ಶಿವಮೊಗ್ಗ: ಆಹಾರ ಉದ್ಯಮಗಳಲ್ಲಿ ಆಹಾರ ಸುರಕ್ಷತೆ, ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದ ಲೋಪದೋಷಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ. ಮೈತ್ರಿ, ತಹಶೀಲ್ದಾರ್ ರಾಜೀವ್ ಅವರ ನೇತೃತ್ವದ ತಂಡ ನಗರದ ವಿವಿಧ ಹೋಟೆಲ್ಗಳು, ಹಾಸ್ಟೇಲ್ ಹಾಗೂ ಆಹಾರ ತಯಾರಿಕಾ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.
ವಿಶೇಷ ಆಹಾರ ಸುರಕ್ಷತಾ ತಪಾಸಣಾ ಅಭಿಯಾನದ ಅಂಗವಾಗಿ ನಡೆದ ಈ ಪರಿಶೀಲನೆಯಲ್ಲಿ, ಸಾರ್ವಜನಿಕರ ಸೇವನೆಗೆ ಯೋಗ್ಯವಾದ ಆಹಾರ ಪದಾರ್ಥಗಳನ್ನು ತಯಾರಿಸಿ, ಸಂಗ್ರಹಿಸಿ ಹಾಗೂ ಮಾರಾಟ ಮಾಡುತ್ತಿರುವ ಸ್ಥಳಗಳಲ್ಲಿನ ವ್ಯವಸ್ಥೆಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೋಟೆಲ್ ಉದ್ಯಮಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರಿಗೆ ಸೂಚನೆ ನೀಡಿದರು.
ಇದನ್ನೂ ಓದಿ > > ಸೆ.1ರಿಂದ ನಂಜಪ್ಪ ಲೈಫ್ ಕೇರ್ನಲ್ಲಿ ಮಂಡಿನೋವು ಉಚಿತ ತಪಾಸಣೆ ಶಿಬಿರ, ಶೇ 20 ರಷ್ಟು ವಿಶೇಷ ರಿಯಾಯಿತಿ!
ಅವಧಿ ಮೀರಿದ ಹಾಗೂ ಬಳಕೆಗೆ ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನು ತಕ್ಷಣ ಪ್ರತ್ಯೇಕಿಸಿ, ಅವುಗಳನ್ನು ಯಾವುದೇ ರೀತಿಯಲ್ಲೂ ತಯಾರಿಕೆ ಅಥವಾ ಮಾರಾಟದಲ್ಲಿ ಬಳಸದಂತೆ ಸೂಕ್ತವಾಗಿ ವಿಲೇವಾರಿ ಮಾಡಬೇಕು ಎಂದು ಉಪವಿಭಾಗಾಧಿಕಾರಿ ಡಾ. ಮೈತ್ರಿ ಸೂಚಿಸಿದರು.
ಆಹಾರ ಪದಾರ್ಥಗಳನ್ನು ಸೂಕ್ತ ತಾಪಮಾನದಲ್ಲಿ ಸ್ವಚ್ಛ ಹಾಗೂ ಆಹಾರ ಸುರಕ್ಷಿತ ಕಂಟೇನರ್ಗಳಲ್ಲಿ ಸಂಗ್ರಹಿಸಬೇಕು. ಅಡುಗೆಮನೆ, ಆಹಾರ ತಯಾರಿಕಾ ಸ್ಥಳ ಹಾಗೂ ಸಂಗ್ರಹಣಾ ಪ್ರದೇಶಗಳನ್ನು ಸ್ವಚ್ಛ ಮತ್ತು ಶುಷ್ಕ ವಾತಾವರಣದಲ್ಲಿ ನಿರ್ವಹಿಸಬೇಕು ಎಂದು ತಿಳಿಸಿದರು.
ಹಾಲು, ಮಾಂಸ, ಮೊಟ್ಟೆ ಹಾಗೂ ಸಿದ್ಧ ಆಹಾರಗಳನ್ನು ನಿಗದಿತ ತಾಪಮಾನದಲ್ಲಿ ಸಂಗ್ರಹಿಸುವುದರ ಜೊತೆಗೆ ರೆಫ್ರಿಜರೇಟರ್, ಕೂಲರ್ ಸೇರಿದಂತೆ ತಾಪಮಾನ ನಿಯಂತ್ರಣ ಸಾಧನಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚಿಸಿದರು. ಆಹಾರ ಸಂರಕ್ಷಣೆ ಹಾಗೂ ಕುಡಿಯುವ ನೀರಿನ ಗುಣಮಟ್ಟದ ಬಗ್ಗೆಯೂ ಸೂಕ್ತ ಗಮನ ಹರಿಸಬೇಕು ಎಂದರು.
ಇದನ್ನೂ ಓದಿ > > ಜೆ.ಎನ್.ಎನ್.ಸಿ.ಇ ಕಾಲೇಜಿನಲ್ಲಿ ‘ಅಭಿವಿನ್ಯಾಸ’ ಕಾರ್ಯಕ್ರಮ, ವಿದ್ಯಾರ್ಥಿಗಳನ್ನು ಸ್ವಾಗತಿಸಿದ ರೋಬೋ!
ಆಹಾರ ನಿರ್ವಹಿಸುವ ಸಿಬ್ಬಂದಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಬೇಕು. ಸುರಕ್ಷಿತ ಆಹಾರ ನಿರ್ವಹಣಾ ವಿಧಾನಗಳ ಕುರಿತು ಅಗತ್ಯ ತರಬೇತಿಯನ್ನೂ ನೀಡಬೇಕು ಎಂದು ಅಧಿಕಾರಿಗಳು ಸೂಚಿಸಿದರು.
ಹತ್ತು ದಿನಗಳ ಗಡುವು
ತಪಾಸಣೆಯ ವೇಳೆ ಕಂಡುಬಂದಿರುವ ಲೋಪದೋಷಗಳನ್ನು ಹತ್ತು ದಿನಗಳೊಳಗೆ ಸರಿಪಡಿಸಿಕೊಳ್ಳಬೇಕು. ತಪ್ಪಿದಲ್ಲಿ ಆಹಾರ ಸುರಕ್ಷತಾ ಮಾನದಂಡಗಳ ಅನ್ವಯ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಡಾ. ಮೈತ್ರಿ ಅವರು ಹೋಟೆಲ್ ಉದ್ಯಮಿಗಳಿಗೆ ಎಚ್ಚರಿಕೆ ನೀಡಿದರು.
ತಪಾಸಣಾ ತಂಡವು ಹೋಟೆಲ್ ಹರ್ಷ ಫರ್ನ್, ನಿರಾಶ್ರಿತರ ಪರಿಹಾರ ಕೇಂದ್ರ ತಾವರೆಕೊಪ್ಪ, ವಿನೋಬನಗರದ ಸವಿ ಬೇಕರಿ ಹಾಗೂ ಗಾಂಧಿನಗರದ ವಿಧಾತ್ರಿ ಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಇದನ್ನೂ ಓದಿ > > 2028ರ ಚುನಾವಣೆಗೆ ಈಶ್ವರಪ್ಪ ಕುಟುಂಬ ಸಜ್ಜು; ಶಿವಮೊಗ್ಗ ನಗರದಿಂದ ಸ್ಪರ್ಧೆ ಶೇ.100 ಖಚಿತ!
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಡಾ. ಮೈತ್ರಿ ಅವರೊಂದಿಗೆ ತಾಲೂಕು ದಂಡಾಧಿಕಾರಿ ವಿ.ಎಸ್. ರಾಜೀವ್, ತಾಲೂಕು ಆರೋಗ್ಯಾಧಿಕಾರಿ ಚಂದ್ರಶೇಖರ್, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಸಿಬ್ಬಂದಿ, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.














