ಶಿವಮೊಗ್ಗ: ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಯಿಸಲು ಫಲಾನುಭವಿಯಿಂದ 10,000 ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಇಲ್ಲಿನ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಆರ್.ಎಸ್. ಪರಮೇಶ್ವರಪ್ಪ ಅವರಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎರಡು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 40,000 ದಂಡ ವಿಧಿಸಿ ಗುರುವಾರ ಆದೇಶಿಸಿದೆ.
ಇದನ್ನೂ ಓದಿ > ಸಾಗರ, ಬಿಹಾರ ಮೂಲದ ಯುವಕನ ಕೊಲೆ?, ಓರ್ವನ ಬಂಧನ, ಎಸ್ಪಿ ನಿಖಿಲ್ ಬಿ ಹೇಳಿದ್ದೇನು?
ಸಾಗರ ತಾಲ್ಲೂಕಿನ ಹೊಸಗುಂದ ಗ್ರಾಮದ ಎಚ್.ಎಸ್. ಜನಾರ್ದನ 2015-16ನೇ ಸಾಲಿನಲ್ಲಿ ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಿಸಲು ಗಂಗಾ ಕಲ್ಯಾಣ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರು. ನಂತರ ಫಲಾನುಭವಿಯಾಗಿ ಆಯ್ಕೆಯಾಗಿದ್ದರು. ಕೊಳವೆ ಬಾವಿ ಕೊರೆಯಿಸಿಕೊಡಲು ನಿಗಮದ ಅಂದಿನ ಜಿಲ್ಲಾ ವ್ಯವಸ್ಥಾಪಕ ಪರಮೇಶ್ವರಪ್ಪ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆ ಬಗ್ಗೆ ಜನಾರ್ದನ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
2017ರ ಜುಲೈ 13ರಂದು ಶಿವಮೊಗ್ಗದಲ್ಲಿರುವ ನಿಗಮದ ಕಚೇರಿಯಲ್ಲಿ ಜನಾರ್ದನ ಅವರಿಂದ ಲಂಚದ ಮೊತ್ತ ಪಡೆಯುವಾಗ ಲೋಕಾಯುಕ್ತ ಡಿವೈಎಸ್ಪಿ ಎ.ಚಂದ್ರಪ್ಪ ದಾಳಿ ನಡೆಸಿ ಪರಮೇಶ್ವರಪ್ಪ ಅವರನ್ನು ಹಣದ ಸಮೇತ ಬಂಧಿಸಿದ್ದರು. ನಂತರ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.















