ಶಿವಮೊಗ್ಗ: ಆರೋಗ್ಯ ಭಾರತ ಕಟ್ಟುವಲ್ಲಿ ಯುವಕರ ಪಾತ್ರ ಬಹಳ ದೊಡ್ಡದು ಎಂದು ಭದ್ರಾವತಿ ಸಂಚಾರಿ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ಹಾಲೇಶಪ್ಪ ಎಸ್. ಹೇಳಿದರು.
ಅವರು ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಶ್ರೀಮದ್ ರಂಭಾಪುರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ರೆಡ್ ರಿಬ್ಬನ್ ಘಟಕದ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದನ್ನೂ ಓದಿ > ಮೊಣಕಾಲು ನೋವು ನಿವಾರಣಾ ಶಿಬಿರ, ಎಲ್ಲಿ?, ಯಾವಾಗ?
ಯುವಕರು ಯಾವುದೇ ಭಯ ಮೌಢ್ಯತೆ ಇಲ್ಲದೆ ರಕ್ತದಾನಕ್ಕೆ ಮುಂದಾಗಬೇಕು. ತಲಸೇಮಿಯ, ಅಪಘಾತ, ಹೆರಿಗೆ, ಹೃದಯ ಶಸ್ತ್ರ ಚಿಕಿತ್ಸೆ ಸಮಯದಲ್ಲಿ ರೋಗಿಗಳಿಗೆ ಹೆಚ್ಚಿನ ರಕ್ತ ಬೇಕಾಗುತ್ತದೆ. ಹಾಗಾಗಿ ರಕ್ತದಾನ ನಿರಂತರವಾಗಿ ನಡೆಯುತ್ತಲೇ ಇರಬೇಕು ಎಂದರು.
ರಕ್ತ ಸಂಬಂಧಗಳಲ್ಲಿ ಮದುವೆ ಆಗುವುದರಿಂದ ಪೋಷಕರಲ್ಲಿರುವ ದೋಷಪೂರಿತ ಜೀನ್ಗಳು ಮಗುವಿಗೆ ಹರಡಿ, ಆನುವಂಶಿಕ ಕಾಯಿಲೆಗಳು ಉಂಟಾಗುತ್ತವೆ. ಮಕ್ಕಳು ಹುಟ್ಟಿನಿಂದಲೇ ಬುದ್ಧಿಮಾಂದ್ಯತೆ, ಮೂಕ-ಕಿವುಡುತನ, ಅಥವಾ ದೈಹಿಕ ಅಂಗವೈಕಲ್ಯ ಎದುರಿಸಬಹುದು. ತಲಸೇಮಿಯಾ ಮತ್ತು ಸಿಕ್ಲ್ ಸೆಲ್ ಅನಿಮಿಯಾ ನಂತಹ ಗಂಭೀರ ರಕ್ತ ಸಂಬಂಧಿ ರೋಗಗಳು ಬರುವ ಅಪಾಯವಿದೆ. ಪದೇ ಪದೇ ಗರ್ಭಪಾತವಾಗುವುದು ಅಥವಾ ಸತ್ತ ಮಗು ಜನಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹುಟ್ಟುವ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ, ಸಣ್ಣ ಸೋಂಕುಗಳಿಗೂ ಮಗು ದೀರ್ಘಕಾಲದವರೆಗೆ ಅನಾರೋಗ್ಯಕ್ಕೆ ತುತ್ತಾಗಬಹುದು ಎಂದು ರಕ್ತ ಸಂಬಂಧಿ ಖಾಯಿಲೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಇದನ್ನೂ ಓದಿ > ಶಿವಮೊಗ್ಗ, ಜೆ.ಎನ್.ಎನ್.ಸಿ.ಇ ಕಾಲೇಜಿನಲ್ಲಿ 5 ದಿನಗಳ ಎಐಸಿಟಿಇ ‘ಬೂಟ್ ಕ್ಯಾಂಪ್’, ಯಾವಾಗ?
ಕಾರ್ಯಕ್ರಮದಲ್ಲಿ ಭದ್ರಾವತಿಯ ಸಾರ್ವಜನಿಕ ಆಸ್ಪತ್ರೆಯ ಆಪ್ತಸಮಲೋಚಕ ಲತೇಶ್ ಕುಮಾರ್, ಶ್ರೀಮದ್ ರಂಭಾಪುರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಮುತ್ತಯ್ಯ ಎಸ್.ಎಂ., ಕಾಲೇಜಿನ ರೆಡ್ ರಿಬ್ಬನ್ ಘಟಕದ ನಾಗರಾಜ್ ಸೇರಿದಂತೆ ಹಲವರಿದ್ದರು.















