ಶಿವಮೊಗ್ಗ: ಬರ ಪೀಡಿತ ತಾಲೂಕಿನ ರೈತರಿಗೆ ಜೀವನಾಂಶಕ್ಕೆ ಒಂದು ವರ್ಷದ ವರೆಗೆ ಮಾಸಿಕ 10 ಸಾವಿರ ರೂ. ಹಾಗೂ ರಾಜ್ಯದ ಎಲ್ಲ ರೈತರ ಸಾಲ ಮನ್ನಾ ಮಾಡಬೇಕು ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ಎಂ. ನಿಂಬೆಗೊಂದಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಕೇವಲ 101 ತಾಲೂಕುಗಳನ್ನು ಮಾತ್ರ ಬರ ಪೀಡಿತ ತಾಲೂಕುಗಳೆಂದು ಘೋಷಿಸಿದೆ. ಮಳೆ ಇಲ್ಲದೆ ಭೀಕರ ಬರಗಾಲ ಪೀಡಿತ ಕಲಬುರಗಿ, ಬೀದರ್, ಹಾವೇರಿ, ಹಾಗೂ ಶಿವಮೊಗ್ಗದ ಭದ್ರಾವತಿ, ಶಿವಮೊಗ್ಗ ಗ್ರಾಮಾಂತರ ಹಾಗೂ ಹಾವೇರಿ ಜಿಲ್ಲೆಗೆ ಹೊಂದಿಕೊಂಡಿರುವ ಜಿಲ್ಲೆಯ ಪ್ರದೇಶಗಳನ್ನೇ ಕೈಬಿಟ್ಟಿದೆ. ಸಂವೇದನಾಶೀಲತೆಯನ್ನು ಕಳೆದುಕೊಂಡ ಸರ್ಕಾರ ರೈತ ವಿರೋಧಿಯಾಗಿದೆ. ದೇಶದ ಗಡಿ ಕಾಯುವ ಯೋಧರಷ್ಟೇ ಮಹತ್ವ ದೇಶದ ಬೆನ್ನೆಲುಬಾದ ರೈತ ಎಂಬುದನ್ನು ಕಾಂಗ್ರೆಸ್ ಮರೆತಿದೆ ಎಂದು ಟೀಕಿಸಿದರು.
ಶಿವಮೊಗ್ಗ ಡಿಸಿಯವರೂ ಜಿಲ್ಲೆಯ ಬರ ಪೀಡಿತ ತಾಲೂಕುಗಳ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದರು. ಅಲ್ಲದೆ ಬಿಜೆಪಿಯ ಹಿರಿಯ ನಾಯಕರೂ ಪಕ್ಷದ ರೈತ ಮೋರ್ಚಾದವರೊಡನೆ ಬರ ಪೀಡಿತ ಸ್ಥಳಗಳಿಗೆ ತೆರಳಿ ಅಧ್ಯಯನ ಮಾಡಿ ವರದಿ ಸಲ್ಲಿಸಿದ್ದರು. ಆದರೂ ಯಾವ ಮಾನದಂಡದ ಆಧಾರದ ಮೇಲೆ ಸರ್ಕಾರ ಬರ ಪೀಡಿತ ತಾಲೂಕುಗಳ ಘೋಷಣೆ ಮಾಡಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ > > ಸೆ.1ರಿಂದ ನಂಜಪ್ಪ ಲೈಫ್ ಕೇರ್ನಲ್ಲಿ ಮಂಡಿನೋವು ಉಚಿತ ತಪಾಸಣೆ ಶಿಬಿರ, ಶೇ 20 ರಷ್ಟು ವಿಶೇಷ ರಿಯಾಯಿತಿ!
ಬರ ಪೀಡಿತ ತಾಲೂಕುಗಳ ಘೋಷಣಾ ಪಟ್ಟಿಯನ್ನು ಮರು ಪರಿಶೀಲಿಸುವಂತೆ ಆಗ್ರಹಿಸಿದ ಅವರು, ಮುಂದಿನ ದಿನಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಎದುರಾಗಲಿದೆ. ನೀರಿನ ಮೇಲೆ ಅವಲಂಬಿತ ಬೆಳೆ ಬೆಳೆಯಬೇಡಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೈತರಿಗೆ ಸಲಹೆ ನೀಡಿದ್ದು ಸಿ.ಎಂ.ಅವರ ಬಾಲಿಶ ಹೇಳಿಕೆಗೆ ಸಾಕ್ಷಿ ಎಂದು ಕಿಡಿ ಕಾರಿದ ಅವರು ಜಿಲ್ಲೆಯಲ್ಲಿ ಮಳೆ ಮಾಪನ ಕೇಂದ್ರಗಳು ಸಂಪೂರ್ಣ ದುರಸ್ತಿಯಾಗಿವೆ ಎಂದು ಡಿಸಿ ಹೇಳಿದ್ದಾರೆ. ಆದರೆ ಬೆಳೆ ವಿಮೆ ಸಮರ್ಪಕವಾಗಿ ಬರುತ್ತಿಲ್ಲ. ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಗೋ ಸಂರಕ್ಷಕರಿದ್ದಾರೆ. ಅವರಿಗೆ ಮೇವು ಒದಗಿಸಬೇಕು. ಎಲೆ ಚುಕ್ಕೆ, ಕೊಳೆ ರೋಗ ಬಾಧಿತರಿಗೆ ರೈತ ಕಿಟ್ಟನ್ನು ನೀಡಬೇಕು. ಕೇಂದ್ರ ಸರ್ಕಾರದ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ನೀಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಗಣೇಶ್ ಬಿಳಕಿ, ಕುಮಾರ್ ನಾಯ್ಡುರುದ್ರೇಶ್, ಕಿರಣ್, ಚಂದ್ರಶೇಖರ್ ಎಸ್, ಮಂಜುನಾಥ್ ಎನ್ ಉಪಸ್ಥಿತರಿದ್ದರು.














