ಬೆಂಗಳೂರು: ಪ್ರಾಚೀನ ಆರೋಗ್ಯ ಪರಂಪರೆ ಸಂರಕ್ಷಣಾ ಟ್ರಸ್ಟ್ (ರಿ), ಬೆಂಗಳೂರು ವತಿಯಿಂದ ಏ.01ರ ಬುಧವಾರ “ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ” (ವೈದ್ಯ ಸಮ್ಮೇಳನ) ಕಾರ್ಯಕ್ರಮವನ್ನು ನಡೆಯಲಿದೆ. ಏ.02 ರಂದು ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮವು ಶ್ರೀ ಕ್ಷೇತ್ರ ಬಂಗಾರ ಮಕ್ಕಿ ಸೆಲೆಕ್ಟ್ ಫೌಂಡೇಶನ್, ಗೇರುಸೊಪ್ಪ (ಹೊನ್ನಾವರ ತಾಲೂಕು) ಇವರ ಸಹಯೋಗದಲ್ಲಿ ಗೇರುಸೊಪ್ಪ, ಹೊನ್ನಾವರ ತಾಲೂಕು ಇಲ್ಲಿ ನಡೆಯಲಿದೆ.
ನಮ್ಮ ಟ್ರಸ್ಟ್ನ ಪ್ರಮುಖ ಉದ್ದೇಶವು ಪ್ರಾಚೀನ ಆರೋಗ್ಯ ಪರಂಪರೆಯ ಸಂರಕ್ಷಣೆ, ಅಭಿವೃದ್ಧಿ ಮತ್ತು ಪ್ರಸಾರವಾಗಿದ್ದು, ಮನೆ ಮದ್ದು, ಜನಪದ ವೈದ್ಯ, ನಾಟಿ ವೈದ್ಯ, ಪಶುವೈದ್ಯ, ಗಿಡಮೂಲಿಕೆ ವೈದ್ಯ, ವಿಷ ವೈದ್ಯ, ಮೂಳೆ ವೈದ್ಯ, ಪಾರಂಪರಿಕ ವೈದ್ಯ, ಯೋಗ, ಯುನಾನಿ, ಆಯುರ್ವೇದ, ಸಿದ್ಧ ವೈದ್ಯ, ಅಕ್ಯುಪ್ರೆಶರ್, ಅಕ್ಯುಪಂಕ್ಚರ್, ಸಂಮೋಹನ ಚಿಕಿತ್ಸೆ, ಸುಗಂಧ ದ್ರವ್ಯ ಚಿಕಿತ್ಸೆ, ಅಂಗಮರ್ಧನ ಚಿಕಿತ್ಸೆ (ಮಸಾಜ್), ತೈಲ ಚಿಕಿತ್ಸೆ, ನಾಭಿ ಚಿಕಿತ್ಸೆ, ಪಾದ ಚಿಕಿತ್ಸೆ, ಜಲ ಚಿಕಿತ್ಸೆ, ಪಂಚಕರ್ಮ, ವರ್ಮಾ ಚಿಕಿತ್ಸೆ ಸೇರಿದಂತೆ ಅನೇಕ ಪಾರಂಪರಿಕ ಚಿಕಿತ್ಸಾ ಪದ್ಧತಿಗಳ ಸಂರಕ್ಷಣೆ ಹಾಗೂ ಪ್ರಚಾರ ನಮ್ಮ ಯೋಜನೆಯಾಗಿದೆ.
ಇದನ್ನೂ ಓದಿ > ಭದ್ರಾವತಿ, ಹೋಟೆಲ್ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ದಂಪತಿ ಸಾವು!
ಈ ಎಲ್ಲಾ ಪಾರಂಪರಿಕ ಚಿಕಿತ್ಸಾ ವಿಧಾನಗಳನ್ನು ಅನುಸರಿಸುವ ವೈದ್ಯರನ್ನು ಗುರುತಿಸಿ ಸಂರಕ್ಷಿಸುವುದು ಹಾಗೂ ಈ ಅಮೂಲ್ಯ ವೈದ್ಯಕೀಯ ಜ್ಞಾನವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವುದು ನಮ್ಮ ಸಂಸ್ಥೆಯ ಮಹತ್ತರವಾದ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು “ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ” ಎಂದು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಅಂಗವಾಗಿ ಪ್ರಾಚೀನ ಆರೋಗ್ಯ ಪರಂಪರೆ ಸಂರಕ್ಷಣಾ ಟ್ರಸ್ಟ್ (ರಿ), ಬೆಂಗಳೂರು ವತಿಯಿಂದ ಕರ್ನಾಟಕ ರಾಜ್ಯದ ಆಯ್ದ ವೈದ್ಯರನ್ನು ಗೌರವಿಸಲು “ಪ್ರಾಚೀನ ವೈದ್ಯರತ್ನ ಪ್ರಶಸ್ತಿ” ಪ್ರದಾನ ಮಾಡಲಾಗುತ್ತದೆ. ರಾಜ್ಯದ ಮೂರು ಗಣ್ಯ ವೈದ್ಯರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯು ರೂ. 10,000/- ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣ ಫಲಕವನ್ನು ಒಳಗೊಂಡಿರುತ್ತದೆ. ಈ ಪ್ರಶಸ್ತಿಯನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿರುವ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಾಚೀನ ಆರೋಗ್ಯ ಪರಂಪರೆ ಸಂರಕ್ಷಣಾ ಟ್ರಸ್ಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.














