ಶಿಕಾರಿಪುರ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಪಲ್ಟಿಯಾಗಿ 27 ಜನ ಗಾಯಗೊಂಡಿರುವ ಘಟನೆ ಕುಮದ್ವತಿ ಕಾಲೇಜಿನ ಎದುರು ನಡೆದಿದೆ.
ಬಸ್ಸಿನಲ್ಲಿ 40ಕ್ಕೂ ಹೆಚ್ಚು ಜನರಿದ್ದರು ಎನ್ನಲಾಗಿದೆ. 12 ಜನರು ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. 6 ಜನರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನುಳಿದ ಗಾಯಾಳುಗಳು ಪ್ರಥಮ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.
ಇದನ್ನೂ ಓದಿ > ಶಿವಮೊಗ್ಗ ಹುಲಿ ಮತ್ತು ಸಿಂಹಧಾಮ ಕೂಲ್ಕೂಲ್!, ಏನಿದು ವಿಶೇಷ ವ್ಯವಸ್ಥೆ?
ಶಿವಮೊಗ್ಗ ಕಡೆಯಿಂದ ಪಟ್ಟಣಕ್ಕೆ ನಿತ್ಯ ಸಂಚರಿಸುವ ಈ ಬಸ್ನಲ್ಲಿ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಎದುರಿಗೆ ಬಂದ ಬೈಕ್ ತಪ್ಪಿಸಲು ಮುಂದಾದ ಚಾಲಕ, ಬಸ್ಸನ್ನು ರಸ್ತೆಬದಿಗೆ ಚಲಾಯಿಸಿದರು. ಆದರೆ ಕಾಲೇಜು ಪ್ರವೇಶದ್ವಾರದ ಎದುರಿನಲ್ಲಿ ನಿಂತಿದ್ದ ಇಬ್ಬರು ವ್ಯಕ್ತಿಗಳಿಗೆ ಬಸ್ ಡಿಕ್ಕಿಯಾಗಬೇಕಿತ್ತು. ಇದನ್ನು ತಪ್ಪಿಸುವ ವೇಳೆ ಬಸ್ ಚಾಲಕನ ನಿಯಂತ್ರಣ ತಪ್ಪಿತು. ಚಾಲಕನ ಸಮಯಪ್ರಜ್ಞೆ ಮತ್ತು ಡಿವೈಡರ್, ವಿದ್ಯುತ್ ಕಂಬಗಳು ಅಡ್ಡಲಾಗಿದ್ದ ಪರಿಣಾಮ, ದೊಡ್ಡ ಅಪಘಾತವೊಂದು ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.
ಇದನ್ನೂ ಓದಿ > ಮನೆಗೆ ಬಂದು ಬ್ಯಾಗ್ ಪರಿಶೀಲಿಸಿದ ಮಹಿಳೆಗೆ ಕಾದಿತ್ತು ಶಾಕ್!
ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ. ಕಬ್ಬಿಣದ ಎರಡು ವಿದ್ಯುತ್ ಕಂಬ, ವಿದ್ಯುತ್ ಕಂಬಗಳು ಮುರಿದಿವೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಸದ ಭೇಟಿ: ಅಪಘಾತದ ಸುದ್ದಿ ತಿಳಿದು ಪಟ್ಟಣಕ್ಕೆ ಆಗಮಿಸಿದ ಸಂಸದ ಬಿ.ವೈ.ರಾಘವೇಂದ್ರ ಅವರು ಸರ್ಕಾರಿ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ವೈದ್ಯರೊಂದಿಗೆ ಚಿಕಿತ್ಸೆ ಕುರಿತು ಚರ್ಚಿಸಿ, ಗಾಯಾಳುಗಳ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.














