ಶಿವಮೊಗ್ಗ: ಮಲೆನಾಡಿನ ಒಡಲ ಬೆಂಕಿಯಿಂದ ಜೀವ ಜಲವು ಬರಿದಾಗುತ್ತಿದ್ದು, ಸಿಹಿ ನೀರಿನಲ್ಲಿದ್ದ ಸುಮಾರು 48 ಕ್ಕೂ ಹೆಚ್ಚು ಪ್ರಭೇದಗಳ ಸಂತತಿ ಕಡಿಮೆಯಾಗಿದೆ ಎಂದು ನಾಗರೀಕ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಹೇಳಿದರು.
ಜಿಲ್ಲಾ 20 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಪ್ರಕೃತಿ ಒಡಲ ಚಿಂತನೆ ಗೋಷ್ಟಿಯಲ್ಲಿ ಬರಿದಾಗುತ್ತಿರುವ ನದಿ ಒಡಲು ವಿಷಯ ಕುರಿತಾಗಿ ಮಾತನಾಡಿದರು.
ಪರಿಸರ ತನ್ನ ಸಮತೋಲನ ಕಳೆದುಕೊಂಡಿದೆ. ಕಂಪದ ಗದ್ದೆಯಲ್ಲಿ ಕಾಣುತ್ತಿದ್ದ ತೇವಾಂಶವೇ ಒಣಗಿ ಹೋಗಿದೆ. ಪಶ್ಚಿಮಘಟ್ಟಕ್ಕೆ ನೀರಿನ ಗೋಪುರ ಎಂದು ಕರೆಯಲಾಗುತ್ತದೆ. ಅಂತಹ ಪ್ರಕೃತೆ ಎಲ್ಲಿದೆ ಈವಾಗ. ಬರಿದಾದ ನದಿಯ ಪಕ್ಕದಲ್ಲಿ ಬಾವಿ ತೋಡಿ ತೋಟ ನಿರ್ವಹಿಸುವ ಪರಿಸ್ಥಿತಿ ಬಂದಿದೆ.
ಇದನ್ನೂ ಓದಿ ಶಿವಮೊಗ್ಗ ಜಿಲ್ಲಾ 20 ನೇ ಕನ್ನಡ ಸಾಹಿತ್ಯ ಸಮ್ಮೇಳನ, ಶಿವಮೊಗ್ಗದ ಮಣ್ಣು ಅದ್ಭುತ ಪ್ರತಿಭೆಗಳನ್ನು ಸೃಷ್ಟಿಮಾಡಿದೆ
ಪ್ರತಿ ವರ್ಷ ತುಂಗೆ ಹಾಗೂ ಭದ್ರಾ ನದಿಯಲ್ಲಿ 24.16% ರಷ್ಟು ಬತ್ತಿ ಹೋಗುತ್ತಿದೆ. 160 ಕಿಮಿ ಹರಿಯಬೇಕಿದ್ದ ಶರಾವತಿ ನದಿ, ಡ್ಯಾಂಗಳು ಎಂಬ ಅಭಿವೃದ್ಧಿಯ ಪ್ರಹಾರಕ್ಕೆ ಸಿಲುಕಿ ಕೇವಲ 8 ಕಿಮಿ ಮಾತ್ರ ಹರಿಯುತ್ತಿದೆ. ಕುಮದ್ವತಿ ನದಿ ಮಳೆಗಾಲದಲ್ಲಿ ಮಾತ್ರ ಹರಿಯುವ ನದಿಯಾಗಿದೆ. ಮಲೆನಾಡಿನಲ್ಲಿ ಸುಮಾರು 75 ಸಾವಿರ ಎಕರೆ ಕಾಡು, ಕೃಷಿ ಭೂಮಿಯಾಗಿ ಪರಿವರ್ತನೆಗೊಂಡಿದೆ. ಒಂದು ಮರ 15 ಸಾವಿರ ಲೀಟರ್ ಹಿಡಿದು ತನ್ನ ಅಂತರ್ಜಲದಲ್ಲಿ ಶೇಖರಣೆ ಮಾಡಿಕೊಳ್ಳುತ್ತದೆ. ಕೃಷಿ ಭೂಮಿಯ ಪರಿವರ್ತನೆಯಿಂದಾಗಿ 20 ಲಕ್ಷ ಕೋಟಿ ನೀರಿನ ಅಂತರ್ಜಲ ಕಳೆದುಕೊಂಡಿದ್ದೇವೆ.
ಮಲೆನಾಡಿನಲ್ಲಿ 500 ಅಡಿ ಆಳಕ್ಕೆ ಕೊಳವೆ ಬಾವಿ ಕೊರೆಯುವ ಅನಿವಾರ್ಯತೆಯಿದೆ. ಸರ್ಕಾರದ ಅಭಿವೃದ್ಧಿ ನೀತಿಗಳು ಬದಲಾಗಬೇಕಿದೆ. ಒಳ್ಳೆಯ ಪರಿಸರ ನೀಡುವುದು ಅಭಿವೃದ್ಧಿ ಎಂಬ ಪರಿಕಲ್ಪನೆಯೇ, ಆಳುವ ಜನಪ್ರತಿನಿಧಿಗಳಿಗಿಲ್ಲ. ಪರಿಸರ ಉಳಿಸುವ ಯಾವ ಯೋಜನೆಗಳು ರೂಪಗೊಂಡಿಲ್ಲ. ನಾಗರೀಕರಾಗಿ ನಾವು ಕೂಡ ಒಂದಿಷ್ಟು ಕಾಡು ಕೊಡಿ ಎಂದು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡುವ ಅನಿವಾರ್ಯತೆ ಇದೆ. ಹೀಗೆ ಪರಿಸರದ ಮೇಲೆ ಅಭಿವೃದ್ಧಿಯ ಪ್ರಹಾರ ಮುಂದುವರೆದಲ್ಲಿ, ಭವಿಷ್ಯದಲ್ಲಿ ತುಂಗೆ, ಶರಾವತಿ ನದಿಗಳು ಸಂಪೂರ್ಣ ನಶಿಸಿ ಹೋಗಲಿದೆ ಎಂದು ಹೇಳಿದರು.
ಪ್ರಕೃತಿ ಉಳಿಸಲು ನಾವೇನು ಮಾಡಬೇಕು ಎಂಬ ವಿಚಾರದ ಬಗ್ಗೆ ಖ್ಯಾತ ಪ್ರಕೃತಿ ತಜ್ಞ ಡಾ.ವಿ.ಎಲ್.ಎಸ್.ಕುಮಾರ್ ಮಾತನಾಡಿ, ಶಿವಮೊಗ್ಗ ನಗರಕ್ಕೆ ಪ್ರವೇಶಿಸುವ ತುಂಗಾ ನದಿ, ಚರಂಡಿ ನೀರಿಗಿಂತ ಕಲುಷಿತವಾಗಿ ಹರಿಯುತ್ತಿದೆ. ಶಿವಮೊಗ್ಗ ನಗರದ ಗಾಳಿ ಅತ್ಯಂತ ಕೆಟ್ಟ ರೂಪದಲ್ಲಿ ವಾಯುಮಾಲಿನ್ಯಗೊಂಡಿದೆ. ದೆಹಲಿ, ಹರಿಯಾಣದಲ್ಲಿ ಹೆಚ್ಚು ಮಾಲಿನ್ಯ ಸೂಸುವ ನಿಷೇಧಗೊಂಡ ವಾಹನಗಳು, ಶಿವಮೊಗ್ಗ ನಗರದಲ್ಲಿ ಅನಾಯಾಸವಾಗಿ ಓಡಾಡುತ್ತಿದೆ. ರಾಸಾಯನಿಕ ಪದಾರ್ಥಗಳ ಗೊಬ್ಬರದ ಬಳಕೆಯಿಂದ ಪರಿಸರ ಸಂಪೂರ್ಣ ಹಾಳಾಗಿದೆ. ತೋಟದ ಸುತ್ತಮುತ್ತ ಅಗಲವಾದ ಎಲೆಗಳ ಮರಗಳನ್ನು ನೆಡಲು ಪ್ರಯತ್ನಿಸಿ. ಅದು ಹೆಚ್ಚು ಆಮ್ಲಜನಕ ಉತ್ಪಾದಿಸುತ್ತದೆ. ಹುಟ್ಟು ಹಬ್ಬದ ದಿನ ಗಿಡಗಳನ್ನು ನೆಡಲು ಆಸಕ್ತರಾಗಿ ಎಂದು ಹೇಳಿದರು.
ಹೊಸ ಕ್ಷೇತ್ರ-ಹೊಸ ಜಿಲ್ಲೆ-ಮಲೆನಾಡ ಒಡಲ ಚಿಂತೆ ಕುರಿತು ಸಾಗರದ ಹಿರಿಯ ನಾಯಕ ಬಿ.ಆರ್.ಜಯಂತ್ ಮಾತನಾಡಿ, ಪರಿಸರ ಕಲುಷಿತಗೊಂಡಿದ್ದು ಕೇವಲ ಅರಣ್ಯ ನಾಶದಿಂದ ಮಾತ್ರವಲ್ಲ. ಆಧುನಿಕತೆಯ ಅನೇಕ ನಡವಳಿಕೆಗಳು ಕಾರಣ. ಸಮೂಹದಲ್ಲಿ ಸ್ವಚ್ಚತೆಯ ಸಂಸ್ಕೃತಿ ಇಲ್ಲದೆ ಇರುವ ನಡವಳಿಕೆಗಳು, ಪರಿಸರ ಮಾಲಿನ್ಯದ ಬಗ್ಗೆ ಹೆಚ್ಚು ಆತಂಕ ಪಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಸ್ವಚ್ಚತೆಯೆ ದೈವತ್ವ ಎಂಬ ಸಂಸ್ಕೃತಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ತೀರ್ಥಹಳ್ಳಿ ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ ನಿರೂಪಿಸಿದರು.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com














