ಶಿವಮೊಗ್ಗ: ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಂದು ಎಂಬಿಎ ವಿಭಾಗದ ವತಿಯಿಂದ ಸಾಂಸ್ಕೃತಿಕ ಮತ್ತು ನಿರ್ವಹಣಾ ಕ್ಷೇತ್ರದ ’ಉತ್ಥಾನ-2026’ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಬ್ಯುಸಿನೆಸ್ ಪ್ಲಾನ್, ಬೆಸ್ಟ್ ಮ್ಯಾನೇಜರ್, ಬ್ಯುಸಿನೆಸ್ ಕ್ವಿಜ್, ಸ್ಟಾಕ್ ಮಾರ್ಕೆಟ್, ಚಿತ್ರಕಲೆ, ಸಮೂಹ ನೃತ್ಯ, ಬೆಂಕಿ ರಹಿತ ಅಡುಗೆ, ಪ್ರೇಮಗೀತೆಗಳ ಗಾಯನ, ವಾಲಿಬಾಲ್, ಥ್ರೋಬಾಲ್, ಚೆಸ್, ಇ-ಸ್ಪೋರ್ಟ್ಸ್ ಸೇರಿದಂತೆ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ 15 ಪದವಿ ಕಾಲೇಜುಗಳ ಸುಮಾರು 750 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸುಕದಿ ಭಾಗವಹಿಸಿದ್ದರು.

ಇದನ್ನೂ ಓದಿ > ಶಿಕಾರಿಪುರ, 425 ಚೀಲ ಯೂರಿಯಾ ರಸಗೊಬ್ಬರ ವಶಕ್ಕೆ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್, ಸುತ್ತಲಿನ ವಾತಾವರಣದಲ್ಲಿರುವ ವಾಸ್ತವತೆಯನ್ನು ವಿಮರ್ಶಿಸುವಂತಹ ಕುತೂಹಲ ಬೆಳೆಸಿಕೊಳ್ಳಿ ಎಂದು ಹೇಳಿದರು.
ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ವಿಷಯಗಳ ಬಗ್ಗೆ ಕುತೂಹಲ ಮೂಡಿಸಿಕೊಳ್ಳುವಂತಹ ಅನಿವಾರ್ಯತೆ ಇದೆ. ಯುವ ಸಮೂಹ ಮುಂದಿನ ಜನಾಂಗದ ರಾಯಭಾರಿಗಳು. ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಸಂಸ್ಕೃತಿ ಸಂಸ್ಕರಾವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ಇಂದಿನ ಯುವ ಸಮೂಹದ ಮೇಲಿದೆ. ನಮ್ಮ ಸಂಸ್ಕೃತಿಯನ್ನು ಎಂದಿಗೂ ಮರೆಯದಿರಿ. ನಾವು ಮರೆತಿದ್ದ ಸೌದೆ ಒಲೆಗಳು ಮತ್ತೆ ಮುನ್ನಲೆಗೆ ಬಂದಿದೆ. ಹಾಗಾಗಿಯೇ ಯಾವ ವಿಚಾರಗಳ ಬಗ್ಗೆಯು ತಾತ್ಸಾರ ಬೇಡ. ವ್ಯಕ್ತಿಯ ದುರ್ಬಲ ಮನಸ್ಥಿತಿ, ಆತನನ್ನೆ ಹಾಳು ಮಾಡುತ್ತದೆ. ಓದುವುದು, ಬರೆಯುವುದನ್ನು ಕಲಿಸುವುದು ವಿದ್ಯಾಭ್ಯಾಸವಲ್ಲ, ಅದರೊಂದಿಗೆ ವಿನಯ ವಿವೇಕ ಕಲಿಸುವುದೆ ನಿಜವಾದ ವಿದ್ಯಾಭ್ಯಾಸ. ದೃಷ್ಟಿ ಸರಿಯಿದ್ದಾಗ ಮಾತ್ರ, ಸೃಷ್ಟಿ ಸರಿಯಿರುತ್ತದೆ. ವಾದದ ಮಾತಿಗಿಂತ, ಸ್ವಾದದ ಮೌನವೇ ಲೇಸು. ಸಂಸ್ಕಾರ ತುಂಬಿದ ಮಾತುಗಳು ನಿಮ್ಮದಾಗಲಿ. ಸಧೃಡತೆಯ ಮನಸ್ಸಿನ ಬೆಳವಣಿಗೆಗೆ ಇಂತಹ ವೇದಿಕೆಗಳನ್ನು ಪೂರಕವಾಗಿ ಬಳಸಿಕೊಳ್ಳಿ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎನ್ಇಎಸ್ ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎಚ್.ಸಿ.ಶಿವಕುಮಾರ್, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀಕಾಂತ್, ಕಾರ್ಯಕ್ರಮ ಸಂಯೋಜಕರಾದ ಡಾ.ಸಂತೋಷ್ ಶಾನಭಾಗ್, ಡಾ.ಪ್ರವೀಣ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕರಾದ ಡಾ.ಸುಭದ್ರ.ಪಿ.ಎಸ್ ಪ್ರಾರ್ಥಿಸಿ, ಡಾ.ವಿ.ವಿಕ್ರಮ್ ಸ್ವಾಗತಿಸಿದರು.














