ಸಾಗರ : ಇಲ್ಲಿನ ಶಿವಮೊಗ್ಗ ರಸ್ತೆಯಲ್ಲಿರುವ ರೂಫ್ ಕೆಪೆಯಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಟಿಂಕೂ ಶರ್ಮ ಎಂಬಾತನ ಕೊಲೆಗೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ನಗರ ಠಾಣೆ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ರಸ್ತೆಯ ರೂಫ್ ಟಫ್ ಕೆಫೆ ಮತ್ತು ಗೇಮ್ ಜೋನ್ನಲ್ಲಿ ಬಿಹಾರ ಮೂಲದ ಟಿಂಕೂ ಶರ್ಮ ಎಂಬಾತ ಅಡುಗೆ ಕೆಲಸಕ್ಕೆ ಆರು ತಿಂಗಳ ಹಿಂದೆ ಸೇರಿ ಕೊಂಡಿದ್ದನು. ಬುಧವಾರ ತಡರಾತ್ರಿ ಕೆಫೆ ಮಾಲೀಕ ಇಮ್ರಾನ್ ಎಂಬಾತನು ತನ್ನ ಕೆಫೆಯಲ್ಲಿ ಟಿಂಕೂ ಶರ್ಮ ಹಣ ಕಳ್ಳತನ ಮಾಡುತ್ತಿದ್ದಾನೆ ಎಂದು ಆರೋಪಿಸಿ ಸ್ಮೂಕರ್ ಸ್ಟಿಕ್ನಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ > ಶಿವಮೊಗ್ಗ ನಗರದಲ್ಲಿ ಸರಣಿ ಅಪಘಾತಕ್ಕೆ ಕಾರಣ ಯಾರು?
ನೆಹರೂ ನಗರದಲ್ಲಿರುವ ಇಮ್ರಾನ್ ಮನೆ ಎದುರು ಹೊಂಡಾಸಿಟಿ ಕಾರಿನಲ್ಲಿ ಶವ ಇರುವುದನ್ನು ಪತ್ತೆಹಚ್ಚಿದ ಪೊಲೀಸರು ಸ್ಥಳಕ್ಕೆ ಬಂದು ಕಾರುಸಹಿತ ಆರೋಪಿ ಇಮ್ರಾನ್ನನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ನಿಖಿಲ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಮಾಲೀಕ ಮತ್ತು ಕಾರ್ಮಿಕನ ನಡುವೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದು ಕೊಲೆಯಲ್ಲಿ ಅಂತ್ಯಗೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಕೊಲೆಯಾಗಿರುವ ಟಿಂಕೂ ಶರ್ಮ ಬಿಹಾರದ ಪಾಟ್ನಾ ಸಮೀಪದ ಬಲ್ಪಾಪುರದ ವಾಸಿಯಾಗಿದ್ದು ಆರು ತಿಂಗಳ ಹಿಂದೆ ಇಲ್ಲಿಗೆ ಬಂದು ಕೆಲಸಕ್ಕೆ ಸೇರಿಕೊಂಡಿದ್ದಾನೆ ಎನ್ನಲಾಗಿದೆ. ಶವದ ಮೇಲೆ ಕೆಲವು ಗುರುತುಗಳು ಕಂಡು ಬಂದಿದ್ದು ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಹರಿತವಾದ ಆಯುಧ ಬಳಸಿದಂತೆ ಕಂಡು ಬರುತ್ತಿಲ್ಲ. ವಿಚಾರಣೆ ನಂತರ ಇನ್ನಷ್ಟು ಮಾಹಿತಿ ತಿಳಿದು ಬರುತ್ತದೆ ಎಂದು ತಿಳಿಸಿದರು.















