ಶಿವಮೊಗ್ಗ: ಶಿವಮೊಗ್ಗದಲ್ಲಿಯೇ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹಿಸಿ ಶಿವಮೊಗ್ಗ ಜಿಲ್ಲೆಯನ್ನೆ ಬಂದ್ ಮಾಡಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 2 ವರ್ಷಗಳಿಂದ ಶಿವಮೊಗ್ಗದಲ್ಲಿ ಹೈಕೋರ್ಟ್ ಸಕ್ರ್ಯೂಟ್ ಬೆಂಚ್ ಸ್ಥಾಪನೆಗೆ ನಿರಂತರ ಹೋರಾಟ ನಡೆಯುತ್ತಿದೆ. 2005 ರ ನವೆಂಬರ್ 30 ರಂದು ಶಿವಮೊಗ್ಗ ನಗರ ಬಂದ್ ಮಾಡಿ ಮೆಡಿಕಲ್ ಕಾಲೇಜು, ಹೊಸ ಬಸ್ ನಿಲ್ದಾಣದ ಬೇಡಿಕೆಗಳನ್ನೂ ಮುಂದಿಟ್ಟಿದ್ದೆವು. ಅದೇ ರೀತಿ ಈ ಹೋರಾಟವನ್ನೂ ಹಮ್ಮಿಕೊಳ್ಳಲಾಗುವುದು. ವಕೀಲರ ಸಂಘ ಇದರ ನೇತೃತ್ವ ವಹಿಸಬೇಕಾಗಿದೆ, ಅವರ ಜೊತೆ ನಾವು ಇರುತ್ತೇವೆ. ಸಂಘ ಸಂಸ್ಥೆಗಳು ಕೈ ಜೋಡಿಸಬೇಕು. ಇಡೀ ಜಿಲ್ಲೆಯಲ್ಲೇ ಈ ಬಗ್ಗೆ ಹೋರಾಟದ ಕಿಚ್ಚನ್ನು ಹಚ್ಚಬೇಕಾಗಿದೆ. ಎಲ್ಲಾ ಪಕ್ಷಗಳು ಪಕ್ಷಭೇದ ಮರೆತು ಒಟ್ಟಾಗಿ ಹೋರಾಟ ರೂಪಿಸಬೇಕಾಗಿದೆ ಎಂದರು.
ಇದನ್ನೂ ಓದಿ > > ಶಾಲೆಯಲ್ಲಿ ಕುಸಿದು ಬಿದ್ದು ವಿದ್ಯಾರ್ಥಿ ಸಾವು!, ಪೋಷಕರ ಆಕ್ರಂದನ
ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಇಲ್ಲದ ಕಾರಣ ಮಧ್ಯ ಮತ್ತು ಉತ್ತರ ಕರ್ನಾಟಕದ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಜನರು ನ್ಯಾಯಕ್ಕಾಗಿ ಬೆಂಗಳೂರಿಗೆ ಹೋಗಬೇಕಾಗಿದೆ. ಈ 7 ಜಿಲ್ಲೆಗಳಲ್ಲಿ ಮಾತ್ರ 3 ಲಕ್ಷ 34 ಸಾವಿರಕ್ಕೂ ಹೆಚ್ಚು ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಇದರಿಂದ ಬಡಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಶಿವಮೊಗ್ಗದಲ್ಲಿ 65,900, ದಾವಣಗೆರೆ 77,650, ಚಿಕ್ಕಮಗಳೂರು 38,810, ಚಿತ್ರದುರ್ಗ 42,429, ಉಡುಪಿ 35,866, ದ.ಕ 34,660, ಉ.ಕ 40,380 ಪ್ರಕರಣಗಳು ಬಾಕಿ ಇವೆ ಎಂದು ಅವರು ಅಂಕಿ-ಅಂಶ ಸಮೇತ ತಿಳಿಸಿದರು.
ಇದನ್ನೂ ಓದಿ > > ಟ್ರಾಫಿಕ್ ಪೊಲೀಸರ ಖಡಕ್ ಕಾರ್ಯಾಚರಣೆ, ಹಣ್ಣಿನ ಅಂಗಡಿಗಳ ತೆರವು!
ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಿ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲಾ ಬಂದ್ ಮಾಡುವ ದಿನಾಂಕವನ್ನು ಪ್ರಕಟಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್.ಎಂ. ಸಂಗಯ್ಯ, ನಂಜುಂಡಪ್ಪ, ಚಾಬೂಸಾಬ್, ಗೀತಾ, ಶಿವಣ್ಣ, ಆಶೋಕ್, ಆಲೀಂಖಾನ್, ಶಂಕ್ರಾನಾಯ್ಕ, ಚಂದ್ರಪ್ಪ ಆದಿಯಾಗಿ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ > > ಸಾಗರ ನಗರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ, ದಾಖಲೆಗಳ ಪರಿಶೀಲನೆ














