ಶಿವಮೊಗ್ಗ : ಗುಡ್ ಫ್ರೈಡೇ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡವರ ಮೇಲೆ ಹೆಜ್ಜೇನು ದಾಳಿ ನಡೆಸಿರುವ ಘಟನೆ ನಗರದ ಬಿ.ಎಚ್.ರಸ್ತೆಯ ಸೇಕ್ರೆಡ್ ಹಾರ್ಟ್ ಪ್ರಧಾನ ಚರ್ಚ್ನ ಆವರಣದಲ್ಲಿ ನಡೆದಿದೆ.
ಹೆಜ್ಜೇನು ದಾಳಿಯಿಂದ 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಚರ್ಚ್ನ ಫಾದರ್ ನೇತೃತ್ವದಲ್ಲಿ ಚರ್ಚ್ ಆವರಣದ ಶಿಲುಬೆಯ ಹಾದಿಯಲ್ಲಿ ಮಧ್ಯಾಹ್ನ 3 ಗಂಟೆಗೆ ವಿಶೇಷ ಪ್ರಾರ್ಥನೆ ಆರಂಭವಾಗಿತ್ತು. ಈ ಸಂದರ್ಭದಲ್ಲಿ ಚರ್ಚ್ ಬಳಿಯ ಕಲ್ಯಾಣಮಂಟಪದ ಬಳಿ ಕೆಲವರ ಮೇಲೆ ಏಕಾಏಕಿ ಹೆಜ್ಜೆನು ದಾಳಿ ನಡೆಸಿವೆ. ನಂತರ ಚರ್ಚ್ನ ಆವರಣಕ್ಕೆ ಬಂದಿವೆ. ಗುಡ್ ಫ್ರೈಡೇ ಪ್ರಯುಕ್ತ 800ಕ್ಕೂ ಹೆಚ್ಚು ಭಕ್ತರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಹೆಚ್ಚು ಜನರು ಜೇನು ಕಡಿತಕ್ಕೆ ತುತ್ತಾಗಿದ್ದಾರೆ.
ಇದನ್ನೂ ಓದಿ > ಶಿವಮೊಗ್ಗ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕನಿಗೆ 2 ವರ್ಷ ಜೈಲು, ಏನಿದು ಪ್ರಕರಣ?
ಸೇಕ್ರೆಡ್ ಹಾರ್ಟ್ ಚರ್ಚ್ನ ಕಟ್ಟಡ ಪಾರಂಪರಿಕವಾಗಿದೆ, ಅದರ ಗೋಪುರ ಹಾಗೂ ಪಕ್ಕದ ಮೇರಿ ಮ್ಯಾಕಲೇಟ್ ಶಾಲೆಯ ಛಾವಣಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಜ್ಜೇನು ಗೂಡುಕಟ್ಟಿವೆ. ಜೇನು ಕಡಿತದಿಂದ ಪಾರಾಗಲು ಬಹಳಷ್ಟು ಮಂದಿ ಚರ್ಚ್ನ ಪ್ರಾರ್ಥನಾ ಹಾಲ್ ಹಾಗೂ ಕೊಠಡಿಗಳ ಒಳಗೆ ಆಶ್ರಯ ಪಡೆದರು. ಅಲ್ಲಿಗೂ ಜೇನು ಹಿಂಡು ನುಗ್ಗಿದೆ. ಈ ವೇಳೆ ಚರ್ಚ್ ಸುತ್ತಲೂ ತೆಂಗಿನ ಗರಿ, ಭತ್ತದ ಹುಲ್ಲಿನ ಹೊಗೆ ಹಾಕಿ ಜೇನು ಹುಳುಗಳಿಂದ ರಕ್ಷಣೆ ಪಡೆಯುವ ಕೆಲಸವೂ ನಡೆಯಿತು. ಧ್ವನಿವರ್ಧಕ ತೆಗೆದು ಹಾಗೆಯೇ ಪ್ರಾರ್ಥನೆ ಮುಂದುವರೆಸಲಾಯಿತು.
ಗಾಯಾಳುಗಳನ್ನು ಸ್ಥಳೀಯರು ಆಟೊರಿಕ್ಷಾ, ಕಾರು ಹಾಗೂ ಆಂಬುಲೆನ್ಸ್ಗಳಲ್ಲಿ ಆಸ್ಪತ್ರೆಗೆ ಕರೆದೊಯ್ದರು. ಗಾಯಾಳುಗಳ ಪೈಕಿ ಆರು ಮಂದಿ ಸ್ಥಿತಿ ಗಂಭೀರವಾಗಿದೆ. ಹಿಂದಿನ ದಿನ ಪಕ್ಕದ ಮೇರಿ ಮ್ಯಾಕಲೇಟ್ ಶಾಲೆಯ ಮೇಲ್ಛಾವಣಿ ಬಳಿ ಕಟ್ಟಿದ್ದ ಜೇನು ಹುಟ್ಟುಗಳನ್ನು ಮುಂಜಾಗರೂಕತಾ ಕ್ರಮವಾಗಿ ತೆಗೆಸಲಾಗಿತ್ತು ಎಂದು ತಿಳಿದುಬಂದಿದೆ.















