, ಮಾಜಿ ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು.
ನಾರಿ ಶಕ್ತಿ ವಂದನಾ ಮಸೂದೆ: ಮಹಿಳಾ ಉದ್ಯಮಿ ಡಾ.ಬಿ.ವಿ.ಲಕ್ಷ್ಮೀದೇವಿ ಸ್ವಾಗತ
ಶಿವಮೊಗ್ಗ : ನಾರಿ ಶಕ್ತಿ ವಂದನಾ ಮಸೂದೆ ಇಂದು ಲೋಕಸಭೆಯಲ್ಲಿ ಅಂಗೀಕಾರಗೊಳ್ಳಲಿದೆ. ಇದು ಮೂಲತಃ ಒಬ್ಬ ಮಹಿಳೆಯಾಗಿ ಸಾಧಕ ಮಹಿಳೆಯರೊಡನೆ ಒಡನಾಡಿದ ಒಬ್ಬ ಮಹಿಳೆಯಾಗಿ ಸಾಧನೆಯ ಹಾದಿಯಲ್ಲಿ ನಡೆಯುವ ಕನಸು ಕಾಣುತ್ತಿರುವ ಹಲವಾರು ಮಹಿಳೆಯರೊಡನೆ ಒಡನಾಡಿದ ಹೆಣ್ಣು ಮಗಳಾಗಿ ಬಹಳ ಹರ್ಷಚಿತ್ತದಿಂದ ಈ ಮಸೂದೆಯನ್ನು ಸ್ವಾಗತಿಸುತ್ತೇನೆ ಎಂದು ಮಹಿಳಾ ಉದ್ಯಮಿ ಡಾ.ಬಿ.ವಿ.ಲಕ್ಷ್ಮೀದೇವಿ ಗೋಪಿನಾಥ್ ಹೇಳಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಿಳೆ ಪ್ರತಿ ರಂಗದಲ್ಲೂ ತಾನು ಪುರುಷರಿಗೆ ಸಮಾನವಾಗಿ ಎಲ್ಲಾ ರಂಗಗಳಲ್ಲೂ ಯಶಸ್ವಿಯಾಗಿದ್ದೇನೆ ಎಂದು ನಿರಂತರವಾಗಿ ನಿರೂಪಿಸಿಕೊಂಡು ಬಂದಿದ್ದಾಳೆ. ಆದರೂ ಸಂವಿಧಾನ ರಚನೆಯಾಗಿ 70 ವರ್ಷಗಳಾದರೂ ಆಕೆಯ ಹಕ್ಕು ಆಕೆಗೆ ದೊರೆತಿರಲಿಲ್ಲ. ಈಗ ಮೋದಿ ನೇತೃತ್ವದಲ್ಲಿ ಈ ಮಸೂದೆಯಿಂದ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಸಿಗಲಿದೆ. ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡುವ ಈ ಮಸೂದೆ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಬಾಲ್ಯ ವಿವಾಹ, ಸತಿ ಸಹಗಮನ, ಶಾಲಾ-ಕಾಲೇಜುಗಳಲ್ಲಿ ಪ್ರವೇಶ ನಿಷಿದ್ಧ ಹೀಗೆ ಹಲವಾರು ಅದೇ ತಡೆಗಳನ್ನು ಎದುರಿಸಿ ಮಹಿಳೆ ಇಂದು ನಿರಂತರವಾಗಿ ತನ್ನನ್ನುತನು ನಿರೂಪಿಸುತ್ತಾ ಸಾಗಿದ್ದಾಳೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಮತಾ ಚಂದ್ರಶೇಖರ್, ಶಶಿ ಎಂ. ಶಂಕರ್, ಡಾ.ಜೀವಂತಿ, ಮೇಘ, ಮಮತಾ ರೆಡ್ಡಿ ಇಂದು ಬಿ. ಹೆಗಡೆ, ವಿಜಯಲಕ್ಷ್ಮಿ ಕಡಂಬ, ಸಹನಾ ಚೇತನ್, ವಾಣಿ, ಉಷಾ ವಸಂತಕುಮಾರ್, ಅಶ್ವಿನಿ, ಕವಿತಾ, ಮಂಜುಳಾ ಎಂ., ಶಿಲ್ಪಾ ಗೋಪಿನಾಥ್ ಇದ್ದರು.
ಇದನ್ನೂ ಓದಿ > ಏ.18ರಂದು ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ!
ಮದುವೆ ಸಮಾರಂಭದಲ್ಲಿ ಗೃಹಿಣಿಯ ಸೊಂಟ ಮುಟ್ಟಿದ ಯುವಕ | ಪ್ರಶ್ನಿಸಿದವರ ಮೇಲೆ ಹಲ್ಲೆ?

ಆನಂದಪುರ: ಮದುವೆ ಸಮಾರಂಭವೊಂದರಲ್ಲಿ ಯುವಕನೊಬ್ಬನು ಗೃಹಿಣಿಯೊಬ್ಬರ ಸೊಂಟ ಮುಟ್ಟಿದ್ದಾನೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಪರಸ್ಪರ ಹಲ್ಲೆ ನಡೆದಿರುವ ಘಟನೆ ನಡೆದಿದೆ.
ಆನಂದಪುರಂ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಮಹಿಳೆಯೊಬ್ಬರು ತನ್ನ ಸಹೋದರಿಯೊಂದಿಗೆ ಮದುವೆ ಸಮಾರಂಭದಲ್ಲಿ ರಾತ್ರಿ ಊಟಕ್ಕೆ ಪಂಕ್ತಿಯಲ್ಲಿ ಕುಳಿತಿದ್ದರು. ಹಿಂದಿನ ಸಾಲಿನಲ್ಲಿ ಕುಳಿತಿದ್ದ ಯುವಕನೊಬ್ಬ ಗೃಹಿಣಿಯ ಸಹೋದರಿಯನ್ನು ಚುಡಾಯಿಸಿದ್ದಾನೆ. ಬಳಿಕ ಆಕೆಯ ಮೈ ಮುಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
ಯುವಕನ ಕೃತ್ಯದಿಂದ ಎಚ್ಚೆತ್ತ ಗೃಹಿಣಿಯು ಆತನಿಗೆ ಬೈದಿದ್ದಾರೆ. ಅಲ್ಲದೇ, ಈ ವೇಳೆ ಗೃಹಿಣಿಯು ಕಿರುಚಿ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಗೆ ವಿಷಯ ತಿಳಿಸಿದ್ದಾರೆ. ಪಕ್ಕದಲ್ಲಿದ್ದ ವ್ಯಕ್ತಿಯು ಹಿಂದಿನ ಸಾಲಿನಲ್ಲಿ ಕುಳಿತಿದ್ದ ಯುವಕನನ್ನು ಪ್ರಶ್ನೆ ಮಾಡಿದ್ದಾರೆ.
ಈ ವೇಳೆ ಪರಸ್ಪರ ವಾಗ್ವಾದ ನಡೆದಿದ್ದು, ಯುವಕ ಮತ್ತಿತರರು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಪಾದಿಸಲಾಗಿದೆ.
ವಿಮಾನ ಸೇವೆ ಮುಂದುವರೆಸುವಂತೆ ಉದ್ಯಮಿಗಳ ಮನವಿ
ಶಿವಮೊಗ್ಗ: ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಸಂಚಾರ ಸೇವೆ ಮುಂದುವರಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಅಧ್ಯಕ್ಷ ಬಿ.ಗೋಪಿನಾಥ್ ಮತ್ತು ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಶಿವಮೊಗ್ಗ ಮತ್ತು ಬೆಂಗಳೂರು ವಿಮಾನ ಸೇವೆಗಳನ್ನು ಪ್ರಾರಂಭಿಸಿರುವುದು ಮಲೆನಾಡು ಪ್ರದೇಶಕ್ಕೆ ಅನುಕೂಲವಾಗಿದೆ. ಪ್ರಯಾಣಿಕರ ಸಂಖ್ಯೆಯು ಹೆಚ್ಚಿನ ಸಂಖ್ಯೆಯಲ್ಲಿದ್ದು, ಲಾಭದಾಯಕ ಮಾರ್ಗವಾಗಿ ನಡೆಯುತ್ತಿದೆ. ಆದರೂ ಪ್ರಸ್ತುತ ಇರುವ ವಿಮಾನ ಸಂಪರ್ಕ ಮತ್ತು ಹಾರಾಟಗಳ ಸಂಖ್ಯೆಗಳು ಕಡಿಮೆ ಇದ್ದು, ವೇಗವಾಗಿ ಬೆಳೆಯುತ್ತಿರುವ ಶಿವಮೊಗ್ಗದ ಕೈಗಾರಿಕೆ, ವ್ಯಾಪಾರ, ಶಿಕ್ಷಣ, ಆರೋಗ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಇಲ್ಲ. ಬೆಂಗಳೂರು ಮತ್ತು ಶಿವಮೊಗ್ಗ ಸಂಪರ್ಕವನ್ನು ಇನ್ನಷ್ಟು ಬಲಪಡಿಸಬೇಕು ಎಂದು ಬಿ.ಗೋಪಿನಾಥ್ ಮನವಿ ಮಾಡಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಿ ಶಿವಮೊಗ್ಗ ಬೆಂಗಳೂರು ವಿಮಾನಯಾನ ಸೇವೆಯನ್ನು ಮುಂದುವರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ, ಇಂಡಿಗೋ ಮತ್ತು ಇತರ ವಿಮಾನಯಾನ ಸಂಸ್ಥೆಗಳ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದು, ಸಂಚಾರ ಸೇವೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲು ಬಿಡುವುದಿಲ್ಲ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಎ.ಎಂ.ಸುರೇಶ್, ಸಹ ಕಾರ್ಯದರ್ಶಿ ಕೆ.ಎಸ್.ಸುಕುಮಾರ್, ಖಜಾಂಚಿ ಆರ್.ಮನೋಹರ, ನಿರ್ದೇಶಕರಾದ ಗಣೇಶ ಎಂ.ಅಂಗಡಿ, ಕೆ.ಬಿ.ಶಿವಕುಮಾರ್, ಎಸ್.ಎಸ್.ಉದಯಕುಮಾರ್, ರವಿ ಪ್ರಕಾಶ್ ಜನ್ನಿ, ವಿನೋದ್ ಕುಮಾರ್, ಪ್ರದೀಪ್ ವಿ ಎಲಿ ಹಾಜರಿದ್ದರು.
ತೀರ್ಥಹಳ್ಳಿ: ಬೈಕ್ – ಪಿಕಪ್ ನಡುವೆ ಅಪಘಾತ; ಸವಾರ ಗಂಭೀರ
ತೀರ್ಥಹಳ್ಳಿ : ಕೊಪ್ಪ-ತೀರ್ಥಹಳ್ಳಿ ಮಾರ್ಗದ ಮೇಲಿನ ಕುರುವಳ್ಳಿ ಸಮೀಪ ಬೈಕ್ ಮತ್ತು ಕೋಳಿ ಸಾಗಾಣಿಕೆಯ ಪಿಕಪ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ದಕ್ಷಿಣ ಕನ್ನಡ ಮೂಲದ ಮೂವರು ವ್ಯಕ್ತಿಗಳು ತೀರ್ಥಹಳ್ಳಿ ತಾಲ್ಲೂಕಿನ ತಳುವೆ ಗ್ರಾಮದಲ್ಲಿ ಇತ್ತೀಚೆಗೆ ನಿಧನರಾಗಿದ್ದ ತಮ್ಮ ಸಂಬಂಧಿಕರ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೈಕ್ ಮೂಲಕ ಆಗಮಿಸಿದ್ದರು. ಇಂದು ಬೆಳಿಗ್ಗೆ ಕಾರ್ಯ ಮುಗಿಸಿ ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ, ಮೇಲಿನ ಕುರುವಳ್ಳಿಯ ಮಹಾಲಕ್ಷ್ಮಿ ಹೋಟೆಲ್ ಮುಂಭಾಗದಲ್ಲಿ ಎದುರಿನಿಂದ ಬಂದ ಕೋಳಿ ತುಂಬಿದ್ದ ಪಿಕಪ್ ವಾಹನವು ಬೈಕ್ಗೆ ಬಲವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಗಂಭೀರ ಗಾಯವಾಗಿದ್ದು ಇನ್ನುಳಿದ ಇಬ್ಬರು ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಪಟ್ಟಣದ ಜೆ.ಸಿ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.














