ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಹ ಕಾರ್ಯದರ್ಶಿಗಳಾದ ಡಾ. ಪಿ. ನಾರಾಯಣ್ ಮಾತನಾಡಿ, ಪಶ್ಚಿಮ ಘಟ್ಟಗಳ ಸಂರಕ್ಷಣೆ ಕೇವಲ ಒಂದು ದಿನದ ಸಂವಾದಕ್ಕೆ ಸೀಮಿತವಾಗಬಾರದು. ನಿರಂತರವಾಗಿ ಪರಿಸರ ಸಂರಕ್ಷಣೆಯ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಯುವಜನರಲ್ಲಿ ಜಾಗೃತಿ ಮೂಡಿಸಬೇಕು.
ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ನಾಶ, ಅಕ್ರಮ ಗಣಿಗಾರಿಕೆ, ಅತಿಯಾದ ರಸ್ತೆ ನಿರ್ಮಾಣ, ಪ್ರವಾಸೋದ್ಯಮದ ಒತ್ತಡ, ಅರಣ್ಯ ಪ್ರದೇಶಗಳ ಒತ್ತುವರಿ ಹಾಗೂ ಅಸಮರ್ಪಕ ನಿರ್ಮಾಣ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಇವು ಮುಂದುವರಿದರೆ ನೀರಿನ ಕೊರತೆ, ಮಣ್ಣಿನ ಸವಕಳಿ, ಭೂಕುಸಿತ, ಪ್ರವಾಹ, ಬರ, ತಾಪಮಾನ ಏರಿಕೆ ಹಾಗೂ ಜೀವವೈವಿಧ್ಯದ ನಾಶದಂತಹ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಹೊಸನಗರ ತಾಲ್ಲೂಕಿನ ಸಾರ ಸಂಸ್ಥೆಯ (SARA Centre) ಪ್ರಮುಖ ಸಂಚಾಲಕರಾದ ಧನುಷ್ ಕುಮಾರ್ ಮಾತನಾಡಿ, ಪಶ್ಚಿಮ ಘಟ್ಟಗಳ ಸಂರಕ್ಷಣೆ ಅಭಿವೃದ್ಧಿಗೆ ವಿರೋಧವಲ್ಲ. ಪ್ರಕೃತಿಯನ್ನು ನಾಶಪಡಿಸದೆ ಅಭಿವೃದ್ಧಿ ಸಾಧಿಸುವುದೇ ನಿಜವಾದ ಅಭಿವೃದ್ಧಿ. ರಸ್ತೆ, ಪ್ರವಾಸೋದ್ಯಮ, ಉದ್ಯೋಗ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿ ಅಗತ್ಯವಾದರೂ ಪರಿಸರದ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಬೇಕು ಎಂದರು.
ಸಾರ ಸಂಸ್ಥೆಯ ಮತ್ತೋರ್ವ ಸಂಚಾಲಕರಾದ ಅಜಯ್ ಕುಮಾರ್ ಶರ್ಮ ಮಾತನಾಡಿ, ಪಶ್ಚಿಮ ಘಟ್ಟಗಳನ್ನು ಕೇವಲ ನಮ್ಮ ಆಸ್ತಿಯೆಂದು ಪರಿಗಣಿಸದೆ, ಮುಂದಿನ ಪೀಳಿಗೆಯಿಂದ ನಾವು ಪಡೆದಿರುವ ಅಮೂಲ್ಯ ಜವಾಬ್ದಾರಿ ಎಂದು ಭಾವಿಸಬೇಕು. ನಮ್ಮ ಅಭಿವೃದ್ಧಿ ಪ್ರಕೃತಿಯ ವಿರುದ್ಧವಾಗಿರದೆ, ಪ್ರಕೃತಿಯೊಂದಿಗೆ ಕೈಜೋಡಿಸಿದ ಅಭಿವೃದ್ಧಿಯಾಗಬೇಕು ಎಂದು ಹೇಳಿದರು.
ಪಶ್ಚಿಮ ಘಟ್ಟಗಳ ಸಂರಕ್ಷಣೆಯಲ್ಲಿ ಸರ್ಕಾರದ ಪಾತ್ರ ಎಷ್ಟು ಮುಖ್ಯವೋ, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಅಷ್ಟೇ ಮುಖ್ಯ. ವಿದ್ಯಾರ್ಥಿಗಳು, ಯುವಕರು, ರೈತರು, ಪ್ರವಾಸಿಗರು, ಸ್ಥಳೀಯ ಸಮುದಾಯಗಳು, ಸಂಘ-ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕು. ಕಾಡಿನಲ್ಲಿ ಕಸ ಎಸೆಯದಿರುವುದು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಮರಗಳನ್ನು ಬೆಳೆಸುವುದು, ಜಲಮೂಲಗಳನ್ನು ರಕ್ಷಿಸುವುದು ಹಾಗೂ ಅಕ್ರಮ ಚಟುವಟಿಕೆಗಳನ್ನು ತಡೆಯಲು ಸಹಕರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ > > ಸದ್ಯದಲ್ಲೇ ರಾಜ್ಯದಲ್ಲಿ ಬಿಜೆಪಿ ರಿಪೇರಿ ಆಗುತ್ತೆ, ರಾಜಕಾರಣಿಗಳು ಸನ್ಯಾಸಿಗಳಲ್ಲ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ














