ಶಿವಮೊಗ್ಗ: ಮೂವರು ಮಕ್ಕಳೊಂದಿಗೆ ತಾಯಿಯೊಬ್ಬರು ರೈಲ್ವೆ ಹಳಿ ಮೇಲಿನಿಂದ ಹೊಳೆಗೆ ಹಾರಿರುವ ಆತಂಕಕಾರಿ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಘಟನೆಯಲ್ಲಿ ತಾಯಿ ಹಾಗೂ ಒಂದು ಮಗುವನ್ನು ಸ್ಥಳೀಯ ಯುವಕರು ರಕ್ಷಿಸಿದ್ದು, ಉಳಿದ ಇಬ್ಬರು ಮಕ್ಕಳಿಗಾಗಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಇದನ್ನೂ ಓದಿ > > ಶಿವಮೊಗ್ಗ ಜೈಲಿನಲ್ಲಿ 1.64 ಲಕ್ಷ ಮೌಲ್ಯದ ಉಪಕರಣಕ್ಕೆ ಹಾನಿ, ಆಗಿದ್ದೇನು?
ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿರುವ ಮಹಿಳೆ ಮೂವರು ಮಕ್ಕಳೊಂದಿಗೆ ರೈಲ್ವೆ ಹಳಿ ಮೇಲಿನಿಂದ ಹೊಳೆಗೆ ಹಾರಿದ್ದಾರೆ ಎನ್ನಲಾಗಿದೆ. ಘಟನೆ ಗಮನಿಸಿದ ಸ್ಥಳೀಯ ಯುವಕರಾದ ನವೀನ್ ಮತ್ತು ದಾದಾಪೀರ್ ತಕ್ಷಣವೇ ನೀರಿಗೆ ಧುಮುಕಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಯುವಕರು ಸಾಹಸದಿಂದ ಮಹಿಳೆ ಹಾಗೂ ಆಕೆಯ ಒಬ್ಬ ಮಗುವನ್ನು ರಕ್ಷಿಸಿ ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ಬಳಿಕ ಇಬ್ಬರನ್ನೂ ಅಗತ್ಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ > > ಶಿವಮೊಗ್ಗ ಜೈಲಿನಲ್ಲಿ 1.64 ಲಕ್ಷ ಮೌಲ್ಯದ ಉಪಕರಣಕ್ಕೆ ಹಾನಿ, ಆಗಿದ್ದೇನು?
ಘಟನೆಯ ನಂತರ ಮಹಿಳೆ ತನ್ನ ಇನ್ನಿಬ್ಬರು ಮಕ್ಕಳನ್ನು ರಕ್ಷಿಸುವಂತೆ ನಿರಂತರವಾಗಿ ಗೋಗರೆಯುತ್ತಿದ್ದಾರೆ. ಹೊಳೆಯಲ್ಲಿ ನಾಪತ್ತೆಯಾಗಿರುವ ಇಬ್ಬರು ಮಕ್ಕಳಿಗಾಗಿ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಹೊಳೆಯಲ್ಲಿ ನೀರಿನ ಹರಿವು ಹೆಚ್ಚಿರುವ ಕಾರಣ ಶೋಧ ಕಾರ್ಯಕ್ಕೆ ಕೆಲವು ಅಡಚಣೆಗಳು ಎದುರಾಗುತ್ತಿವೆ ಎನ್ನಲಾಗಿದೆ. ಆದರೂ ನಾಪತ್ತೆಯಾಗಿರುವ ಮಕ್ಕಳನ್ನು ಪತ್ತೆಹಚ್ಚಲು ತೀವ್ರ ಕಾರ್ಯಾಚರಣೆ ಮುಂದುವರಿದಿದೆ.
ಇದನ್ನೂ ಓದಿ > > ಗಣೇಶೋತ್ಸವ, ಈದ್ ಮಿಲಾದ್, ಸೋಮಿನಕೊಪ್ಪದಲ್ಲಿ ಪೊಲೀಸರಿಂದ ರೂಟ್ ಮಾರ್ಚ್!
ತಾಯಿ ಮೂವರು ಮಕ್ಕಳೊಂದಿಗೆ ಹೊಳೆಗೆ ಹಾರಲು ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕುಟುಂಬದ ಹಿನ್ನೆಲೆ ಹಾಗೂ ಘಟನೆಗೆ ಕಾರಣಗಳ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಘಟನೆಯಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಮಹಿಳೆ ಮತ್ತು ಒಂದು ಮಗುವಿನ ಪ್ರಾಣ ಉಳಿಸಿದ ಯುವಕರಾದ ನವೀನ್ ಹಾಗೂ ದಾದಾಪೀರ್ ಅವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.














